ಅಧ್ಯಕ್ಷರಾಗಿ ಸಾಧೀಕ ಸುಂಬಡ, ಉಪಾಧ್ಯಕ್ಷರಾಗಿ ಸುಮಾ ಕತ್ತಿ ಅವಿರೋಧ ಆಯ್ಕೆ!
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕುತೂಹಲ ಮೂಡಿಸಿದ ಆಲಮೇಲ ಪಟ್ಟಣ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಚುನಾವಣೆ ಮಂಗಳವಾರ ಪಟ್ಟಣದ ಪಟ್ಟಣ ಪಂಚಾಯತ ಸಭಾಭವನದಲ್ಲಿ ನಡೆಯಿತು.
ಬೆಳಗ್ಗೆ ೧೧ ಗಂಟೆಗೆ ಪ್ರಾರಂಭವಾದ ಚುನಾವಣಾ ಪ್ರಕ್ರೀಯೆ ಮದ್ಯಾಹ್ನ ೩:೩೦ ಕ್ಕೆ ಮುಕ್ತಾಯಗೊಂಡಿತು. ೧೧ ಗಂಟೆಗೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸಿನ ಸಾಧೀಕ ಸುಂಬಡ, ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುಮಾ ಕತ್ತಿ ಇಬ್ಬರೇ ನಾಮಪತ್ರ ಸಲ್ಲಿಸಿದ್ದರು. ನಂತರ ೩:೧೫ ವರೆಗೆ ನಾಮಪತ್ರ ಪರಿಶೀಲಿಸಲಾಯಿತು. ನಂತರ ೩:೩೦ ಕ್ಕೆ ಅಧ್ಯಕ್ಷರಾಗಿ ಕಾಂಗ್ರೇಸಿನ ವಾರ್ಡ್ ೦೯ರ ಸದಸ್ಯ ಸಾಧೀಕ ಸುಂಬಡ, ಉಪಾಧ್ಯಕ್ಷರಾಗಿ ಬಿಜೆಪಿಯ ವಾರ್ಡ ೦೪ ಸದಸ್ಯೆ ಸುಮಾ ಕತ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆಲಮೇಲ ತಹಶೀಲ್ದಾರ ಕೆ.ವಿಜಯಕುಮಾರ ಘೋಷಿಸಿದರು.
ಒಟ್ಟು ೧೯ ಜನ ಸದಸ್ಯರ ಬಲ ಇರುವ ಆಲಮೇಲ ಪಟ್ಟಣ ಪಂಚಾಯತಿಯಲ್ಲಿ ೧೮ ಜನ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾದರು. ವಾಡ್ ನಂ.೧೫ ರ ಪಕ್ಷೇತರ ಸದಸ್ಯ ಮಾತ್ರ ಗೈರಾಗಿ ಉಳಿದರು.
ಆಲಮೇಲ ಪಪಂ ನಲ್ಲಿ ಒಟ್ಟು ೧೯ ಜನ ಸದಸ್ಯರ ಪೈಕಿ ೦೯ ಬಿಜೆಪಿ, ೦೭ ಕಾಂಗ್ರೇಸ್ ಹಾಗೂ ೦೩ ಪಕ್ಷೇತರ ಸದಸ್ಯರ ಬಲ ಹೊಂದಿದ್ದು, ಪಟ್ಟಣದ ಅಭಿವೃದ್ಧಿಗಾಗಿ ಕಾಂಗ್ರೇಸ್, ಬಿಜೆಪಿ ಹಾಗೂ ಪಕ್ಷೇತರ ಸದಸ್ಯರ ಒಮ್ಮತದ ಮೇರೆಗೆ ಕಾಂಗ್ರೇಸ್ ಪಕ್ಷಕ್ಕೆ ಅಧಿಕಾರ ಗದ್ದುಗೆ ಹಿಡಿಯಲು ಸಾಧ್ಯವಾಯಿತು. ಬಿಜೆಪಿಯು ಮಹಿಳಾ ಉಪಾಧ್ಯಕ್ಷ ಸ್ಥಾನ ಪಡೆದು ತೃಪ್ತಿಗೊಂಡಿದೆ.
ಒಟ್ಟಾರೆಯಾಗಿ ಪಟ್ಟಣದ ಹಿರಿಯರ, ಮುಖಂಡರ ಹಾಗೂ ಎಲ್ಲ ಜನಪ್ರತಿನಿಧಿಗಳ ಆಸೆಯಂತೆ ಪಟ್ಟಣದ ಅಭಿವೃದ್ಧಿಗಾಗಿ ಪಕ್ಷ ಭೇದ ಮರೆತು ಎಲ್ಲರೂ ಒಗ್ಗೂಡಿ ಪಟ್ಟಣದ ಅಭಿವೃದ್ಧಿಗೋಸ್ಕರ ಒಂದಾಗಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಂಡು ಚುನಾವಣೆ ನಡೆಸಲಾಗಿದೆ ಎಂದು ಪಪಂ ಸದಸ್ಯ ಅಶೋಕ ಕೊಳಾರಿ ಹರ್ಷ ವ್ಯಕ್ತ ಪಡಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಾಧೀಕ ಸುಂಬಡ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಪಕ್ಷ ಭೇದ ಮರೆತು ನನಗೆ ಅವಿರೋಧವಾಗಿ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದೀರಿ, ಅದಕ್ಕಾಗಿ ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತಗೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ನಂತರ ಅಧ್ಯಕ್ಷ – ಉಪಾಧ್ಯಕ್ಷರ ಬೆಂಬಲಿಗರು ಗುಲಾಲ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಸುರೇಶ ನಾಯಕ, ಕಂದಾಯ ಅಧಿಕಾರಿ ಎಮ್.ಎ.ಅತ್ತಾರ ಪಪಂ ಸದಸ್ಯರು ಸಿಬ್ಬಂದಿಗಳು ಹಾಗೂ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.

“ಪಕ್ಷೇತರ ಸದಸ್ಯರು ನಮಗೆ ಬೆಂಬಲಿಸುವ ನಿರೀಕ್ಷೆಯಲ್ಲಿದ್ದೆವು. ಆದರೆ ಅವರು ನಮಗೆ ಬೆಂಬಲಿಸದ ಕಾರಣ ಸ್ಥಳೀಯ ಪಪಂ ಸದಸ್ಯರ ಹೊಂದಾಣಿಕೆಯಿಂದ ನಮ್ಮ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ.”
– ರಮೇಶ ಭೂಸನೂರ
ಮಾಜಿ ಶಾಸಕರು, ಸಿಂದಗಿ

“ನೂತನ ಆಲಮೇಲ ತಾಲೂಕ ಕೇಂದ್ರವಾಗಿದ್ದು, ಜಿಲ್ಲೆಯಲ್ಲಿ ಅತೀ ಹಿಂದುಳಿದ ಪ್ರದೇಶವಾಗಿದೆ. ಅದಕ್ಕಾಗಿ ಈ ನೂತನ ತಾಲೂಕು ಅಭಿವೃದ್ಧಿಗಾಗಿ ನಾನು ಶಾಸಕನಾದ ಮೇಲೆ ಹಲವಾರ ಅಭಿವೃದ್ಧಿಯ ಯೋಜನೆಗಳನ್ನು ಇಲ್ಲಿಗೆ ತರಲಾಗಿದೆ. ಇದೇ ತರಹ ಪಟ್ಟಣದ ಅಭಿವೃದ್ಧಿಗಾಗಿ ಇಲ್ಲಿನ ಎಲ್ಲ ಸದಸ್ಯರು ಪಕ್ಷ ಭೇದ ಮರೆತು ಕಾಂಗ್ರೇಸ್ ಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿರುವ ಕಾರಣ ಇಂದು ಇಲ್ಲಿ ನಮ್ಮ ಪಕ್ಷ ಅಧಿಕಾರ ಗದ್ದಗೆ ಹಿಡಿಯಲು ಸಾಧ್ಯವಾಗಿದೆ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ

