ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕೇವಲ ೧೭ ತಿಂಗಳಲ್ಲಿ ಅವಧಿಯಲ್ಲಿ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಸಿಂದಗಿ ನಗರದ ಅಭಿವೃದ್ಧಿಗಾಗಿ ರೂ.೮೬ ಕೋಟಿಗೂ ಅಧಿಕ ರೂಪಾಯಿಗಳನ್ನು ಮಂಜೂರು ಮಾಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದು ನನಗೆ ಸಂತಸ ತಂದಿದೆ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ರವಿವಾರ ಲೋಕೋಪಯೋಗಿ ಇಲಾಖೆ ವಿಜಯಪುರ ಆಯೋಜಿಸಿರುವ ೨೦೨೩-೨೪ನೇ ಸಾಲಿನ ಅಪೆಂಡಿಕ್ಸ್- ಇ ಯೋಜನೆ ಅಡಿಯಲ್ಲಿ ಸುಮಾರು ೫ಕೋಟಿ ರೂ. ಅನುದಾನದಲ್ಲಿ ರಾಷ್ಟ್ರೀಯ ಹೆದ್ದಾರಿ ೫೦ರ ವರ್ತುಲ ರಸ್ತೆಯಿಂದ ಡೋಹರ್ ಕಕ್ಕಯ್ಯ ವೃತ್ತ, ಟಿಪ್ಪುಸುಲ್ತಾನ್ ವೃತ್ತದವರೆಗೆ ಮತ್ತು ರಾಜ್ಯ ಹೆದ್ದಾರಿ ೧೬ ರಿಂದ ಶ್ರೀ ಬಸವೇಶ್ವರ ವೃತ್ತ, ಶ್ರೀ ಕನಕದಾಸ ವೃತ್ತ ರಾಷ್ಟ್ರೀಯ ಹೆದ್ದಾರಿ ೫೦ರವರೆಗೆ ಸುಮಾರು ೬.೫೦ ಕಿ.ಮೀ. ವರೆಗೆ ಅಲಂಕಾರಿಕ ಬೀದಿ ದೀಪಗಳ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅಮೃತ್-೨ ಯೋಜನೆಯ ಅಡಿಯಲ್ಲಿ ಸುಮಾರು ೩೬ ಕೋಟಿ ಅನುದಾನದಲ್ಲಿ ಸಿಂದಗಿ ನಗರಕ್ಕೆ ೨೪*೭ ಕುಡಿಯುವ ನೀರಿನ ಯೋಜನೆ, ಸಿಂದಗಿ ನಗರದ ೫೨ ಎಕರೆ ಪ್ರದೇಶದಲ್ಲಿ ೧೯೯೪ರಲ್ಲಿ ದಿ.ಎಂ.ಸಿ.ಮನಗೂಳಿ ಅವರ ಅಧಿಕಾರ ಅವಧಿಯಲ್ಲಿ ನಿರ್ಮಾಣಗೊಂಡ ಕೆರೆಗೆ ೩.೫೦ಕೋಟಿ ಅನುದಾನದಲ್ಲಿ ಕೆರೆ ಅಭಿವೃದ್ಧಿ ಮತ್ತು ಕೆರೆಯ ಪ್ರದೇಶದಲ್ಲಿ ಸಿಂದಗಿಯ ಸಿರಿ ಲಿಂ.ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಮೂರ್ತಿ ಅನಾವರಣ, ೨ಕೋಟಿ ರೂ. ಅನುದಾನದಲ್ಲಿ ಗಾಂಧಿ ವೃತದಿಂದ ಆಲಮೇಲ ರಸ್ತೆಯವರೆಗೆ ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ಸಿಂದಗಿ ನಗರದ ಅಭಿವೃದ್ಧಿಗಾಗಿ ೩೯ ಕಾಮಗಾರಿಗಳು ಮಂಜೂರಾತಿ ಪಡೆದುಕೊಂಡಿದೆ. ಸಿಂದಗಿ ನಗರದಲ್ಲಿ ೨೭೪ ಹೊಸ ಅಲಂಕಾರಿಕ ವಿದ್ಯುತ್ ಕಂಬಗಳನ್ನು ನಿರ್ಮಾಣ ಮಾಡುವ ಮೂಲಕ ಜನ ನೀಡಿದ ಅಧಿಕಾರವನ್ನು ಜನರ ಕಲ್ಯಾಣಕ್ಕಾಗಿ ನಾನು ಮಾಡಲು ಸದಾ ಸಿದ್ದನಾಗಿದ್ದೇನೆ. ಪಟ್ಟಣವಲ್ಲದೇ ಸಿಂದಗಿ ಮತಕ್ಷೇತ್ರವನ್ನು ಜಿಲ್ಲೆಯಲ್ಲಿಯೇ ಅತ್ಯಂತ ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪವನ್ನು ಹೊಂದಿದ್ದೇನೆ ಎಂದರು.
ಈ ವೇಳೆ ಮಾಜಿ ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿ, ದಿ. ಎಂ.ಸಿ.ಮನಗೂಳಿಯವರು ತಾವು ಇರುವವರೆಗೂ ಜನರ ಕಲ್ಯಾಣಕ್ಕಾಗಿ ದುಡಿದಂತವರು. ಅವರ ಸುಪುತ್ರ ಶಾಸಕ ಅಶೋಕ ಮನಗೂಳಿ ಅವರು ಈ ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ತೊಟ್ಟಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅವರು ಸದಾ ಕಂಕಣ ಬದ್ಧರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಮಖಂಡಿಯ ಕೊಣ್ಣೂರಿನ ಹೊರಗಿನ ಕಲ್ಯಾಣಮಠದ ಡಾ.ವಿಶ್ವ ಪ್ರಭುದೇವ ಶಿವಾಚಾರ್ಯರು, ಆಸಂಗಿಹಾಳ ಆರೂಢಮಠದ ಶಂಕರಾನಂದ ಮಹಾಸ್ವಾಮಿಗಳು, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಡಾ.ಶಾಂತವೀರ ಮನಗೂಳಿ, ಭಾಷಾಸಾಬ ತಾoಬೋಳಿ, ಪುರಸಭೆ ಸದಸ್ಯರಾದ ಬಸವರಾಜ ಯರನಾಳ, ಸಂದೀಪ ಚೌರ, ಹಾಸಿಂಪೀರ ಆಳಂದ, ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಕಾಂಬಳೆ, ಕೆಡಿಪಿ ಸದಸ್ಯೆ ಮಹಾನಂದ ಬೊಮ್ಮಣ್ಣಿ, ಸಿದ್ದು ಮಲ್ಲೇದ, ಚೆನ್ನಪ್ಪ ಗೋಣಿ, ಲೋಕೋಪಯೋಗಿ ಇಲಾಖೆಯ ಎಇಇ ಅರುಣಕುಮಾರ ವಡಗೇರಿ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಸುನಂದಾ ಯಂಪುರೆ, ಜಯಶ್ರೀ ಹದನೂರ, ಸಾಯಬಣ್ಣ ಪುರದಾಳ, ಕುಮಾರ ದೇಸಾಯಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

