ರದ್ದುಗೊಳಿಸಿದ ಚಿಟ್ ಫಂಡ್ ಕಂಪನಿಗಳಲ್ಲಿ ಹೂಡಿರುವ ಸಾರ್ವಜನಿಕರ ಹಣ ಮರಳಿಸುವಂತೆ ರೈತ ಸಂಘ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಗ್ರಿಗೊಲ್ಡ್, ಪಿ.ಎ.ಸಿ.ಎಲ್, ಸಮೃದ್ಧ ಜೀವನ ಸೇರಿದಂತೆ ಇನ್ನಿತರ ಕಂಪನಿಗಳಲ್ಲಿ ಕಷ್ಟಪಟ್ಟು ದುಡಿದಿರುವ ಬಡವರು ಹಾಗು ರೈತರ ಹಣ ೬ ವರ್ಷದಲ್ಲಿ ದ್ವೀಗುಣವಾಗುತ್ತದೆ ಎಂಬ ನಂಬಿಕೆಯೊಂದಿಗೆ ಹೂಡಿಕೆ ಮಾಡಿದ್ದರು, ಆದರೆ ಕೇಂದ್ರ ಸರಕಾರ ಏಕಾಏಕಿ ೧೮೫ ಚಿಟ್ ಫಂಡ್ ಕಂಪನಿಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಎಲ್ಲಾ ಹೂಡಿಕೆದಾರರು ಚಿಂತೆ ಮಾಡುವಂತೆ ಮಾಡಿದೆ. ಈ ಕುರಿತು ಸರಕಾರ ಮಧ್ಯಸ್ತಿಕೆ ವಹಿಸಿ ಹಣ ಹಿಂತಿರಗಿಸಲು ಆದೇಶ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು
ಕಳೆದ ೨೦ ದಿನಗಳಿಂದ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬದ ವತಿಯಿಂದ ನಡೆಸಿರುವ ಹೋರಾಟಕ್ಕೆ ರೈತ ಸಂಘ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಬೆಂಬಲ ನೀಡಿ ಮಾತನಾಡುತ್ತಾ, ನಮ್ಮ ಜಿಲ್ಲೆಯಲ್ಲಿ ಅಂದಾಜು ೨ ಲಕ್ಷ ಗ್ರಾಹಕರು ಸುಮಾರು ೩೫೦ ಕೋಟಿ ರೂ ಗಳ ಹಣವನ್ನು ಹೂಡಿಕೆ ಮಾಡಿರುವ ಸಾರ್ವಜನಿಕರು, ರೈತರು, ಮಧ್ಯಮ ವರ್ಗದ ಜನರು ಎಲ್ಲಿ ಹೋಗಬೇಕು, ಈ ಚಿಟ್ ಫಂಡ್ ಕಂಪನಿಗಳಿಗೆ ಅನುಮತಿ ನೀಡಿ ಅವುಗಳಿಂದ ಹಣ ಠೇವಣಿ ಮಾಡಿಸಿಕೊಂಡಿರುವ ಸರಕಾರ ಈಗ ಕಂಪನಿಯ ಆಸ್ತಿಯನ್ನು ಹರಾಜು ಮಾಡಿ ಹೂಡಿಕೆದಾರರಿಗೆ ಹಣ ನೀಡಬೇಕು ಎಂದು ಆಗ್ರಹಿಸಿದರು.
ಇದೇ ತರಹ ರಾಜ್ಯವ್ಯಾಪಿ ಅಂದಾಜು ರೂ.೪೦ ಸಾವಿರ ಕೋಟಿ ಹಣ ಹೂಡಿಕೆ ಮಾಡಿದ್ದಾರೆ, ದೇಶವ್ಯಾಪಿ ಅಂದಾಜು ೪ ಲಕ್ಷ ೨೦ ಸಾವಿರ ಕೋಟಿ ಹಣ ಹೂಡಿಕೆ ಮಾಡಿದ್ದಾರೆ, ಈಗ ಕೇಂದ್ರ ಸರಕಾರ ದೇಶವ್ಯಾಪಿ ೩ ಲಕ್ಷ ಖಾಸಗಿ ಕಂಪನಿಗಳನ್ನು ಏಕಾಏಕಿ ಬಂದ ಮಾಡಿದ್ದಾರೆ, ವಂಚನೆಗೊಳಗಾದ ಸಂತ್ರಸ್ತರು ಕಳೆದ ೧೦ ವರ್ಷಗಳಿಂದ ನ್ಯಾಯಕ್ಕಾಗಿ ಸರಕಾರಕ್ಕೆ ಮನವಿ ಮಾಡುತ್ತಾ ಬಂದಿರುತ್ತಾರೆ, ಆದರೆ ಇಲ್ಲಿಯವರೆಗೆ ಸರಕಾರದ ಯಾವುದೇ ಅಧಿಕಾರಿಗಳು ಕಿಂಚಿತ್ತು ಕಾಳಜಿ ಮಾಡದೇ ಇರುವುದು ಹೂಡಿಕೆದಾರರಿಗೆ ಚಿಂತೆ ಮಾಡುವಂತೆ ಮಾಡಿದೆ, ಹೂಡಿಕೆದಾರರು ಏಜೆಂಟಗಳಿಗೆ ಹಣ ಕೊಡಿಸಿ ಎಂದು ನಿತ್ಯ ಕಿರಿ ಕಿರಿ ಮಾಡುವುದರಿಂದ ಮನನೊಂದ ಎಷ್ಟೊ ಜನ ಆತ್ಮಹತ್ಯೆ ಮಾಡಿಕೊಡಿರುವ ಘಟನೆಗಳು ನಡೆದಿವೆ, ೬ ವರ್ಷಗಳಲ್ಲಿ ಹಣ ದ್ವೀಗುಣ ಮಾಡಿಕೊಡುವುದಾಗಿ ಹೇಳಿರುವ ಚಿಟ್ ಫಂಡ್ ಕಂಪನಿಗಳು ಸಾವಿರಾರು ಕೋಟಿ ಹಣ ಮಾಡಿಕೊಂಡು ಸಾರ್ವಜನಿಕರಿಗೆ ಮೊಸ ಮಾಡಿರುವುದು ಮೇಲ್ನೊಟಕ್ಕೆ ಕಾಣಬರುತ್ತದೆ, ಬಡ್ಸ್ ಕಾಯಿದೆ ಪ್ರಕಾರ ೬ ತಿಂಗಳಲ್ಲಿ ಹಣ ಮರಳಿ ನೀಡಬೇಕು, ಕಂಪನಿಗಳು ಹಣ ಕೊಡದಿದ್ದರೆ ಸರಕಾರವೇ ಮಧ್ಯ ಪ್ರವೇಶಿಸಿ ಹಣ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ವಿಜಯಪುರ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷ ಸಂಗಪ್ಪ ಚಲವಾದಿ (ಟಕ್ಕೆ), ವಿಜಯಪುರ ತಾಲೂಕಾ ಅಧ್ಯಕ್ಷ ಮಹಾದೇವಪ್ಪ ತೇಲಿ, ವಿಜಯಪುರ ತಾಲೂಕಾ ಉಪಾಧ್ಯಕ್ಷ ಪ್ರಕಾಶ ತೇಲಿ, ಆಹೇರಿ(ಜ) ಅಧ್ಯಕ್ಷ ಆತ್ಮಾನಂದ ಭೈರೋಡಗಿ ಸೇರಿದಂತೆ ಅನೇಕರು ಇದ್ದರು.

