ವಿಧಾನಸೌಧದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ಎಂ.ಬಿ.ಪಾಟೀಲ ನೇತೃತ್ವದಲ್ಲಿ ಸಣ್ಣ ನೀರಾವರಿ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ಜತೆ ಸಭೆ | ಸಂಪುಟಕ್ಕೆ ವಿಷಯ ಮಂಡನೆ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ವಿಜಯಪುರ ಜಿಲ್ಲೆ, ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಮದಾಪುರ ಕೆರೆಯಲ್ಲಿ ನೀರು ತುಂಬಿದಾಗ ಮುಳುಗಡೆ ಆಗುವ 178 ಎಕರೆ ಜಮೀನನ್ನು ರೈತರ ಕೋರಿಕೆಯ ಮೇರೆಗೆ ಭೂಸ್ವಾಧೀನಕ್ಕೆ ಸಕಾರಾತ್ಮಕ ತೀರ್ಮಾನವಾಗಿದ್ದು ಈ ವಿಷಯವನ್ನು ಸಂಪುಟದ ಮುಂದೆ ತರಲು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂಬಂಧವಾಗಿ ಗುರುವಾರ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಮತ್ತು ಎಂ ಬಿ ಪಾಟೀಲ ಇಬ್ಬರೂ ವಿಧಾನಸೌಧದಲ್ಲಿ ಸಣ್ಣ ನೀರಾವರಿ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ಜತೆ ಸಭೆ ನಡೆಸಿದರು.
ಮುಳುಗಡೆ ಪ್ರದೇಶದ ರೈತರಿಗೆ ಆಗುತ್ತಿರುವ ಅನಾನುಕೂಲ ಮತ್ತು ನಷ್ಟ ತಪ್ಪಿಸಲು ಸ್ವಾಧೀನದ ಅಗತ್ಯ ಇದ್ದು, ಆದಷ್ಟು ಬೇಗ ಈ ಕುರಿತು ಸಂಪುಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಕ್ಷೇತ್ರದ ಶಾಸಕರೂ ಆದ ಸಚಿವ ಪಾಟೀಲ ಅವರು ಮಾತನಾಡಿ, ’16ನೇ ಶತಮಾನದಲ್ಲಿ ಆದಿಲ್ ಶಾಹಿಗಳು ಕಟ್ಟಿಸಿದ ಮಮದಾಪೂರ ಕೆರೆ 1,200 ಎಕರೆ ವಿಶಾಲವಾಗಿದ್ದು, 15 ಹಳ್ಳಿಗಳಿಗೆ ಆಸರೆಯಾಗಿದೆ. ಕೃಷ್ಷಾ ಮೇಲ್ದಂಡೆ ಯೋಜನೆಯಿಂದ ಇದಕ್ಕೆ ನೀರು ತುಂಬಿಸಲಾಗುತ್ತದೆ. ಹೀಗಾದಾಗ 42 ರೈತರಿಗೆ ಸೇರಿರುವ 178 ಎಕರೆ ಮುಳುಗಡೆಯಾಗಿ ಅಲ್ಲಿ ಏನನ್ನೂ ಬೆಳೆಯಲು ಆಗುತ್ತಿಲ್ಲ ಎಂದಿದ್ದಾರೆ.
ಹೀಗಾಗಿ ರೈತರು ಇಷ್ಟು ಜಮೀನನ್ನು ಕೃಷ್ಣಾ ಭಾಗ್ಯ ಜಲ ನಿಗಮದ ಸ್ವಾಧೀನಕ್ಕೆ ತೆಗೆದುಕೊಳ್ಳಲು ಕೋರುತ್ತಿದ್ದರು. ಇದಕ್ಕೆ 42 ಕೋಟಿ ರೂಪಾಯಿ ವೆಚ್ಚವಾಗಲಿದ್ದು ಅದಕ್ಕೆ ಹಣ ಬಿಡುಗಡೆ ಮಾಡುವಂತೆ ಕೋರುವ ಉದ್ದೇಶದಿಂದ ಈ ಸಭೆ ನಡೆಸಲಾಯಿತು.
ಜಲಸಂಪನ್ಮೂಲ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೃಷ್ಣಾ ಭಾಗ್ಯ ಜಲ ನಿಗಮದ ಪ್ರಧಾನ ವ್ಯವಸ್ಥಾಪಕ ಬಿ ಎಂ ಕುಲಕರ್ಣಿ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಬಿ.ಕೆ.ಪವಿತ್ರಾ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.


