ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳದಿಂದ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ವಾಗ್ದಾನದಂತೆ ಪರಿಸರ ಸ್ನೇಹಿ ಸುಂದರ ಗಣೇಶನ ವಿಗ್ರಹ ಪ್ರತಿಷ್ಠಾಪನೆ, ಹಿಂದೂ ಸಂಪ್ರದಾಯಿಕ ವಾದ್ಯಗಳ ಭವ್ಯ ಮೆರವಣಿಗೆ ಹಾಗೂ ಉತ್ತಮ ಅಲಂಕಾರ ಮಾಡಿದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮಂಡಳಿಗಳಿಗೆ ಬುಧವಾರ ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷರಾದ ರಾಘವ್ ಅಣ್ಣಿಗೇರಿ ಅವರು ಬಹುಮಾನ ಮೊತ್ತ ವಿತರಿಸಿದರು.
ಈ ಬಾರಿಯ ಗಣೇಶ ಉತ್ಸವದಲ್ಲಿ ಪರಿಸರ ಸ್ನೇಹಿ ಫೈಬರ್ ನಲ್ಲಿ ಸುಂದರ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಜೋರಾಪುರ ಪೇಟದ ಶ್ರೀ ಶಂಕರಲಿಂಗ ಗಜಾನನ ಮಂಡಳಿಯ ಸಂಕಲ್ಪ ಸಿದ್ಧಿ ವಿನಾಯಕನ ಮೂರ್ತಿಗೆ ಹಾಗೂ ಅದೇ ಮಂಡಳಿಯ ಸದಸ್ಯರಿಂದ ಹಿಂದೂ ಸಂಪ್ರದಾಯದಂತೆ ವಾರಕರೀ ನೃತ್ಯ ಹಾಗೂ ತಾಷಾ, ಡೊಳ್ಳು ವಾದನಗಳ ಕಲೆಯನ್ನು ಅದ್ಭುತವಾಗಿ ವಿಜಯಪುರ ಜನತೆಗೆ ಮನಮುಟ್ಟುವ ಹಾಗೆ ನುಡಿಸಿ, ಮೆರವಣಿಗೆಯ ಉದ್ದಕ್ಕೂ ಭವ್ಯ ಪ್ರದರ್ಶನ ನೀಡಿದ ಹಿನ್ನೆಲೆ ರೂ.51,000 ಸಾವಿರ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಉತ್ತಮ ಅಲಂಕಾರ ಮಾಡಿ ಗಣೇಶನನ್ನು ಪ್ರತಿಷ್ಠಾಪಿಸಿದ್ದ ವಿಜಯಪುರ ನಗರದ ಜೀಜಾಮಾತಾ ಗಲ್ಲಿ, ಹೊಸ ವಿಠಲ ಮಂದಿರ ರಸ್ತೆ ಹತ್ತಿರದ ಬಾಲ ಗಜಾನನ ತರುಣ ಮಂಡಳಿಗೆ ರೂ.21,000 ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಶಿವರುದ್ರ ಬಾಗಲಕೋಟ ಸೇರಿದಂತೆ ಎರಡು ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.

