ಉದಯರಶ್ಮಿ ದಿನಪತ್ರಿಕೆ
ಇಂಡಿ: ಯುವಕರು ಶೆರೆ ಸಹವಾಸ ಮಾಡಿದರೆ ಅದರಿಂದ ಹೆಂಡತಿ, ಕುಟುಂಬ, ಸಮಾಜದಿಂದ ವಂಚಿತನಾಗುವದಲ್ಲದೆ ಶೆರೆ ಯುವಕರ ಆಯುಷ್ಯವನ್ನು ಕಡಿಮೆ ಮಾಡುತ್ತದೆ ಎಂದು ಗುರುದೇವ ಆಶ್ರಮ ಕಾತ್ರಾಳದ ಅಮೃತಾನಂದ ಶ್ರೀಗಳು ಹೇಳಿದರು.
ಪಟ್ಟಣದ ಕಾಳಿಕಾ ಮಂದಿರದಲ್ಲಿ ತಾಲೂಕಾ ಆಡಳಿತ, ಅಬಕಾರಿ ಇಲಾಖೆ, ಪುರಸಭೆ ಇಂಡಿ ಮತ್ತು ಗ್ರಾ.ಪಂ ರೂಗಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆ ಸಹಯೋಗದಲ್ಲಿ ನಡೆದ ತಾಲೂಕಿನ ಬೊಳೆಗಾಂವ ಗ್ರಾಮ ವ್ಯಸನ ಮುಕ್ತ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇಂದು ಮಹಿಳೆಯರಲ್ಲಿ ಹೆಚ್ಚು ಸಂಸ್ಕೃತಿ ಕಾಣುತ್ತಿದ್ದೇವೆ. ಬೊಳೆಗಾಂವ ಗ್ರಾಮವನ್ನು ವ್ಯಸನ ಮುಕ್ತ ಮಾಡಲು ಸರಕಾರದ ಸಹಭಾಗಿತ್ವದಲ್ಲಿ ಎಸಿ ಅಬೀದ ಗದ್ಯಾಳರವರು ಮಾಡುತ್ತಿರುವ ಪ್ರಯೋಗ ಜಿಲ್ಲೆಯಲ್ಲಿಯೆ ಮೊದಲನೆಯದು. ಇಲ್ಲಿ ೭೦ ಜನ ಒಂದು ವಾರದಿಂದ ಭಾಗವಹಿಸಿ ವ್ಯಸನ ಮುಕ್ತರಾಗಿದ್ದು ಮತ್ತು ಮುಂಬರುವ ದಿನಗಳಲ್ಲಿ ಬೊಳೆಗಾಂವ ಗ್ರಾಮ ವ್ಯಸನ ಮುಕ್ತ ರಾಗುತ್ತಿರುವದು ಇದು ನಾವು ಗಾಂಧೀಜಿಗೆ ನೀಡುತ್ತಿರುವ ದೊಡ್ಡ ಕಾಣಿಕೆ ಎಂದರು.
ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಧರ್ಮಸ್ಥಳದ ಗ್ರಾಮಾಭಿವೃದ್ದಿಯವರ ಪ್ರಯತ್ನದಿಂದ ೭೦ ಜನರು ವ್ಯಸನ ಮುಕ್ತರಾಗಿದ್ದು ಅಂಧಕಾರದಿಂದ ಬೆಳಕಿನೆಡೆಗೆ ಬಂದಿದ್ದಾರೆ. ಯುವಕರು ತಮ್ಮಿಲ್ಲಿರುವ ಋಣಾತ್ಮಕ ವಿಚಾರಗಳನ್ನು ಬಿಟ್ಟು ಧನಾತ್ಮಕ ವಿಚಾರ ಮಾಡಿದರೆ ವ್ಯಸನ ಮುಕ್ತವಾಗಲು ಸಾಧ್ಯ ಎಂದರು.
ಜನ ಜಾಗೃತಿ ವೇದಿಕೆ ರಾಜ್ಯ ಅಧ್ಯಕ್ಷ ಸೋಮನಗೌಡ ಪಾಟೀಲ ಮನಗೂಳಿ( ಅಪ್ಪುಗೌಡ ) ಮಾತನಾಡಿ ರಾಜ್ಯದಲ್ಲಿ ಒಂದು ಲಕ್ಷ ೮೦ ಸಾವಿರ ಜನರನ್ನು ಜನ ಜಾಗೃತಿ ಸಂಸ್ಥೆ ವ್ಯಸನ ಮುಕ್ತ ಮಾಡಿ ಹೊಸ ಜೀವನ ನೀಡಿದ್ದಾರೆ, ಸಮಾಜದಲ್ಲಿ ಉತ್ತಮರಾಗಿ ಬದುಕಬೇಕಾಗಿದೆ. ಹೇಳುವದು ಸರಳವಿದೆ. ಆದರೆ ಪಾಲನೆ ಮಾಡುವದು ತುಂಬಾ ಕಷ್ಟವಾಗಿದ್ದು ಬೊಳೆಗಾಂವ ೭೦ ಜನರನ್ನು ವ್ಯಸನ ಮುಕ್ತ ಮಾಡಿರುವದು ಸ್ವಾಗತಾರ್ಹ, ಇನ್ನಷ್ಟು ಪ್ರಯತ್ನಿಸಿ ಬೊಳೆಗಾಂವ ವ್ಯಸನ ಮುಕ್ತ ಮಾಡಲು ಪ್ರಯತ್ನಿಸಲಾಗುವದು ಎಂದರು.
ಝಳಕಿಯ ಉಪನ್ಯಾಸಕಿ ರವಿ ಅರಳಿ,ಧರ್ಮಸ್ಥಳ ಕ್ಷೇಮಾಭಿವೃದ್ದಿ ಸಂಸ್ಥೆಯ ಜಿಲ್ಲಾ ನಿದೇರ್ಶಕ ಸಂತೋಷಕುಮಾರ ರೈ,ಯೋಜನಾಧಿಕಾರಿ ನಟರಾಜ ಎಲ್.ಎಂ,ಪದ್ಮಾ ಮಾತನಾಡಿದರು.
ವೇದಿಕೆಯ ಮೇಲೆ ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ರುದ್ರಪ್ಪಾ ಪೂಜಾರಿ, ಅಬಕಾರಿ ಇಲಾಖೆಯ ಪರೀನಾ ವಣಕ್ಯಾಳ, ರಾಹುಲ್ ನಾಯಕ,ವಾದಿರಾಜ, ತಾ.ಪಂ ಸಂಜಯ ಖಡಗೇಕರ, ಪ್ರಾದೇಶಿಕ ಯೋಜನಾಧಿಕಾರಿ ರಾಜೇಶ, ರೂಗಿ ಗ್ರಾ.ಪಂ ಪಿಡಿಒ ಬಸವರಾಜ ಬಬಲಾದ, ಶಶಿಕಲಾ ಬೇಟಗೇರಿ, ಸರಸ್ವತಿ, ಶಿಬಿರಾಧಿಕಾರಿ ದಿವಾಕರ ಪೂಜಾರಿ, ಆರೋಗ್ಯ ಸಹಾಯಕಿ ಜಯಲಕ್ಷ್ಮಿ, ಪರಶುರಾಮ ಹೊಸಮನಿ, ಯೋಗ ಶಿಕ್ಷಕ ಬಿ.ಎಸ್.ಪಾಟೀಲ, ಗ್ರಾ.ಪಂ ಸದಸ್ಯ ಉಮೇಶ ಮತ್ತಿತರಿದ್ದರು.

