ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ರಾಜ್ಯದ ಪ್ರತಿಷ್ಠಿತ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್ಕೆಸಿಸಿಐ) ನಿರ್ದೆಶಕರಾಗಿ ಗ್ರಾಮದ ಸಿ.ಎ. ರವೀಂದ್ರ ಎಸ್. ಕೋರೆ ಸತತವಾಗಿ ನಾಲ್ಕನೇಯ ಬಾರಿಗೆ ಆಯ್ಕೆಯಾಗಿದ್ದು ಗ್ರಾಮಸ್ಥರು ಹರ್ಷ ವಕ್ತಪಡಿಸಿದ್ದಾರೆ.
ರವಿಂದ್ರ ಕೋರೆಯವರು ವಾಣಿಜ್ಯ ಮತ್ತು ಕಾನೂನು ಪದವಿಧರರಾಗಿದ್ದು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚಿಮ್ಮಡ ಗ್ರಾಮದಲ್ಲಿಯೇ ಪೋರೈಸಿದ್ದು, ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಮಹಾಲಿಂಗಪುರದ ಎಸ್.ಸಿ.ಪಿ.(ಕೆಎಲ್ಇ) ಮಹಾವಿದ್ಯಾಲಯದಲ್ಲಿ ಪೋರೈಸಿದ್ದಾರೆ. ಇತ್ತೀಚೆಗೆ ನಡೆದ ಪ್ರತಿಷ್ಠಿತ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಚುನಾವಣೆಯಲ್ಲಿ ವೃತ್ತಿಪರ ಕ್ಷೇತ್ರದಿಂದ ನೂತನ ನಿರ್ದೆಶಕರಾಗಿ ಆಯ್ಕೆಯಾಗಿದ್ದಾರೆ.
ಉತ್ತರ ಕರ್ನಾಟಕ ಭಾಗದಿಂದ ಪ್ರಪ್ರಥಮ ಬಾರಿಗೆ ವೃತ್ತಿಪರ ಕ್ಷೇತ್ರದಿಂದ ಆಯ್ಕೆಯಾಗಿರುವ ರವೀಂದ್ರ ಕೋರೆ ಪತ್ರಿಕೆಯೊಂದಿಗೆ ಮಾತನಾಡಿ ಕಳೆದ ಬಾರಿ ಹುಬ್ಬಳ್ಳಿಯಲ್ಲಿ ರಾಜ್ಯದ ಯುವ ಕೈಗಾರಿಕೋದ್ಯಮಿಗಳಿಗೆ ಪ್ರೋತ್ಸಾಹ ಮತ್ತು ತರಬೇತಿ ನೀಡುವ ಮೂಲಕ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಕಾರ್ಯಕ್ರಮಗಳನ್ನು ಸಂಸ್ಥೆಯ ಮೂಲಕ ಹಮ್ಮಿಕೊಂಡಿದ್ದು ಅದನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದ್ದು ಶೀಘ್ರದಲ್ಲಿಯೇ ಇದರ ರೂಪುರೇಷೆ ತಯಾರಿಸಲಾಗುವುದೆಂದರು.
ಗ್ರಾ. ಪಂ. ಅಧ್ಯಕ್ಷರು, ಸದಸ್ಯರು, ಅಭಿಮಾನಿಗಳು ಹಾಗೂ ಸ್ಥಳಿಯ ವಿರಕ್ತ ಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಕೋರೆಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

