ಉದಯರಶ್ಮಿ ದಿನಪತ್ರಿಕೆ
ಇಂಡಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖಾಂತರ ಎರಡು ಕೋಟಿ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ೧೩ ಕೋಣೆಗಳ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದು ನನ್ನ ಆತ್ಮಕ್ಕೆ ಸಂತೃಪ್ತಿ ತಂದಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಬುಧವಾರ ತಾಲೂಕಿನ ಗುಂದವಾನ ಗ್ರಾಮದಲ್ಲಿ ಎನ್.ಎಚ್.ಎ ಅನುದಾನದದಡಿಯಲ್ಲಿ ನಿರ್ಮಿಸಿದ ನಮ್ಮೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಈ ಶಾಲಾ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ಆಗಬೇಕಿತ್ತು. ಆದರೆ ಕೆಲವರು ಅದಕ್ಕೆ ಅಡ್ಡಗಾಲು ಹಾಕಿ ಕಾರ್ಯಕ್ರಮ ಮಾಡಲೇಬಾರದು ಎಂದು ಗುಂದವಾನ ಗ್ರಾಮದ ಹಲವರಿಗೆ, ಪಂಚಾಯತ್ನವರಿಗೆ ಹೇಳಿದ ಪರಿಣಾಮ ಇಲ್ಲಿ ಹೆಚ್ಚಿನ ಜನ ಸೇರಲಿಲ್ಲ ಎಂದೂ ಸಹ ನನಗೆ ಗೊತ್ತಿದೆ. ಅಭಿವೃದ್ಧಿಯಲ್ಲಿ ಎಂದೂ ರಾಜಕಾರಣ ಮಾಡಬಾರದು. ಅದನ್ನು ಮೊದಲು ವಿರೋಧಿಗಳು ಅರಿತುಕೊಳ್ಳಬೇಕು. ನಾನು ಈ ಕಾರ್ಯ ಮಾಡಿದ್ದು ನನಗೆ ಸಂತಸ ತಂದಿದೆ. ಜಿಲ್ಲೆಗೆ ಒಂದು ಲಕ್ಷ ಹತ್ತು ಸಾವಿರ ಕೋಟಿ ರೂಪಾಯಿ ಅನುದಾನ ತಂದರೂ ಸಹ ನಾನು ನನ್ನ ಭಾವಚಿತ್ರವನ್ನು ಎಲ್ಲಿಯೂ ಹಚ್ಚಿಕೊಂಡಿಲ್ಲ. ನನಗೆ ಜನರ ಸೇವೆ ಮಾಡುವುದೊಂದೇ ಗುರಿ, ಆ ಕಾರ್ಯಗಳೇ ಇದನ್ನು ಜಿಗಜಿಣಗಿ ಅವರು ಮಾಡಿದ್ದು ಎಂದು ಹೇಳುತ್ತವೆ ಎಂದರು.
ನಾನು ಕಳೆದ ಬಾರಿ ಚುನಾವಣೆಯಲ್ಲಿ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದೆ, ಆದರೆ ಪಕ್ಷದ ಮುಖಂಡರು ಕಾರ್ಯಕರ್ತರು ಆ ಮಾತಿಗೆ ಒಪ್ಪಿಗೆ ನೀಡುತ್ತಿಲ್ಲ. ನನಗೂ ಸಹ ಇನ್ನೂ ಮುಂದೆ ಗುರಿ ಇದೆ. ಮುಂದೆಯೂ ಪಕ್ಷ ಬಯಸಿದರೆ ಮತ್ತೆ ಅಖಾಡಕ್ಕೆ ಧುಮ್ಮಿಕ್ಕಲಿದ್ದೇನೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಗ್ರಾಮದ ಅತ್ತಾರ ಪಟೇಲ ಮಾತನಾಡಿ, ಸಂಸದರು ಇಂತಹ ಅಭೂತಪೂರ್ವ ಕಾರ್ಯ ಮಾಡಿದ್ದಾರೆ. ಇಂತಹ ಅಭಿವೃದ್ಧಿ ಕಾರ್ಯಗಳ ಪೂಜೆಗೂ ಸಹ ಅಡ್ಡಗಾಲು ಹೊಡೆಯುವ ರಾಜಕಾರಣ ಮಾಡುತ್ತಿರುವುದು ಮನಸ್ಸಿಗೆ ನೋವು ತಂದಿದೆ ಎಂದರು.
ವೇದಿಕೆಯಲ್ಲಿ ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎ. ನಾಯಕ, ಜ್ಞಾನೇಶ್ವರ ಠೋಕೆ, ಎಲ್.ಡಿ. ವಾಲೀಕಾರ ಸಿದ್ದಲಿಂಗ ಖಾನಾಪುರ, ಮಹಾದೇವ ಕದರಿ, ಎ.ಎಂ. ಪಾಟೀಲ, ಚಂದ್ರಕಾಂತ ಪೂಜಾರಿ, ಸಿದ್ದನಗೌಡ ಪಾಟೀಲ, ಆರ್.ಎಸ್. ರುದ್ರವಾಡಿ ರಾಘವೇಂದ್ರ ಕಾಪಸೆ, ಸಾಹೇಬಗೌಡ ಚೌದರಿ, ಮಹಾದೇವಿ ವಾಲಿಕಾರ, ಎಂ.ಎಂ. ಗಬಸಾವಳಗಿ, ದೇವೇಂದ್ರ ಕುಂಬಾರ, ಸೇರಿದಂತೆ ಇನ್ನಿತರರು ಇದ್ದರು.
“ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೃತರಾದಾಗ ಆಗಿನ ಕಾಂಗ್ರೇಸ್ ಸರಕಾರ ದೆಹಲಿಯಲ್ಲಿ ಅವರಿಗೆ ಹೂಳಲು ೬ ಅಡಿ ಸ್ಥಳ ನೀಡಲಿಲ್ಲ. ಈಗ ನಮ್ಮ ಬಿಜೆಪಿ ಸರಕಾರ ಅಂಬೇಡ್ಕರ್ ಅವರು ಹುಟ್ಟಿ ಬೆಳೆದ ಮನೆ ಸೇರಿದಂತೆ ಅವರು ಕಲಿತ ಶಾಲೆ, ಸೇರಿ ಒಟ್ಟು ೭ ಸ್ಥಳಗಳನ್ನು ನಮ್ಮ ಸರಕಾರ ಅಭಿವೃಧ್ಧಿಪಡಿಸಿ ಪ್ರೇಕ್ಷಣೀಯ ಸ್ಥಳವನ್ನಾಗಿಸಿದೆ. ೭೦ ವರ್ಷ ರಾಜಕಾರಣ ಮಾಡಿದ ಕಾಂಗ್ರೇಸ್ ಪಕ್ಷಕ್ಕೆ ದೇಶದ ಜನರಿಗೆ ಶುಧ್ಧ ಕುಡಿಯುವ ನೀರು ಕೊಡುವುದು ಸಾಧ್ಯವಾಗಿರಲಿಲ್ಲ. ಮೋದಿ ಸರಕಾರ ಈಗ ದೇಶಾದ್ಯಂತ ಜನರಿಗೆ ಶುಧ್ಧ ಕುಡಿಯುವ ನೀರಿನ ಪೂರೈಕೆ ಮಾಡುತ್ತಿದೆ. ಕೇಂದ್ರ ಸರಕಾರದ ಅನುದಾನದ ಕಾಮಗಾರಿಗಳಿಗೆ ನನ್ನನ್ನು ಆಹ್ವಾನಿಸದೇ ನೀವೆ-ಕಾಮಗಾರಿಗಳ ಪೂಜೆ ಮಾಡಿದ್ದೀರಿ, ಆದರೆ ನಾನು ಕೆಲವೊಂದೇ ಅಭಿವೃಧ್ಧಿ ಕಾಮಗಾರಿಗಳಿಗೆ ಪೂಜೆ ಮಾಡಲು ಹೊರಟರೆ ಅದನ್ನು ಏಕೆ ತಡೆಯಲು ಪ್ರಯತ್ನಿಸುತ್ತೀರಿ?”
– ರಮೇಶ ಜಿಗಜಿಣಗಿ
ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ

