ಲೇಖನ
– ಸಂತೋಷ್ ರಾವ್ ಪೆರ್ಮುಡ.
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ:೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
ಮನುಷ್ಯನು ಜೀವನದಲ್ಲಿ ಸದಾ ಖುಷಿಯಾಗಿರುವುದನ್ನೇ ಇಷ್ಟಪಡುತ್ತಾನೆ. ಅಚಾನಕ್ಕಾಗಿ ಏನಾದರೂ ಸಹಿಸಲು ಸಾಧ್ಯವಾಗದಂತಹ ತೊಂದರೆ ಯಾ ಸಮಸ್ಯೆ ಬಂದಲ್ಲಿ ತಕ್ಷಣ ಅದರಿಂದ ವಿಚಲಿತನಾಗುತ್ತಾನೆ ಮತ್ತು ಅದರಿಂದ ಹೊರಬರಲು ಪ್ರಯತ್ನಿಸುತ್ತಾನೆ. ಆದರೆ ಅದೇ ಸಮಸ್ಯೆಯು ತೀರಾ ನಿಧಾನ ಗತಿಯಲ್ಲಿ ಬಂದಾಗ ಮನುಷ್ಯನು ಆ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸದೇ ಆ ಸಮಸ್ಯೆಗೆ ನಿಧಾನವಾಗಿ ಹೊಂದಿಕೊಂಡು ಹೋಗಿ ಕೊನೆಗೊಂದು ದಿನ ಆ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡು ಅದರಲ್ಲೇ ತನ್ನ ಪ್ರಾಣವನ್ನು ಬಿಡುತ್ತಾನೆ. ಇದು ಒಂದು ಕಪ್ಪೆಯನ್ನು ನಿಧಾನವಾಗಿ ಜೀವಂತವಾಗಿ ಕುದಿಸುವುದನ್ನು ವಿವರಿಸುವಂತಹ ಕಥೆಯಾಗಿದೆ. ‘ಒಂದು ಜೀವಂತವಾಗಿರುವ ಕಪ್ಪೆಯನ್ನು ಇದ್ದಕ್ಕಿದ್ದಂತೆ ಕುದಿಯುತ್ತಿರುವ ನೀರಿನೊಳಗೆ ಹಾಕಿದರೆ ಅದು ತಕ್ಷಣವೇ ಅದರಿಂದ ಹಾರಿ ಹೊರಗೆ ಹೋಗುತ್ತದೆ. ಆದರೆ ಅದೇ ಕಪ್ಪೆಯನ್ನು ಶುದ್ಧವಾದ ಮತ್ತು ತಣ್ಣನೆಯ ನೀರಿನಲ್ಲಿ ಹಾಕಿದರೆ ಅದು ಅದರೊಳಗಡೆಯೇ ಹಾಯಾಗಿರುತ್ತದೆ, ಅದು ಸಹಜವೂ ಹೌದು. ಈಗ ಅದೇ ನೀರಿನ ಪಾತ್ರೆಗೆ ಬೆಂಕಿಯನ್ನು ಹಚ್ಚಿ ನೀರನ್ನು ನಿಧಾನವಾಗಿ ಕುದಿಸಿದರೆ ಅದು ತಕ್ಷಣಕ್ಕೆ ಹಾರಿ ಹೋಗುವುದಿಲ್ಲ. ಅಂದರೆ ಅದು ತನಗೆ ಬಂದೊದಗಿರುವ ಅಪಾಯವನ್ನು ತಕ್ಷಣಕ್ಕೆ ಗ್ರಹಿಸುವುದಿಲ್ಲ ಮತ್ತು ನೀರಿನ ಬಿಸಿಗೆ ಹೊಂದಿಕೊಳ್ಳುತ್ತಾ ಹೋಗುತ್ತದೆ. ಅದೇ ನೀರು ಇನ್ನಷ್ಟು ಬಿಸಿಯಾಗುತ್ತಾ ಹೋಗಿ ಕುದಿಯುವ ಬಿಂದುವನ್ನು ತಲುಪಿದಾಗಲೂ ಕಪ್ಪೆಯ ಹೊಂದಿಕೊಂಡು ಹೋಗುವ ಮನಃಸ್ಥಿತಿಯಿಂದಾಗಿ ಕೊನೇಯ ಕ್ಷಣದಲ್ಲಿ ಪಾತ್ರೆಯಿಂದ ಹೊರಬರಲಾರದೇ ಅಲ್ಲೇ ಉಳಿದು ಸಾಯುತ್ತದೆ.’

ಮನುಷ್ಯನೂ ಸದಾ ಕಪ್ಪೆಯ ಮನಸ್ಥಿತಿಯ ರೀತಿಯಲ್ಲೇ ಇರುತ್ತಾನೆ. ಮನುಷ್ಯ ನಿಧಾನವಾಗಿ ಬರುತ್ತಿರುವ ಬಹು ದೊಡ್ಡ ಗಂಡಾಂತರಗಳನ್ನು ಗುರುತಿಸುವಲ್ಲಿ ವಿಫಲನಾಗಿ ಆ ಸಮಸ್ಯೆಯು ಬೃಹದಾಕಾರಕ್ಕೆ ಬೆಳೆದು ಅದು ಆತನ ಜೀವಕ್ಕೇ ಕುತ್ತಾಗುತ್ತದೆ. ಆದರೆ ಅದೇ ಸಮಸ್ಯೆಯನ್ನು ಪ್ರಾರಂಭದ ಹಂತದಲ್ಲೇ ಗುರುತಿಸಿ ಅದರಿಂದ ಹೊರಬಂದಾತ ಅಥವಾ ಪರಿಹರಿಸಿಕೊಂಡಾತ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡು ಸಾಯಲಾರ. ಕಪ್ಪೆಯ ಕಥೆಯಂತೆ ಸಮಸ್ಯೆಯು ಬಂದಿದೆ ಆದರೆ ಅದು ಅಷ್ಟೊಂದು ಗಂಭೀರವಲ್ಲ ಎನ್ನುವ ಮನಃಸ್ಥಿತಿಗೆ ಯಾವಾಗ ನಾವು ಬರುತ್ತೇವೋ ಅಂತಹ ಸಂದರ್ಭದಲ್ಲಿ ಸಮಸ್ಯೆ ಗಂಭೀರ ಸ್ಥಿತಿಗೆ ತಲುಪಿದಾಗ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲಾರದೆ ಅದರೊಳಗೇ ಸಿಲುಕಿ ಸಾಯುವ ಪರಿಸ್ಥಿತಿ ಬರುತ್ತದೆ. ಕುದಿಯುವ ನೀರಿನಲ್ಲಿ ಇರುವ ಕಪ್ಪೆಯ ಸ್ಥಿತಿಯ ಕಥೆಯನ್ನು ಸಾಮಾನ್ಯವಾಗಿ ಮನುಷ್ಯನ ಜೀವನದಲ್ಲಿ ಬಂದೊದಗುವ ವಿವಿಧ ಸನ್ನಿವೇಷಗಳು ಮತ್ತು ಅವುಗಳನ್ನು ಎದುರಿಸುವ ಗುಣಕ್ಕೆ ಉದಾಹರಣೆಯಾಗಿದೆ.
ಸಮಸ್ಯೆಗಳಿಗೆ ಹೊಂದಿಕೊಂಡು ಸಾಗುವಂತಹ ಗುಣವು ಅಭಿವೃದ್ಧಿಯ ಪಥದೆಡೆಗೆ ಸಾಗುವ ಮನೋಭಾವವಿರುವ ವ್ಯಕ್ತಿಯ ದೃಷ್ಟಿಯಿಂದ ಒಳ್ಳೆಯದಲ್ಲ. ಸಮಸ್ಯೆ ಬರಬಹುದೆಂಬ ಸುಳಿವು ದೊರೆತಾಕ್ಷಣ ಅದನ್ನು ಗುರುತಿಸಿ ಪರಿಹರಿಸಿಕೊಂಡರೆ ಬಾಳು ಬಂಗಾರವಾಗುತ್ತದೆ. ನಿಧಾನವಾಗಿ ಬರುವ ಅಪಾಯಗಳಿಗೆ ಹೊಂದಿಕೊಂಡು ಹೋಗುವ ಗುಣವು ನಮ್ಮಲ್ಲೂ ಇದ್ದು, ನಿಧಾನವಾಗಿ ನಮ್ಮ ಅರಿವಿಗೇ ಬಾರದಂತೆ ಆಗುವ ವಿವಿಧ ಬದಲಾವಣೆಗಳಿಂದ ಕೊನೆಗೆ ಅನಪೇಕ್ಷಿತವಾದ ಪರಿಣಾಮಗಳು ಆಗದಂತೆ ಎಚ್ಚರದಿಂದ ಇರಬೇಕು.


