ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುಂಬರುವ ಹಿಂದೂಗಳ ಪವಿತ್ರ ವಿಜಯ ದಶಮಿ, ದೀಪಾವಳಿ ಮತ್ತಿತರೆ ಹಬ್ಬಗಳ ಪಾವಿತ್ರ್ಯತೆಯನ್ನು ಕಾಪಾಡುವ ಮಹತ್ತರ ಉದ್ದೇಶದಿಂದ ಹಿಂದೂ ದೇವರನ್ನು ಆರಾಧಿಸುವ ಹಿಂದೂಗಳ ಹತ್ತಿರವೇ ಹೂ, ಹಣ್ಣು, ಕಾಯಿ, ಕರ್ಪೂರ, ಕುಂಕುಮ ಮತ್ತಿತರೆ ಪೂಜಾ ಸಾಮಾಗ್ರಿಗಳನ್ನು ಖರೀದಿಸಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕರೆ ನೀಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಿಂದೂ ವ್ಯಾಪಾರಿಗಳು ಕೂಡ ಹಿಂದೂಗಳ ಪ್ರತಿಯೊಂದು ಹಬ್ಬಗಳನ್ನು ಮಡಿವಂತಿಕೆ, ಭಕ್ತಿಯಿಂದ ಪೂಜೆ ಸಲ್ಲಿಸಿ, ನಮ್ಮ ದೇವರುಗಳನ್ನು ಆರಾಧಿಸುತ್ತಾರೆ. ಈ ರೀತಿ ಹಣೆಗೆ ಕುಂಕುಮ ಹಚ್ಚಿಕೊಂಡು ವ್ಯಾಪಾರ ಮಾಡುವ ಹಿಂದೂಗಳ ಹತ್ತಿರವೇ ಪೂಜಾ ಸಾಮಾಗ್ರಿಗಳನ್ನು ಖರೀದಿಸುವುದರಿಂದ, ನಮ್ಮ ಹಬ್ಬಗಳ ಪಾವಿತ್ರ್ಯತೆ ಕಾಪಾಡಿಕೊಂಡು, ಮಡಿವಂತಿಕೆಯಿಂದ, ಧರ್ಮಾನುಸಾರವಾಗಿ ನಡೆದುಕೊಳ್ಳುವ ಜೊತೆಗೆ ಭಗವಂತನ ಕೃಪೆಗೆ ಪಾತ್ರರಾಗಲು ನೆರವಾಗುತ್ತದೆ.
ಪವಿತ್ರ ಹಿಂದೂ ಧರ್ಮದ ಬಗ್ಗೆ ಗೌರವವಿಲ್ಲದ, ಹಿಂದೂ ದೇವರನ್ನು ನಂಬದ, ಹಿಂದೂಗಳನ್ನು ವಿರೋಧಿಸುವರು ಅಲ್ಲಿಯೇ ತಮ್ಮ ಬುತ್ತಿಯಲ್ಲಿ ಮಾಂಸಾಹಾರ ತಂದು ತಿಂದು ಅಥವಾ ಮನೆಯಲ್ಲಿ ಮಾಂಸಾಹಾರ ತಿಂದು ಬಂದು, ಅಶುದ್ಧತೆಯಿಂದ ವ್ಯಾಪಾರ ಮಾಡುವವರ ಹತ್ತಿರ ಯಾವುದೇ ಕಾರಣಕ್ಕೂ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಳ್ಳಬಾರದು. ಅಂತವರ ಹತ್ತಿರ ಖರೀದಿಸಿದ ವಸ್ತುಗಳಿಂದ, ನಾವು ಪೂಜಿಸುವ ಭಗವಂತನ ಪೂಜೆಯು ಅಪವಿತ್ರತೆಯಿಂದ ಕೂಡಿ, ನಾವು ಭಗವಂತನ ಕೃಪೆಗೆ ಪಾತ್ರರಾಗುವುದಿಲ್ಲ.
ಹಿಂದೂಗಳು ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಬಳಸುವ ಮತ್ತು ನಮ್ಮ ಧರ್ಮದಲ್ಲಿ ಅತ್ಯಂತ ಶ್ರೇಷ್ಠ ಮಹತ್ವ ಪಡೆದಿರುವ ಕುಂಕುಮವನ್ನು ಪ್ರತಿಯೊಬ್ಬ ಹಿಂದೂ ವ್ಯಾಪಾರಿ ಹಣೆಗೆ ಹಚ್ಚಿಕೊಂಡೇ ವ್ಯಾಪಾರ ಮಾಡಬೇಕು. ಇಂತಹ ಕುಂಕುಮ ಹಚ್ಚಿಕೊಂಡು ವ್ಯಾಪಾರ ಮಾಡುವ ಹಿಂದೂ ಬಾಂಧವರ ಹತ್ತಿರವೇ ನಾವು ನಮ್ಮ ಹಬ್ಬಗಳಿಗೆ ಅವಶ್ಯವಿರುವ ಹೂ, ಹಣ್ಣು, ಹಾರ, ಕಾಯಿ, ಕರ್ಪೂರ ಇತ್ಯಾದಿ ಸಾಮಾಗ್ರಿಗಳನ್ನು ಖರೀದಿಸಬೇಕು. ಇದರಿಂದ ಹಿಂದೂ ಬಡ ವ್ಯಾಪಾರಿಗಳ ವ್ಯಾಪಾರಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವರಿಗೆ ಆರ್ಥಿಕವಾಗಿ ಬಲ ಕೊಟ್ಟಂತಾಗುತ್ತದೆ. ಮತ್ತು ನಮ್ಮ ಎಲ್ಲ ಹಬ್ಬಗಳನ್ನು ಪವಿತ್ರತೆಯಿಂದ, ಮಡಿವಂತಿಕೆಯಿಂದ ಆಚರಿಸಿದಂತಾಗುತ್ತದೆ ಎಂದು ವಿನಂತಿಸಿದ್ದಾರೆ.

