ಲೇಖನ:ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ದೂ: ೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
ದೇಶದಲ್ಲಿ ರಾಜರ ಆಳ್ವಿಕೆಯ ಕಾಲದಲ್ಲಿ ಪ್ರೆಗಳ ನಡುವಿನ ಒಗ್ಗಟ್ಟಿನ ಕೊರತೆ ಮತ್ತು ಪ್ರಜೆಗಳ ಒಳಗೇ ಇದ್ದ ಜಾತೀಯತೆ ಮತ್ತು ಪರಸ್ಪರ ದ್ವೇಷ ಮತ್ತು ಅಸೂಯೆಯ ಕಾರಣದಿಂದ ವಿದೇಶೀಯರು ಇಲ್ಲಿನ ರಾಜರನ್ನು ಸೋಲಿಸಿ ತಾವು ಸಧಿಪತ್ಯವನ್ನು ಸ್ಥಾಪಿಸಿದರು. ೧೯೪೭ರ ಪೂರ್ವದ ವರೆಗೂ ಭಾರತವು ಪರಕೀಯರ ದಾಸ್ಯಕ್ಕೆ ಒಳಪಟ್ಟಿತ್ತು. ಈ ದೇಶದ ಸಾವಿರಾರು ನಾಯಕರ ಮತ್ತು ಲಕ್ಷೋಪಲಕ್ಷ ಪ್ರಜೆಗಳ ತ್ಯಾಗ ಮತ್ತು ಬಲಿದಾನಗಳ ಫಲವಾಗಿ ೧೯೪೭ ಆಗಸ್ಟ್ ೧೪ರ ಮಧ್ಯರಾತ್ರಿ ಈ ದೇಶವು ಪರಕೀಯರ ದಾಸ್ಯದಿಂದ ಬಿಡುಗಡೆಯನ್ನು ಕಂಡಿತು. ಇಂದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದ ದೇಶವಾಗಿ ಭಾರತವು ಗುರುತಿಸಿಕೊಂಡಿದೆ.
ಅಂಬೇಡ್ಕರ್ ಹೇಳಿದ ‘ಇತಿಹಾಸವನ್ನು ಮರೆತವರು ಎಂದಿಗೂ ಇತಿಹಾಸವನ್ನು ಸೃಷ್ಟಿಸಲಾರರು’ ಎಂಬ ಮಾತು ಖಂಡಿತಾ ಸತ್ಯ. ಸ್ವಾತಂತ್ರ್ಯದ ಧ್ಯೋತಕವಾಗಿ ದೇಶಕ್ಕೆ ದೊರೆತ ‘ಸೆಂಗೋಲ್’ ಎನ್ನುವ ದಂಡ ಇದೀಗ ದೇಶದ ಸಂಸತನ್ನು ಪ್ರವೇಶಿಸಿ ತನ್ನ ಗತವೈಭವವನ್ನು ಸಾರುತ್ತಾ ಮತ್ತೊಮ್ಮೆ ದೇಶದ ಗತವೈಭವವನ್ನು ಸಾರಿದೆ.
ತ್ಯಾಗ-ಬಲಿದಾನಗಳ ಫಲವೇ ‘ಸೆಂಗೋಲ್’:
ಈ ಸೆಂಗೋಲ್ ದೇಶದ ಪ್ರಜೆಗಳನ್ನು ೧೯೪೭ರ ಸ್ವಾತಂತ್ರ್ಯದ ಸಂದರ್ಭವನ್ನು ಮೆಲುಕು ಹಾಕಿಸುತ್ತದೆ. ಹಲವಾರು ವರ್ಷಗಳ ಪ್ರಯತ್ನ ಮತ್ತು ತ್ಯಾಗ ಬಲಿದಾನಗಳ ಫಲವಾಗಿ ಭಾರತ ದೇಶವನ್ನು ಪರಕೀಯರು ಬಿಟ್ಟು ತೊಲಗುವುದು ಎಂದು ನಿರ್ಧರಿಸಿದಾಗ ದೇಶದ ಅಧಿಕಾರವನ್ನು ಈ ದೇಶದ ನಾಯಕರಿಗೆ ಹಸ್ತಾಂತರ ಮಾಡುವುದು ಹೇಗೆ ಎಂಬ ಪ್ರಶ್ನೆ ಎದುರಾಯಿತು. ಇಂಗ್ಲೀಷರು ಮತ್ತು ನಮ್ಮ ದೇಶದ ನಾಯಕರು ಕೇವಲ ಪರಸ್ಪರ ಕೈಕುಲುಕುವ ಮೂಲಕ ಅಧಿಕಾರ ಹಸ್ತಾಂತರಿಸಿದರೆ ಈ ಪ್ರಕ್ರಿಯೆಗೆ ಹೆಚ್ಚಿನ ಆದ್ಯತೆ ದೊರೆಯಲಾರದು ಎಂದರಿತ ನಮ್ಮ ದೇಶದ ಹಿರಿಯ ನಾಯಕರು ಅದಕ್ಕೊಂಡು ನಮ್ಮ ದೇಶದ ಸಂಸ್ಕೃತಿಯ ಸ್ಪರ್ಶವನ್ನು ನೀಡಲು ನಿರ್ಧರಿಸಿದರು.

ಸ್ವಾತಂತ್ರ್ಯ ಅಧಿಕಾರ ಹಸ್ತಾಂತರ ಪ್ರಕ್ರಿಯೆಯ ಕರ್ತೃ ರಾಜಾಜಿ:
ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರು, ಭಾರತೀಯ ಸಂಸ್ಕೃತಿ, ತತ್ವಜ್ಞಾನ, ಸಂಪ್ರದಾಯ, ನಾಗರೀಕತೆ ಕುರಿತು ಅಪಾರ ಪಾಂಡಿತ್ಯ ಪಡೆದಿದ್ದ ಮತ್ತು ‘ರಾಜಾಜಿ’ ಎಂದೇ ಹೆಸರಾಗಿದ್ದ ಶ್ರೀ.ಸಿ.ರಾಜಗೋಪಾಲಾಚಾರಿ ಅವರ ಬಳಿ ಜವಹರಲಾಲ್ ನೆಹರು ತೆರಳಿ ದೇಶದ ಅಧಿಕಾರ ಹಸ್ತಾಂತರದ ಕುರಿತಾಗಿ ಚರ್ಚಿಸಿ ಸೂಕ್ತ ಕ್ರಮವನ್ನು ತಿಳಿಸಲು ಹೇಳಿದರು. ಅದರಂತೆ ದೇಶದ ಇತಿಹಾಸವನ್ನು ಸತತ ಅಧ್ಯಯನ ಮಾಡಿ ಒಂದು ಪರಿಹಾರ ನೀಡಿದರು. ಅದರಂತೆ ಇತಿಹಾಸದ ಪುಟಗಳಲ್ಲಿ ದೇಶದ ಅತ್ಯಂತ ಪುರಾತನ ಮತ್ತು ದೀರ್ಘಕಾಲ ಆಳ್ವಿಕೆ ನಡೆಸಿದ ರಾಜ ವಂಶವಾದ ತಮಿಳುನಾಡಿನ ‘ಚೋಳ’ ಅರಸರು ತಮ್ಮ ಆಡಳಿತದ ಅವಧಿಯಲ್ಲಿ ಒಬ್ಬ ಚೋಳ ಅರಸನು ಮತ್ತೊಬ್ಬ ಚೋಳ ಅರಸನಿಗೆ ಅಥವಾ ವಯಸ್ಸಾದ ಚೋಳ ರಾಜನು ತನ್ನ ಉತ್ತರಾಧಿಕಾರಿ ಮಗನಿಗೆ ಅಧಿಕಾರದ ವರ್ಗಾವಣೆಯನ್ನು ಮತ್ತು ಪಟ್ಟಾಭಿಷೇಕವನ್ನು ನ್ಯಾಯಪಾರಾಯಣ ಪ್ರತೀಕವಾದ ‘ಸೆಂಗೋಲ್’ನ್ನು (ರಾಜವಂಶದ ಅಧಿಕಾರ ದಂಡ) ಹಸ್ತಾಂತರಿಸುವ ಮೂಲಕ ಮಾಡುತ್ತಿದ್ದರು. ರಾಜೇಂದ್ರ ಚೋಳನು ಚೋಳರ ದೊರೆ ರಾಜರಾಜ ಚೋಳನಿಂದ ಅಧಿಕಾರದ ರಾಜದಂಡವನ್ನು ಚೋಳರ ರಾಜಧಾನಿ ತಂಜಾವೂರು ಬೃಹದೀಶ್ವರ ದೇವಸ್ಥಾನದಲ್ಲಿ ಸ್ವೀಕರಿಸುತ್ತಿರುವುದು ಎನ್ನಲಾದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ.
‘ಸೆಂಗೋಲ್’ ಎನ್ನುವ ಪದವು ತಮಿಳಿನ ‘ಸೆಮ್ಮೆöÊ’ ಅಂದರೆ ‘ಸದಾಚಾರ’ ಎನ್ನುವ ಪದದಿಂದ ಬಂದಿದೆ. ಇಂತಹ ಅಧಿಕಾರ ಹಸ್ತಾಂತರ ನಮ್ಮ ದೇಶದ ಸ್ವಾತಂತ್ರ್ಯದ ಅಧಿಕಾರ ಹಸ್ತಾಂತರಕ್ಕೆ ಸೂಕ್ತವಾದ ವಿಧಾನವೆಂದು ರಾಜಾಜಿಯು ನೆಹರು ಅವರಿಗೆ ತಿಳಿಸಿದರು. ಈ ಅಧಿಕಾರ ಹಸ್ತಾಂತರ ಪ್ರಕ್ರಿಯೆಯ ಜಾರಿಗಾಗಿ ತಮಿಳುನಾಡಿನ ‘ತಿರುವಾಡುತುರೈ ಅಧೀನಂ’ ಎನ್ನುವ ಐದು ಶತಮಾನ ಹಳೆಯ ಪರಂಪರೆಯನ್ನು ಹೊಂದಿದ್ದ ರಾಜಮನೆತನದ ೨೦ನೇ ಕುಲಗುರುಗಳಾದ ಶ್ರೀಲಶ್ರೀ ಅಂಬಲವಾನ ದೇಶಿಕ ಸ್ವಾಮಿ ಅವರೊಂದಿಗೆ ಚರ್ಚಿಸಿದರು. ಈ ಕುಲಗುರುಗಳು ಚಿನ್ನದ ಸೆಂಗೋಲ್ ನಿರ್ಮಾಣದ ಜವಾಬ್ದಾರಿಯನ್ನು ಮದ್ರಾಸಿನ ಆಭರಣ ವ್ಯಾಪಾರಿ ವುಮ್ಮಿಡಿ ಬಂಗಾರು ಚೆಟ್ಟಿ ಆಂಡ್ ಸನ್ಸ್ ಅವರಿಗೆ ನೀಡಿದ್ದರು. ಐದು ಅಡಿ ಉದ್ದದ ಈ ಸೆಂಗೋಲ್ನ ಮೇಲ್ಭಾಗದಲ್ಲಿ ನಂದಿಯ ಮೂರ್ತಿ ಹಾಗೂ ಅದರ ದಂಡದಲ್ಲಿ ತಮಿಳು ಶ್ಲೋಕವನ್ನು ಕೆತ್ತಿದರು. ಇದರಲ್ಲಿರುವ ನಂದಿಯು ಶಕ್ತಿ, ಸತ್ಯ ಹಾಗೂ ನ್ಯಾಯದ ಪ್ರತಿರೂಪ ಎಂದು ಹೇಳಲಾಗಿದೆ. ಅಂದು ಈ ಸೆಂಗೋಲ್ನ ಬೆಲೆ ಸುಮಾರು ರೂ.೧೫,೦೦೦/- ಇದ್ದಿರಬಹುದು. ಈ ಸೆಂಗೋಲ್ನ ಪ್ರತಿರೂಪ ಕರ್ನಾಟಕದ ಪಟ್ಟದಕಲ್ಲಿನ ದೇವಾಲಯಗಳ ಕಲ್ಲಿನ ಕೆತ್ತನೆಯಲ್ಲೂ ಕಾಣಬಹುದು.
ಸ್ವಾತಂತ್ರ್ಯದ ಅಧಿಕಾರ ಹಸ್ತಾಂತರದ ಕಾರ್ಯಕ್ರಮ ನಿಗದಿಯಾಗಿದ್ದ ೧೯೪೭ರ ಅಗಸ್ಟ್ ೧೪ ರಂದು ದೆಹಲಿಗೆ ತಿರುವಾಡುತುರೈ ಅಧೀನಂ ಇದರ ಉಪಪ್ರಮುಖರಾದ ಶ್ರೀಲಶ್ರೀ ಕುಮಾರಸ್ವಾಮಿ ತಂಬಿರಾನ್, ಅಧೀನಂ ಓದುವವರು, ಗಾಯಕ ಮಾಣಿಕಮ್ ಮತ್ತು ನಾದಸ್ವರ ವಿದ್ವಾನ್ ಟಿ.ಎನ್.ರಾಜರಾತಿನಂ ಪಿಳ್ಳೈ ಅವರುಗಳು ‘ಸೆಂಗೋಲ್’ ತೆಗೆದುಕೊಂಡು ಹೋಗಿ ಅಂದಿನ ಕೊನೆಯ ಬ್ರಿಟೀಷ್ ವೈಸ್ರಾಯ್ ಮೌಂಟ್ಬ್ಯಾಟನ್ಗೆ ನೀಡಿದರು. ಇದಾದ ನಂತರ ಇವರು ತಂದಿದ್ದ ಸೆಂಗೋಲ್ನ ಶುದ್ಧೀಕರಣ, ಕೋಳರ್ ಪಡಿಗಮ್ ಗೀತೆಯ ವಾಚನ, ದೇಶದ ನವನಾಯಕ ನೆಹರು ಅವರಿಗೆ ಪೀತಾಂಬರ ವಸ್ತçಧಾರಣೆ ಮಾಡಿಸಿ ವಿಧಿವಿಧಾನಗಳ ಪ್ರಕಾರ ‘ಇದು ನಮ್ಮ ಆದೇಶ, ಈಶ್ವರನ ಹೆಸರಿನಲ್ಲಿ (ದೇವರಿಗೆ ಅರ್ಪಣೆ/ತೃಪ್ತಿ ಆಗುವಂತೆ) ಸ್ವರ್ಗಕ್ಕೆ ಸಮಾನವಾದ ಶಾಸನ ಮತ್ತು ಆಡಳಿತವನ್ನು ನಡೆಸಬೇಕು’ ಎನ್ನುವ ಕೊನೆಯ ವಾಕ್ಯದ ಉಚ್ಛರಣೆಯ ಮೂಲಕ ದೇಶದ ಅಧಿಕಾರ ಹಸ್ತಾಂತರವು ಶಾಸ್ತ್ರೋಕ್ತವಾಗಿ ನಡೆಯಿತು. ಸೆಂಗೋಲ್ ಹಸ್ತಾಂತರ ಸಮಾರಂಭವನ್ನು ನೆಹರು ಸ್ವತಂತ್ರ ಭಾರತದ ರಾಷ್ಟçಧ್ವಜವನ್ನು ಹಾರಿಸಿ ಐತಿಹಾಸಿಕ ಟ್ರಿಸ್ಟ್ ವಿತ್ ಡೆಸ್ಟಿನಿ ಭಾಷಣದ ೧೫ ನಿಮಿಷ ಮೊದಲು ಮಾಡಲಾಯಿತು.
ತೇವರಂನ ೧೧ ಗೀತೆಗಳು, ಕೋಲಾರು ಪಥಿಕಂ ಶಿವನ ಆಶೀರ್ವಾದವನ್ನು ಕೋರಲು ಹಾಡಿದಾಗ, ಪಂಡಿತ್ ನೆಹರು ಅವರು ಸೆಂಗೋಲ್ ಹಿಡಿದಿದ್ದು, ಇದು ಶಾಶ್ವತ ಆಳ್ವಿಕೆಯ ಭರವಸೆಯೊಂದಿಗೆ ಅಧಿಕಾರದ ಲಕ್ಷಣಗಳನ್ನು ಸೂಚಿಸುತ್ತವೆ ಎನ್ನಲಾಗಿದೆ. ವೈದಿಕರು ಪಥಿಕಂನ್ನು ಪಠಿಸುತ್ತಿದ್ದಾಗ ನೆಹರೂ ಅವರು ಸೆಂಗೋಲ್ನ್ನು ಭಕ್ತಿಯಿಂದ ಹಿಡಿದಿರುವ ಕಾರ್ಯಕ್ರಮದ ಫೋಟೋಗಳು ತಿರುದುತುರೈ ಅಧೀನಂನಲ್ಲಿ ಲಭ್ಯವಿದ್ದು, ಇವು ಮಾಧ್ಯಮಗಳಲ್ಲೂ ಪ್ರಕಟವಾಗಿವೆ.
ಸೆಂಗೋಲ್ ಇತಿಹಾಸ ಮುನ್ನೆಲೆಗೆ:
೧೯೭೮ರಲ್ಲಿ ತಮಿಳುನಾಡು ಕಂಚಿ ಕಾಮಕೋಟಿ ಪೀಠದ ೬೮ನೇ ಪೀಠಾಧೀಶರು ಮಹಾಪೆರಿಯ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮೀಜಿಯು ಸಾಹಿತ್ಯಾಸಕ್ತರಾದ ಡಾ.ಬಿ.ಆರ್.ಸುಬ್ರಮಣಿಯಂ ಥೇವಾರಂ ಬಳಿ ಸ್ವಾತ್ಂತ್ರ್ಯ ಸಂದರ್ಭ ಅಧಿಕಾರ ಹಸ್ತಾಂತರದ ಪ್ರಕ್ರಿಯೆಯಲ್ಲಿ ವಿಧಿವತ್ತಾಗಿ ದೇಶಕ್ಕೆ ಸೆಂಗೋಲ್ ಹಸ್ತಾಂತರವಾದ ಕಥೆಯನ್ನು ಹಂಚಿಕೊಂಡಿದ್ದರು. ಈ ವಿಚಾರವನ್ನು ಸುಬ್ರಮಣಿಯಂ ಅವರು ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮೀಜಿಯ ಬಗ್ಗೆ ಬರೆದಿದ್ದ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಈ ವಿಚಾರ ಈ ಪುಸ್ತಕದ ಓದುಗರ ಮೂಲಕ ದೇಶದ ಗಮನ ಸೆಳೆಯಿತು. ಅಂದು ಹಸ್ತಾಂತರ ಆಗಿದ್ದ ಸೆಂಗೋಲ್ನ್ನು ಹುಡುಕಿದಾಗ ಉತ್ತರ ಪ್ರದೇಶದ ಪ್ರಯಾಗ್ರಾಜ್ ಪಟ್ಟಣದ ಆನಂದಭವನ ವಸ್ತುಸಂಗ್ರಹಾಲಯದಲ್ಲಿ ಸುರಕ್ಷಿತವಾಗಿತ್ತು. ನಮ್ಮ ಸಂಸ್ಕೃತಿ, ನ್ಯಾಯ, ಸತ್ಯ ಮತ್ತು ಧರ್ಮದ ಪ್ರತೀಕವಾದ ಈ ಸೆಂಗೋಲನ್ನು ಇತ್ತೀಚೆಗೆ ಉದ್ಘಾಟನೆಯಾದ ದೇಶದ ಹೊಸ ಸಂಸತ್ ಭವನದ ಒಳಗಡೆ ಸ್ಪೀಕರ್ ಪೀಠದ ಪಕ್ಕದಲ್ಲಿ ಸ್ಥಾಪಿಸಲಾಗಿದೆ.
ಕರಾವಳಿ ಭಾಷೆಯಲ್ಲಿ ‘ಸೈಂಗೋಲ್’:
ದೇಶದ ಹೊಸ ಸಂಸತ್ ಭವನದಲ್ಲಿ ಪ್ರತಿಷ್ಠಾಪನೆಯಾದ ಈ ಸೆಂಗೋಲ್ ಹೆಸರು ಇಂದು ಹೆಚ್ಚು ಪ್ರಚಲಿತದಲ್ಲಿದೆ. ಇದು ತಮಿಳು ಶಬ್ದವಾಗಿದ್ದು, ಇದರರ್ಥ ‘ರಾಜದಂಡ’. ಆದರೆ ದಕ್ಷಿಣಕನ್ನಡದ ಕರಾವಳಿ ಮತ್ತು ಕುಂದಾಪುರ ಕಡೆ ಇದೇ ರೀತಿ ಇರುವ ಮಣ್ಣಿನ ಕೆಲಸವನ್ನು ಮಾಡಲು ಬಳಸುವ ಗುದ್ದಲಿ ರೀತಿಯ ಕಬ್ಬಿಣದ ಹಾರೆಗೋಲನ್ನು ‘ಸೈಂಗೋಲ್’, ‘ಸಬ್ಬಲ್’ ಎನ್ನುತ್ತಾರೆ. ಬಹುಶಃ ಮದ್ರಾಸ್ ಸಂಸ್ಥಾನಕ್ಕೆ ಈ ಭಾಗ ಸೇರಿದ ಕಾರಣಕ್ಕೆ ಏನೋ ಇಂತಹ ದಂಡದ ರೀತಿಯ ಕಬ್ಬಿಣದ ಸಾಧನಕ್ಕೂ ಇದೇ ಹೆಸರನ್ನು ಇಟ್ಟಿರಬಹುದು.
ಒಟ್ಟಾರೆಯಾಗಿ ದೇಶದ ಇತಿಹಾಸ, ಸಂಸ್ಕೃತಿ ಮತ್ತು ಅಧಿಕಾರ ಹಸ್ತಾಂತರದ ಅನನ್ಯ ಕುರುಹಾಗಿರುವ ‘ಸೆಂಗೋಲ್’ನ್ನು ದೇಶದ ಹೊಸ ಸಂಸತ್ ಭವನದ ಲೋಕಸಭೆ ಸ್ಪೀಕರ್ ಪೀಠದ ಬಳಿ ಪ್ರತಿಷ್ಠಾಪಿಸಿ, ದೇಶಕ್ಕೆ ಸ್ವಾತಂತ್ರö್ಯ ದೊರೆತು ಅಧಿಕಾರ ಹಸ್ತಾಂತರವಾದ ಕ್ಷಣ ಮತ್ತು ಎಲ್ಲರೂ ದೇಶದ ಅಖಂಡತೆಯನ್ನು ಕಾಯ್ದುಕೊಂಡು ಹೋಗಬೇಕಾದ ಅನಿವಾರ್ಯತೆಯನ್ನು ನೆನಪಿಸುವಂತೆ ಮಾಡಿರುವುದು ದಿಟ.


