ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ’ಗುರು ದೇವೋಭವ’ ಎನ್ನುವಂತೆ ಶಿಕ್ಷಕರಿಂದ ಮಾತ್ರ ಆರೋಗ್ಯವಂತ ಸಮಾಜವನ್ನು ನಿಮಿಸಲು ಸಾಧ್ಯ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ವಿಜಯಪುರ ಜಿಲ್ಲಾ ಪ್ರಾಥಮಿಕ ಶಾಲೆ ಮತ್ತು ಬಬಲೇಶ್ವರ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಬಬಲೇಶ್ವರ ಶ್ರೀ ಬಾಪೂಜಿ ಪ್ರಾಥಮಿಕ ಶಾಲೆಯ ಕವಿ ಶಂ.ಗು. ಬಿರಾದಾರ ವೇದಿಕೆಯಲ್ಲಿ ಆಯೋಜಿಸಿದ ಶಿಕ್ಷಕರ ದಿನೋತ್ಸವ ಪ್ರಯುಕ್ತ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ ಮಾತನಾಡಿ, ಅನುದಾನಿತ ಶಾಲಾ ಶಿಕ್ಷಕರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ೨೦೦೬ ರಿಂದ ನೇಮಕವಾದ ಶಿಕ್ಷಕರಿಗೆ ಸರಕಾರ ಓಪಿಎಸ್ ಪಿಂಚನಿಯಾ ಕೊಟ್ಟಿಲ್ಲ, ಎನ್.ಪಿ.ಎಸ್. ಪಿಂಚನಿಯಾ ನೀಡಿಲ್ಲ, ನಾನು ಪಿಂಚನಿ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ವಿ.ಎನ್. ಬಿರಾದಾರ ಜ್ಯೋತಿ ಬೆಳಗಿಸಿ ಮಾತನಾಡಿ, ಸರ್ಕಾರ ಸಾಕಷ್ಟು ಸಹಾಯ ಮಾಡಿದರೂ ಮಕ್ಕಳ ದಾಖಲಾತಿಯಲ್ಲಿ ಬದಲಾವಣೆ ಕಾಣುತ್ತಿಲ್ಲ ಎಂಬ ಆತಂಕ ವ್ಯಕ್ತಪಡಿಸಿದರು.
ಅನುದಾನಿತ ಶಾಲೆಗಳ ರಾಜ್ಯಾಧ್ಯಕ್ಷ ಎನ್.ರಾಜಗೋಪಾಲ ಮಾತನಾಡಿ, ಸರಕಾರ ಕನ್ನಡ ಶಾಲೆಗಳ ಉಳಿವಿಗೆ ಪ್ರಯತ್ನಿಸಬೇಕು. ಇಲ್ಲವೆಂದರೆ ಕನ್ನಡ ಶಾಲೆಗಳು ನಶಿಸಿ ಹೋಗುತ್ತವೆ ಎಂದು ನುಡಿದರು.
ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಹಣಮಂತಪ್ಪ ಮಾತನಾಡಿ, ೧೪೦ ದಿನ ಶಿಕ್ಷಕರು ಶಾಂತ ರೀತಿಯ ಹೋರಾಟ ಮಾಡಿ ಇಬ್ಬರು ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡರೂ ಇನ್ನೂವರೆಗೂ ನಮಗೆ ನಿವೃತ್ತಿಯಾದ ಬಳಿಕ ಯಾವುದೇ ಪಿಂಚನಿ ಇಲ್ಲದಿರುವುದು ಸಂವಿಧಾನಕ್ಕೆ ನಾವು ಮಾಡಿದ ಅಪಚಾರವಾಗುತ್ತದೆ. ಸರಕಾರ ಬೇಗ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ನುಡಿದರು.
ಸಾನಿಧ್ಯ ವಹಿಸಿದ ಗುಣದಾಳ ಕಲ್ಯಾಣಿಶ್ವರ ಹಿರೇಮಠದ ಡಾ.ವಿವೇಕಾನಂದ ದೇವರು ಆಶೀರ್ವಚನ ನೀಡಿದರು.
ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲೆಯ ಅಧ್ಯಕ್ಷ ಶಿವಾನಂದ ಹಿರೇಕುರಬರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಟಿ. ರವಿಕುಮಾರ ನಿಕಟಪೂರ್ವ ರಾಜ್ಯ ಕಾರ್ಯದರ್ಶಿ, ಎನ್. ಎಚ್. ನಾಗೂರ ಉಪನಿರ್ದೇಶಕರು, ವಪ್ಪಾರಿ ರಾಜ್ಯ ಕಾರ್ಯದರ್ಶಿ, ರಂಜಿತ ಬಾಬರ ಅಶೋಕಗೌಡ ಮೇಲಾಶಂಕರ ಸಂಗಪ್ಪ, ತಮಗೊಂಡ, ಶ್ರೀಶೈಲಗೌಡ ಬಿ. ಪಾಟೀಲ, ವಿ.ಎಸ್. ಕಳಸಗೊಂಡ, ವಿ.ಎಸ್. ಪಾಟೀಲ ಮಾಜಿ ಜಿ.ಪಂ. ಅಧ್ಯಕ್ಷರು, ಗಿರೀಶ ಬಿರಾದಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಶ್ರೀಶೈಲಗೌಡ ಬಿರಾದಾರ ಬಬಲೇಶ್ವರ ತಾಲೂಕಾ ಅಧ್ಯಕ್ಷರು ರೋಹಿಣಿ ಚವ್ಹಾಣ ಉಪಸ್ಥಿತರಿದ್ದರು.
ಬಸನಗೌಡ ಬಿರಾದಾರ ಸ್ವಾಗತಿಸಿದರು. ಎಂ.ಎಸ್. ಧನ್ಯಾಳ ನಿರೂಪಿಸಿದರು. ಗಂಗಾಧರ ಪಾರಶೆಟ್ಟಿ ವಂದಿಸಿದರು.

” ರಾಷ್ಟ್ರ ಪ್ರಶಸ್ತಿ, ರಾಜ್ಯೋತ್ಸವ ಪುರಸ್ಕೃತ ಶಿಕ್ಷಕರು, ಖ್ಯಾತ ಸಾಹಿತಿಗಳು ಆದ ಕವಿ ಶಂ.ಗು. ಬಿರಾದಾರ ಅವರ “ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ” ಎಂಬ ಕವಿತೆಯನ್ನು ಮಕ್ಕಳ ನಾಡಗೀತೆಯನ್ನಾಗಿ ಮಾಡಿ ಪ್ರತಿದಿನ ಮಕ್ಕಳು ಶಾಲೆಯಲ್ಲಿ ಅದನ್ನು ಹಾಡುವಂತಾಗಬೇಕು. ಇಂದಿನ ಮಕ್ಕಳಿಗೆ ಅಂತಹ ಗೀತೆಯ ಅವಶ್ಯಕತೆ ಇದೆ ಈ ಗೀತೆಯನ್ನು ನಿರಂತರ ಶಾಲೆಯಲ್ಲಿ ಹಾಡುವಂತಾಗಲು ರಾಜ್ಯ ಸರಕಾರ ಕ್ರಮಕೈಗೊಳ್ಳತ್ತದೆ.”
– ಸಂಗಮೇಶ ಬಬಲೇಶ್ವರ
ಅಧ್ಯಕ್ಷರು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಸೇವಾ ಪ್ರಶಸ್ತಿ ಪ್ರದಾನ
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಬಸನಗೌಡ ಬಿರಾದಾರ, ಬಿಸ್ಮಿಲ್ಲಾ ರಹಿಮಾನ ಸಿಕ್ಕಲಗಾರ, ಬಸವರಾಜ ಮಾಡ್ಯಾಳ, ಎಚ್.ಎಂ. ಬೋರಾವತ, ಚಂದ್ರಶೇಖರ ಲಮಾಣಿ, ಶ್ರೀಮತಿ ಕಮಲಾ ಕೊಟ್ಯಾಳ, ಎಂ.ಜಿ. ಚೌಧರಿ, ಪ್ರಕಾಶ ಕಟ್ಟಿಮನಿ, ನಾಗಪ್ಪ ಬೇನೂರ ಅವರನ್ನು ಸನ್ಮಾನಿಸಿ ಗೌರವಿಸಿದರು. ೨೦೨೩-೨೪ನೇ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ಹಾಗೂ ನಿವೃತ್ತ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು.

