ಪತ್ರಿಕಾ ಗೋಷ್ಠಿಯಲ್ಲಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರಿಂದ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಸಾರಂಗಮಠದ ಕಾಯಕಯೋಗಿ ಲಿಂ. ಚೆನ್ನವೀರ ಮಹಾಸ್ವಾಮಿಗಳ ೧೩೦ ನೇ ಜಯಂತ್ಯೋತ್ಸವ ನಿಮಿತ್ಯ ನ.೧೩ ರಿಂದ ಡಿ.೦೩ರ ವರೆಗೆ ಸುಮಾರು ೨೧ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಜರುಗುವವು ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಸಾರಂಗಮಠದಲ್ಲಿ ರವಿವಾರ ಹಮ್ಮಿಕೊಂಡ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಪ್ರತಿನಿತ್ಯ ಸಂಜೆ ೬.೩೦ಗಂಟೆಗೆ ಉಜ್ಜಯನಿಯ ಲಿಂ.ಶ್ರೀ.ಸಿದ್ದಲಿಂಗ ಶಿವಾಚಾರ್ಯರ ಪುರಾಣ-ಪ್ರವಚನವನ್ನು ಶಾಹಪೂರದ ಶ್ರೀ ಸೂಗೂರೇಶ್ವರ ಶ್ರೀಗಳಿಂದ ನೆರವೇರುವುದು. ಲಿಂ ಶ್ರೀ ಚನ್ನವೀರ ಮಹಾಸ್ವಾಮಿಗಳ ಜಯಂತಿ ದಿನವಾದ ನ.೧೮ ರಂದು ತಾಲೂಕಿನ ಶ್ರೇಷ್ಠ ಕೃಷಿಕರಿಗೆ ನೀಡುವ ಸಾರಂಗಶ್ರೀ ಕೃಷಿ ಪ್ರಶಸ್ತಿಯನ್ನು ಆಲಮೇಲದ ಸಾವಯವ ಕೃಷಿಕ ಸುನೀಲ ನಾರಾಯಣಕರ ಅವರಿಗೆ ಪ್ರಶಸ್ತಿ ಫಲಕ ಮತ್ತು ೧೧ ಸಾವಿರ ನಗದನ್ನು ನೀಡಿ ಗೌರವಿಸಲಾಗುವುದು.
ಖ್ಯಾತ ಖಗೋಳಶಾಸ್ತ್ರಜ್ಞ ಭಾಸ್ಕರಾಚಾರ್ಯ-೨ ಅವರ ಸ್ಮರಣೆಗಾಗಿ ನೀಡುವ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಅಂತರಾಷ್ಟ್ರೀಯ ಕೃಷಿ ತಜ್ಞ, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಾಜಿ ಪ್ರಧಾನ ನಿರ್ದೇಶಕ, ಪದ್ಮಶ್ರೀ ಸುಬ್ಬಯ್ಯ ಅಯ್ಯಪ್ಪನ್ ಅವರಿಗೆ ಭಾಸ್ಕರ ಪ್ರಶಸ್ತಿ ಮತ್ತು ೧ ಲಕ್ಷ ನಗದನ್ನು ನೀಡಿ ಗೌರವಿಸಲಾಗುವುದು. ಈ ಹಿಂದೆ ದೇಶದ ಖ್ಯಾತ ವಿಜ್ಞಾನಿಗಳಾದ ಸಿ.ಎನ್.ರಾವ್, ಯು.ಆರ್.ರಾವ್, ಡಾ.ಎ.ಎಸ್.ಪಾಟೀಲ, ಕೆ.ಕಸ್ತೂರಿರಂಗನ, ಇಸ್ರೋ ಮಾಜಿ ಅಧ್ಯಕ್ಷ ಡಾ.ಕಿರಣಕುಮಾರ ಅವರಿಗೆ ನೀಡಿ ಗೌರವಿಸಿದೆ. ನ.೨೭ರಂದು ಸಿದ್ದಾಂತ ಶಿಖಾಮಣಿ ಕರ್ತೃ ಸಾಲೋಟಗಿ ಶ್ರೀ ಶಿವಯೋಗಿ ಶಿವಾಚಾರ್ಯರ ಸ್ಮರಣೆಯಲ್ಲಿ ನೀಡುವ ಶಿವಯೋಗಿ ಶಿವಾಚಾರ್ಯ ಪ್ರಶಸ್ತಿಯನ್ನು ಮಡಕೇರಿಯ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಸಿ.ಶಿವಕುಮಾರಸ್ವಾಮಿ ಅವರಿಗೆ ಪ್ರಶಸ್ತಿ ಮತ್ತು ೧ ಲಕ್ಷ ನಗದು ನೀಡಿ ಗೌರವಿಸಲಾಗುವುದು. ಡಿ.೨ ರಂದು ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಕಲ್ಯಾಣ ಮಹೋತ್ಸವ ಮತ್ತು ಡಿ.೩ರಂದು ಶ್ರೀವೀರಭದ್ರ ದೇವರ ಮತ್ತು ಭದ್ರಕಾಳಿ ಅಮ್ಮನವರ ಮೂರ್ತಿಯನ್ನು ಬೆಳ್ಳಿ ರಥದೊಂದಿಗೆ ಮಹಿಳೆಯರೆ ಎಳೆಯುವ ಮೂಲಕ ಜಾತ್ರಾ ಮಹೋತ್ಸವ ನಡೆಯಲಿದೆ. ಅಂದು ಪುರಾಣ ಪ್ರವಚನ ಮುಕ್ತಾಯ ಸಮಾರಂಭ ನೆರವೇರುವುದು. ಕಾರಣ ಸಿಂದಗಿಯ ಸದ್ಬಕ್ತ ಮಂಡಳಿ ಶ್ರೀಮಠದಲ್ಲಿ ಜರುಗುವ ಎಲ್ಲ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಸಾರಂಗ ಶ್ರೀಗಳು ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಜಮಖಂಡಿಯ ಕೊಣ್ಣೂರಿನ ಹೊರಗಿನ ಕಲ್ಯಾಣಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಅಶೋಕ ವಾರದ, ಡಾ.ಶರಣಬಸವ ಜೋಗೂರ, ವಿರೇಶ ಜೋಗುರ, ಮಲ್ಲಿಕಾರ್ಜುನ ಶಂಬೇವಾಡ, ಮಾಜಿ ಜಿಪಂ ಸದಸ್ಯ ಮಹಾಂತಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.

