ರಾಷ್ಟ್ರಶಕ್ತಿ ಇನ್ವ್ಹೆಸ್ಟ್ ಕೋ- ಆರ್ಡಿನೇಶನ್ ಕಮೀಟಿ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಸಿಎಂ ಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿವಿಧ ಕಂಪನಿಗಳಿಂದ ವಂಚನೆಗೆ ಒಳಗಾದ ರಾಜ್ಯದ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ರಾಷ್ಟ್ರಶಕ್ತಿ ಇನ್ವ್ಹೆಸ್ಟ್ ಕೋ- ಆರ್ಡಿನೇಶನ್ ಕಮೀಟಿ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ರಾಷ್ಟ್ರಶಕ್ತಿ ಸಂಘಟನೆ ಜಿಲ್ಲಾಧ್ಯಕ್ಷ ಲಕ್ಷ್ಮೀಪುತ್ರ ಕಿರನಳ್ಳಿ ಮಾತನಾಡಿ, ೨೦೧೪ ರಲ್ಲಿ ಕೇಂದ್ರ ಸರಕಾರ ದೇಶದ ೧೮೫ ಕ್ಕಿಂತ ಹೆಚ್ಚು ಹಣಕಾಸು ಹಾಗೂ ವಿವಿಧ ಉದ್ಯಮ ಮಾಡುತ್ತಿರುವ ಖಾಸಗಿ ಕಂಪನಿಗಳನ್ನು ಏಕಾಏಕಿ ಬಂದ್ ಮಾಡಿ ಆದೇಶ ಹೊರಡಿಸಿತ್ತು. ಈ ಅನ್ಯಾಯದ ಕುರಿತು ಪಿಎಸಿಎಲ್, ಪ್ಯಾನಕಾರ್ಡ್ ಕ್ಲಬ್, ಅಗ್ರಿಗೋಲ್ಡ, ಸಮೃದ್ಧಿ ಜೀವನ ಹೀಗೆ ನಾನಾ ಕಂಪನಿಗಳ ಗ್ರಾಹಕರು ಕೋರ್ಟ್ ಮೆಟ್ಟಲೇರಿದವು. ವಿಚಾರಣೆ ನಡೆಸಿದ ಕೋರ್ಟ್ ಬಹುಸಂಖ್ಯಾತ ಕಂಪನಿಗಳ ಗ್ರಾಹಕರ ಪರವಾಗಿ ತೀರ್ಪು ನೀಡಿದೆ. ತೀರ್ಪಿನನ್ವಯ ಸೆಬಿ ಸಂಸ್ಥೆಗೆ ನಿರ್ದೇಶನ ನೀಡಿ ತೀರ್ಪು ಬಂದ ೩ ತಿಂಗಳ ಒಳಗೆ ವಂಚನೆ ಒಳಗಾದ ಗ್ರಾಹಕರ ಹಣ ಹಿಂದಿರುಗಿಸಲು ತಿಳಿಸಿದೆ. ಆದರೆ ತೀರ್ಪು ಬಂದು ೬-೭ ವರ್ಷವಾದರು ಸೆಬಿ ಹಾಗೂ ಕೇಂದ್ರ ಸರ್ಕಾರ ಕಂಪನಿಗಳ ಚಿರಾಸ್ಥಿಗಳನ್ನು ತಮ್ಮ ಅಧಿನದಲ್ಲಿಟ್ಟುಕೊಂಡು ಮಾರಾಟ ಮಾಡದೇ ಹಾಗೂ ಸರಕಾರವು ಹಸ್ತಾಂತರ ಮಾಡಿಕೊಳ್ಳದೇ ಗ್ರಾಹಕರಿಗೆ ಘನಘೋರ ಅನ್ಯಾಯ ಮಾಡುತ್ತಿವೆ. ಇದನ್ನು ಖಂಡಿಸಿ ವಂಚಿತ ಠೇವಣಿದಾರರ ಸಂಘಟನೆ ವಿಜಯಪುರ ಜಿಲ್ಲಾ ಘಟಕದಿಂದ ಕಳೆದ ೨೨ ದಿನಗಳಿಂದ ಸಾವಿರಾರು ಗ್ರಾಹಕರಿಂದ ಪ್ರತಿನಿತ್ಯ ಅನಿರ್ಧೀಷ್ಠಾವಧಿ ಹೋರಾಟ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಸರಕಾರದಿಂದಾಗಲಿ ಅಥವಾ ಜನಪ್ರತಿನಿಧಿಗಳಿಂದಾಗಲಿ ಯಾವುದೇ ತರಹದ ಭರವಸೆ ಸಿಕ್ಕಿಲ್ಲ. ಒಂದು ವೇಳೆ ನ್ಯಾಯ ಸಿಗಲು ಮತ್ತೆ ವಿಳಂಬವಾದಲ್ಲಿ ಇಡೀ ರಾಜ್ಯದ ಗ್ರಾಹಕರು ಅನಿರ್ಧೀಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಭಾಗ್ಯಶ್ರೀ ಭಾವಿಮನಿ, ಕಲಾವತಿ ತಾರಾಪೂರಮಠ, ಅಶ್ವಿನಿ ಚಿಂತಾಪೂರಮಠ, ಸತೀಶ, ಕೆ.ಎಸ್.ವಾಲಿಕಾರ, ವಿಠ್ಠಲ ವಡ್ಡರ, ಐ.ಎಸ್. ಕುಂಬಾರ, ಶಾಂತಾಬಾಯಿ ಕಟ್ಟಿಮನಿ ಮುಂತಾದವರು ಇದ್ದರು.

