ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಗಣಪತಿ ಚೌಕ್ ದಲ್ಲಿರುವ ಗಣೇಶ ದೇವಸ್ಥಾನದ ಗಾಜಿಗೆ ಕಲ್ಲೆಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ, ಈ ಕೃತ್ಯದ ಹಿಂದಿರುವ ಶಕ್ತಿಗಳನ್ನು ಬಯಲಿಗೆ ಎಳೆಯಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಾಂತವಾಗಿರುವ ನಮ್ಮ ವಿಜಯಪುರ ನಗರದಲ್ಲಿ ಶಾಂತಿ ಕದಡಬೇಕು, ಕೋಮು ಗಲಭೆ ಸೃಷ್ಟಿಸಲೆಂದೆ ನಗರದ ಗಣಪತಿ ಚೌಕ್ ದಲ್ಲಿರುವ ಹಿಂದೂಗಳ ಆರಾಧ್ಯದೈವ ಗಣೇಶ ದೇವಸ್ಥಾನಕ್ಕೆ ಕಲ್ಲೆಸೆದು, ಗಾಜು ಒಡೆದು ಹಾಕುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿರುವುದು ಖಂಡನೀಯ.
ದೇವಸ್ಥಾನಕ್ಕೆ ಕಲ್ಲೆಸೆದ ಆರೋಪಿಗಳು ಅಪ್ರಾಪ್ತರಾಗಿದ್ದರೆ, ಇವರ ಹಿಂದಿನ ಶಕ್ತಿಗಳು ಯಾವವು? ರಾಜಕೀಯ ವ್ಯಕ್ತಿಗಳ ಕೈವಾಡವಿದೆಯೇ? ಗಲಭೆ ಸೃಷ್ಟಿಸುವ ಸಂಘಟನೆಗಳ ಕುಮ್ಮಕ್ಕು ಇದೆಯೇ? ಸತ್ಯ ಹೊರ ಬರಬೇಕೆಂದರೆ, ಬಂಧಿತ ಆರೋಪಿಗಳನ್ನು ಮಂಪರು ಪರೀಕ್ಷೆ ನಡೆಸಬೇಕು. ಇವರ, ಇವರ ಸಂಬಂಧಿಗಳು, ಗೆಳೆಯರು ಮತ್ತು ಇವರು ವಾಸಿಸುವ ಟಕ್ಕೆಯಲ್ಲಿ ಯಾರ ಯಾರ ಜೊತೆ ಸಂಪರ್ಕ ಹೊಂದಿದ್ದಾರೋ ಎಲ್ಲರ ಮೊಬೈಲ್ ಕಾಲ್ ತಪಾಸಣೆ ನಡೆಸಬೇಕು. ಯಾರಾದರೂ ನಗರ ತೊರೆದಿದ್ದಾರೆಯೇ? ಎಲ್ಲರನ್ನು ಸಮಗ್ರವಾಗಿ ತನಿಖೆ ಒಳಪಡಿಸಬೇಕು.
ಈ ಕೃತ್ಯಯಿಂದ ನಿಷೇಧಿತ ದೇಶದ್ರೋಹಿ ಸಂಘಟನೆಗಳು, ಬಾಂಗ್ಲಾ ನುಸುಳುಕೋರರು, ಸೀಮಿ ಸಂಘಟನೆಗಳು ವಿಜಯಪುರ ನಗರದಲ್ಲಿ ಜೀವಂತವಾಗುತ್ತಿವೆಯೇ? ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು. ಆರೋಪಿಗಳು ಗಾಂಜಾ, ಅಫೀಮು ಮತ್ತಿನಲ್ಲಿದ್ದರೆ ಅಥವಾ ಕುಡಿದ ಅಮಲಿನಲ್ಲಿದ್ದರೆ, ಅಪ್ರಾಪ್ತರು ಅವ್ಯಹತವಾಗಿ ಕುಡಿತದ ಚಟಕ್ಕೆ ಬಿದ್ದಿರುವುದು ಸಂಶಯ ಮೂಡುತ್ತಿದೆ.
ವಿಜಯಪುರ ನಗರದಲ್ಲಿ ಶಾಂತಿ, ನೆಮ್ಮದಿ, ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಮುಂದೆ ಇಂತಹ ದ್ರೋಹಿಗಳಿಂದ ಆಗುವ ಅನಾಹುತ ತಪ್ಪಿಸಲು ಗಣಪತಿ ಚೌಕ್ ದಲ್ಲಿರುವ ಗಣೇಶ ದೇವಸ್ಥಾನಕ್ಕೆ ಕಲ್ಲೆಸೆದು, ಗಾಜು ಒಡೆದು ಹಾಕಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ.

