ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕನ್ನಡ ನಾಡು-ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನಡೆಯುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆ. ಕನ್ನಡ ಸಾಹಿತ್ಯದ ಮಹತ್ವವನ್ನು ಸಾರುವ ಈ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಹೇಳಿದರು.
ನಗರದ ಕನ್ನಡಾಂಬೆ ವೃತ್ತದಲ್ಲಿ ಮಂಡ್ಯದಲ್ಲಿ ನಡೆಯುವ ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜ್ಯೋತಿ ರಥವನ್ನ ತಾಲೂಕು ಆಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಭವ್ಯವಾಗಿ ಬರಮಾಡಿಕೊಂಡು ಮಾತನಾಡಿದ ಅವರು, ಕನ್ನಡ ಕೇವಲ ಭಾಷೆಯಲ್ಲ. ತನ್ನದೇ ಆದ ನೆಲ, ಜಲ, ಸಂಸ್ಕೃತಿಯ ಹಿರಿಮೆಯನ್ನು ಒಳಗೊಂಡಿದೆ. ಮಂಡ್ಯದಲ್ಲಿ ನಡೆಯುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಅಶೋಕ ಅಲ್ಲಾಪುರ, ಶೋಭಾ ಚಿಗರಿ ಮಾತನಾಡಿ, ಡಿ.೨೦ ರಿಂದ ೨೨ರವರೆಗೆ ನಡೆಯುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥವು ೮೭ ದಿನಗಳ ಕಾಲ ರಾಜ್ಯದ ೨೪೦ ತಾಲ್ಲೂಕುಗಳಲ್ಲಿ ಸಂಚರಿಸಲಿದೆ. ಈ ರಥಯಾತ್ರೆಯ ಮೂಲಕ ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವ ಮತ್ತು ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ ಎಂದರು.
ಕನ್ನಡ ರಥವನ್ನು ಪಟ್ಟಣದ ಕನ್ನಡಾಂಬೆಯ ವೃತ್ತದಲ್ಲಿ ಪುಷ್ಪಾರ್ಚನೆ, ಆರತಿ ಮಾಡಿ ಬರಮಾಡಿಕೊಂಡು ಬಸವೇಶ್ವರ ವೃತ್ತ, ಸ್ವಾಮಿ ವಿವೇಕಾನಂದ ವೃತ್ತದ ಮಾರ್ಗವಾಗಿ ಸಕಲ ಬೀದಿಗಳಲ್ಲಿ ಡೊಳ್ಳು ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ ಸಂಚರಿಸಿ ಕನಕದಾಸ ವೃತ್ತಕ್ಕೆ ಬಂದು ತಲುಪಿತು. ಅಲ್ಲಿಂದ ಮುಂದಿನ ಯಡ್ರಾಮಿ ತಾಲೂಕಿಗೆ ಮಾಜಿ ಶಾಸಕ ರಮೇಶ ಭೂಸನೂರ ಬೀಳ್ಕೊಟ್ಟರು.
ಕತ್ತಲ್ಲಲ್ಲಿ ಸಾಗಿದ ಕನ್ನಡಮ್ಮನ ರಥ
ದಾರಿ ಉದ್ದಕ್ಕೂ ಕನ್ನಡಮ್ಮನ ರಥವು ಕಗ್ಗತ್ತಲಲ್ಲೇ ಸಾಗಿ ಬಂದಿತು. ಇದರಿಂದ ಸಾರ್ವಜನಿಕರು ಕನ್ನಡಮ್ಮ ಮೆರವಣಿಗೆ ಕತ್ತಲಲ್ಲಿ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದರು. ಹೆಸ್ಕಾಂ ಇಲಾಖೆಗೆ ಸಂಪರ್ಕಿಸಿದರೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು.
ಅಧಿಕಾರಿಗಳು ಗೈರು
ಕನ್ನಡ ನಾಡು, ನುಡಿ, ಜಲ, ಕನ್ನಡದ ಕಂಪನವನ್ನು ಸುಸುವ ಮಂಡ್ಯದಲ್ಲಿ ನಡೆಯುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಥವು ಸಿಂದಗಿ ನಗರಕ್ಕೆ ಆಗಮಿಸಿದಾಗ ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು, ಸಿಡಿಪಿಒ ಇಲಾಖೆ, ಪೊಲೀಸ್ ಇಲಾಖೆ, ಪುರಸಭೆ ಇಲಾಖೆ ಹೊರತುಪಡಿಸಿ ಮುಂಚೂಣಿಯಲ್ಲಿರಬೇಕಾದ ತಾಲೂಕಿನ ಬಹುತೇಕ ಅಧಿಕಾರಿಗಳು ಗೈರಾಗಿದ್ದು ಎದ್ದು ಕಾಣುತಿತ್ತು.
ಇದೇ ಸಂದರ್ಭದಲ್ಲಿ ಊರಿನ ಹಿರಿಯಮಠದ ಶಿವಾನಂದ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ್, ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಉಪ ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ, ಕಂದಾಯ ನಿರೀಕ್ಷಕ ಆಯ್.ಎ.ಮಕಾಂದಾರ, ನಿಖಿಲ ಖಾನಾಪುರ, ಚಂದ್ರಶೇಖರ ದೇವರೆಡ್ಡಿ, ಎಂ.ಎಂ.ಹಂಗರಗಿ, ಸಂತೋಷ ಪಾಟೀಲ ಡಂಬಳ, ಆನಂದ ಶಾಬಾದಿ, ಪಂಡಿತ ಯಂಪುರೆ, ಸುನಂದಾ ಯಂಪುರೆ, ಸೈನಾಬಿ ಮಸಳಿ, ಜಯಶ್ರೀ ಹದ ನೂರ, ಶರಣಬಸವ ಲಂಗೋಟಿ, ಎ.ಕೆ.ಬಿರಾದಾರ, ಸಿದ್ದು ಬುಳ್ಳಾ, ರಮೇಶ ಯಾಳಗಿ, ಸಂಗನಗೌಡ ಪಾಟೀಲ ಅಗಸಬಾಳ, ಎಂ.ಎಂ.ಚಟ್ಟರಕಿ, ಸಿಡಿಪಿಒ ಶಂಭುಲಿಂಗ ಹಿರೇಮಠ, ಶಿವಾನಂದ ಕಲಬುರಗಿ, ಎಸ್.ಬಿ.ಖಾನಾಪುರ, ಸಂತೋಷ ಮನಗೂಳಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕನ್ನಡದ ಮನಸ್ಸುಗಳು ಈ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

