ಮಕ್ಕಳ ರಕ್ಷಣಾ ಘಟಕದ ಪ್ರಾಯೋಜಕತ್ವ ಯೋಜನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಂದೆಯಿಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ ೨೪,೦೦೦ ರೂ. ಸ್ಕಾಲರ್ಶಿಪ್ ಸೌಲಭ್ಯವಿದ್ದು, ಜನಸಾಮಾನ್ಯರಿಗೆ ಈ ವಿಚಾರ ತಿಳಿದೇ ಇಲ್ಲ. ಆದ್ದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳ ಮುಖಾಂತರ ಹರಿದಾಡುತ್ತಿದ್ದು, ಈ ವ್ಯಾಟ್ಸಾಫ್ ಸಂದೇಶ ಜನರನ್ನು ಗೊಂದಲಕ್ಕೀಡು ಮಾಡಿದ್ದು, ಈ ತಪ್ಪು ಸಂದೇಶ ನೋಡಿದ ಜನರು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮಕ್ಕಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ಸೇರಿ ಎಲ್ಲಾ ಕಡೆ ಜನ ಅಲೆದಾಡುತ್ತಿದ್ದಾರೆ. ಮಕ್ಕಳ ರಕ್ಷಣಾ ಕಚೇರಿಯಲ್ಲಿ ಪ್ರತಿ ದಿನ ನೂರಾರು ಜನ ಬಂದು ವಿಚಾರಿಸುತ್ತಿರುವುದು ಮತ್ತು ಅನೇಕರು ಫೋನ್ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಆದ್ದರಿಂದ, ಸಾರ್ವಜನಿಕರು ಇಂತಹ ಸಂದೇಶಗಳಿಗೆ ಮೋಸ ಹೋಗಬಾರದು.
ಪ್ರಾಯೋಜಕತ್ವ ಯೋಜನೆ : ಪ್ರಾಯೋಜಕತ್ವ ಯೋಜನೆಯಡಿ ಮಕ್ಕಳನ್ನು ಕುಟುಂಬದ ವಾತಾವರಣದಲ್ಲಿ ಬೆಳೆಯುವಂತೆ ಬೆಂಬಲ ನೀಡುವುದು ಪ್ರಾಯೋಜಕತ್ವ ಯೋಜನೆ ಮುಖ್ಯ ಉದ್ಧೇಶವಾಗಿದೆ.
ಈ ಯೋಜನೆಯ ಮಾನದಂಡಗಳಂತೆ ಬಾಲಮಂದಿರ, ವೀಕ್ಷಣಾಲಯಗಳಿಂದ ಕುಟುಂಬಗಳಿಗೆ ಮರಳಿದ ಮಕ್ಕಳು, ಪೋಕ್ಷೋ ಸಂತ್ರಸ್ತ ಮಕ್ಕಳು, ತಾಯಿ ವಿಧವೆ ಅಥವಾ ವಿಚ್ಛೇದಿತ ಅಥವಾ ಪರಿತ್ಯಕ್ತಳಾಗಿದ್ದರೆ, ಮಕ್ಕಳು ಅನಾಥರಾಗಿದ್ದರೆ ಮತ್ತು ವಿಸ್ತೃತ ಕುಟುಂಬದಿಮದ ಜೀವಿಸುತ್ತಿದ್ದರೆ, ಪೋಷಕರು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಲ್ಲಿ, ತಮ್ಮ ಮಕ್ಕಳನ್ನು ಪೋಷಕರು ನೋಡಿಕೊಳ್ಳಲು ದೈಹಿಕವಾಗಿ ಹಾಗೂ ಆರ್ಥಿಕವಾಗಿ ಅಸಮರ್ಥರಾಗಿದ್ದರೆ, ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ಪೋಷಣೆ) ಕಾಯ್ದೆ ೨೦೧೫ರ ಪ್ರಕಾರ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳು ಅಂದರೆ ಮನೆ ಇಲ್ಲದೇ, ನೈಸರ್ಗಿಕ ವಿಕೋಪಕ್ಕೆ ಒಳಗಾದವರು, ಬಾಲಕಾರ್ಮಿಕರು, ಬಾಲ್ಯವಿವಾಹ ಸಂತ್ರಸ್ತ ಮಕ್ಕಳು, ಕಳ್ಳ ಸಾಗಾಣೆಗೊಳಗಾದ ಮಕ್ಕಳು, ಎಚ್ಐವಿ/ಏಡ್ಸ್ ಬಾಧಿತ (ಪೀಡಿತ) ಮಕ್ಕಳು, ದೈಹಿಕ ಅಂಗವಿಕಲತೆಯುಳ್ಳ ಮಕ್ಕಳು, ಕಾಣೆಯಾದ ಅಥವಾ ಓಡಿಹೋದ ಮಕ್ಕಳು, ಬಾಲ ಭಿಕ್ಷುಕರು ಅಥವಾ ಬೀದಿಬದಿ ಮಕ್ಕಳು, ಚಿತ್ರಹಿಂಸೆ ಅಥವಾ ನಿಂದನೆ ಅಥವಾ ಬೆಂಬಲ ಮತ್ತು ಪುನರ್ವಸತಿ ಅಗತ್ಯವಿರುವ ಶೋಷಿತ ಮಕ್ಕಳು, ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯ ಅನುಮೋದಿತ ಮಕ್ಕಳು ಸಹ ಈ ಪ್ರಾಯೋಜಕತ್ವ ಯೋಜನೆಗೆ ಅರ್ಹರಾಗಿದ್ದಾರೆ.
ಈ ಯೋಜನೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಾಲಯ, ವಿವೇಕ ನಗರ ಪಶ್ಚಿಮ, ವಿಜಯಪುರ ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
