ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಧ್ಯದ ಪರಿಸ್ಥಿತಿಯಲ್ಲಿ ನಾವೆಲ್ಲರೂ ಪ್ರಶಸ್ತಿ, ಹೆಸರು, ಕೀರ್ತಿ ಪಡೆಯಲು ವಶೀಲಿ, ಪ್ರಭಾವ ಬೀರುವಂತಹ ಹರ ಸಾಹಸ ಮಾಡಲು ಮುಂದಾಗುತ್ತೇವೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಿದರೆ ಸಿಗುವ ತೃಪ್ತಿ ದೊಡ್ಡದು ಎಂದು ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯ ಹಸಿರು ತೋರಣ ಉದ್ಯಾನವನದಲ್ಲಿ ಹುಬ್ಬಳ್ಳಿಯ ಪ್ರತಿಷ್ಠಿತ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ ನೇಮಕಗೊಂಡ ಅಶೋಕ ರೇವಡಿ ಹಾಗೂ ಬಿದರಕುಂದಿ ಎನ್.ಎಲ್.ನಾಯ್ಕೋಡಿ ಪ್ರತಿಷ್ಠಾನ ಕೊಡಮಾಡಿದ “ಗುರುಶ್ರೇಷ್ಠ” ಪ್ರಶಸ್ತಿ ಪಡೆದ ಬಿ.ಎಚ್.ಬಳಬಟ್ಟಿ ಅವರುಗಳನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆಯ ಸದಸ್ಯತ್ವ ಪಡೆಯುವುದು ಗೌರವದ ಸಂಗತಿಯಾಗಿದೆ. ಅದರಲ್ಲೂ ಆಡಳಿತ ಮಂಡಳಿಯ ಸದಸ್ಯರಾಗಿ ನೇಮಕಗೊಳ್ಳುವುದು ಇನ್ನೂ ಹೆಚ್ಚಿನ ಗೌರವದ ಸಂಗತಿ. ವ್ಯಾಪಾರ, ವಾಣಿಜ್ಯ, ಸಮಾಜ ಸೇವೆಯನ್ನು ಗುರುತಿಸಿ ಈ ನೇಮಕ ಮಾಡಲಾಗುತ್ತದೆ. ಇದೇ ರೀತಿ ಬಿದರಕುಂದಿ ನಾಯ್ಕೋಡಿ ಪ್ರತಿಷ್ಠಾನ ಸಹ ಅತ್ಯಂತ ಯೋಗ್ಯರಾದ ನಿವೃತ್ತ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತದೆ. ಪ್ರಶಸ್ತಿಗಳ ಹಿಂದೆ ನಾವು ಹೋಗದೇ, ನಮ್ಮ ಕೆಲಸ ನೋಡಿ ಪ್ರಶಸ್ತಿಗಳು ಬರಬೇಕು. ಹಸಿರು ತೋರಣ ಬಳಗವು ಯಾವುದೇ ಪ್ರತಿಫಲ, ಲಾಭದ ಆಸೆ ಮಾಡದೇ ಪರಿಸರ ಪ್ರೀತಿಯ ಕೆಲಸ ಮಾಡುತ್ತಿರುವುದು ಮಾದರಿಯಾಗಿದೆ ಎಮದರು.
ಹಸಿರು ತೋರಣ ಬಳಗದ ಮಾಜಿ ಅಧ್ಯಕ್ಷ ರವಿ ಗೂಳಿ ಹಾಗೂ ಬಿ.ಎಸ್.ಮೇಟಿ ಮಾತನಾಡಿ, ಅಶೋಕ ರೇವಡಿ ಹಾಗೂ ಬಿ.ಎಚ್.ಬಳಬಟ್ಟಿ ಅವರ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಈ ಸನ್ಮಾನ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ ಮಾತನಾಡಿ, ಹಸಿರು ತೋರಣ ಗೆಳೆಯರ ಬಳಗದ ಸದಸ್ಯರನ್ನು ವಿವಿಧ ಸಂಘ, ಸಂಸ್ಥೆಗಳು ಗುರುತಿಸಿ ಗೌರವಿಸುತ್ತಿರುವುದು ನಮಗೆಲ್ಲ ಸಂತಸದ ಸಂಗತಿಯಾಗಿದೆ. ಪ್ರಶಸ್ತಿಗಳು ನಮ್ಮ ಜವಾಬ್ದಾರಿ ಹೆಚ್ಚಿಸುತ್ತವೆ. ನಾವು ಸಮಾಜಕ್ಕೆ ಒಳ್ಳೆಯದನ್ನು ನೀಡಬೇಕು ಎಂದರು.
ಸನ್ಮಾನ ಸ್ವೀಕರಿಸಿ ಅಶೋಕ ರೇವಡಿ ಹಾಗೂ ಬಿ.ಎಚ್.ಬಳಬಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ ಮಾಜಿ ಸದಸ್ಯ ಶ್ರೀಶೈಲ ಮರೋಳ, ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷ ಕೆ.ಆರ್.ಕಾಮಟೆ, ನಾಗಭೂಷಣ ನಾವದಗಿ, ಬಿ.ಎಸ್.ಮೇಟಿ, ರವಿ ಗೂಳಿ, ರಾಜಶೇಖರ ಕಲ್ಯಾಣಮಠ, ಸದಸ್ಯರಾದ ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ವೆಂಕನಗೌಡ ಪಾಟೀಲ, ಅಮರೇಶ ಗೂಳಿ, ಕಿರಣ ಕಡಿ, ಬಸವರಾಜ ಸಿದರಡ್ಡಿ, ರವಿ ತಡಸದ, ಬಿ.ಎಂ.ಪಲ್ಲೇದ, ವೀರೇಶ ಹಂಪನಗೌಡ್ರ, ವಿಲಾಸರಾವ್ ದೇಶಪಾಂಡೆ, ಶರಣು ಹಿರೇಕುರುಬರ, ಡಾ.ವಿಜಯಕುಮಾರ ಗೂಳಿ, ಡಾ.ಚಂದ್ರಶೇಖರ ಶಿವಯೋಗಿಮಠ, ಅಮರೇಶ ಐಹೊಳೆ, ಸೋಮಶೇಖರ ಚೀರಲದಿನ್ನಿ, ಜಿ.ಎಂ.ಹುಲಗಣ್ಣಿ, ಪಿ.ಆರ್.ಕೂಡಗಿ, ಶಿವನಗೌಡ ಪಾಟೀಲ, ಪುಟ್ಟು ಕಡಕೋಳ, ವೀರೇಶ ಢವಳಗಿ, ವಿನಯಕುಮಾರ ಹಿರೇಮಠ, ಚಿದಾನಂದ ಗುಬಚಿ, ವಿನಯ ಗಡೇದ ಇದ್ದರು. ಶಿಕ್ಷಕರಾದ ಎಲ್.ಎಂ.ಚಲವಾದಿ ಸ್ವಾಗತಿಸಿದರು. ಸಂಚಾಲಕ ಮಹಾಬಲೇಶ್ವರ ಗಡೇದ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಬಳಗದ ಮಾಜಿ ಅಧ್ಯಕ್ಷ ನಾಗಭೂಷಣ ನಾವದಗಿ ವಂದಿಸಿದರು.

