ದೇಶದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಮೋದಿ :ಜಿಗಜಿಣಗಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಧಾನಿ ನರೇಂದ್ರ ಮೋದಿಯವರು ಸ್ವಂತಕ್ಕಾಗಿ ಸ್ವಲ್ಪ, ದೇಶಕ್ಕಾಗಿ ಸರ್ವಸ್ವ ಎಂಬ ಮಾದರಿ ಜೀವನ ನಡೆಸಿದವರು. ದೇಶದ ಅಭಿವೃದ್ಧಿಗಾಗಿ ಅವರು ಹಗಲಿರುಳು ಶ್ರಮಿಸಿದ್ದಾರೆ ಎಂದು ಲೋಕಸಭಾ ಸದಸ್ಯ ರಮೇಶ ಜಿಗಜಣಗಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ವಿಜಯಪುರ ನಗರದ ವಾರ್ಡ್ ನಂ. ೬ ರಾಜೇಂದ್ರ ನಗರದಲ್ಲಿ ಏರ್ಪಡಿಸಿದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ವಿವಿಧ ಸೇವಾ ಚಟುವಟಿಕೆಯಲ್ಲಿ ನಮ್ಮ ಕಾರ್ಯಕರ್ತರು ತೊಡಗಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ ಮುಂತಾದ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವೆಂದರು.
ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟಿಲ ಕುಚಬಾಳ ಮಾತನಾಡಿ, ವಿಶ್ವಕರ್ಮ ಯೋಜನೆಯಡಿ ಇದೇ ೨೦ರಂದು ದೇಶದ ೨೦ ಲಕ್ಷ ವಿಶ್ವಕರ್ಮರಿಗೆ ಹಣಕಾಸಿನ ಸೌಲಭ್ಯ ಒದಗಿಸಲಾಗುತ್ತದೆ. ಮಹಿಳೆಯರ ಘನತೆ ಹೆಚ್ಚಿಸಲು ಶೌಚಾಲಯ ನಿರ್ಮಾಣ, ಗ್ಯಾಸ್ ಸಿಲಿಂಡರ್ಗಳನ್ನು ನೀಡಲಾಗಿದೆ. ಪರಿಶಿಷ್ಟ ಸಮುದಾಯ, ಹಿಂದುಳಿದ ವರ್ಗ, ಮಹಿಳೆಯರು, ಯುವಕರಿಗಾಗಿ ಅನೇಕ ಯೋಜನೆಗಳನ್ನು ಮೋದಿಜೀ ಅವರು ಜಾರಿಗೊಳಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಮಳುಗೌಡ ಪಾಟಿಲ ರೈತರು, ಮಹಿಳೆಯರು, ಯುವಕರು, ಬಡವರು ಎಂಬ ನಾಲ್ಕು ಜಾತಿಗಳು ಮಾತ್ರ ಈ ದೇಶದಲ್ಲಿದೆ ಎಂಬ ಸಂದೇಶ ಪ್ರಧಾನಿ ಅವರದು. ಅವರೊಬ್ಬ ವಿಶ್ವನಾಯಕ. ದೇಶದ ಘನತೆಯನ್ನು ಅವರು ವಿಶ್ವದಾದ್ಯಂತ ಎತ್ತಿ ಹಿಡಿದಿದ್ದಾರೆ; ದೇಶದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಸುರೇಶ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವುರ, ನಗರ ಘಟಕದ ಅಧ್ಯಕ್ಷರಾದ ಶಂಕರ ಹೂಗಾರ, ಎಸ್.ಎ. ಪಾಟೀಲ, ಕೃಷ್ಣಾ ಗುನಾಳಕರ, ವಿಜಯ ಜೋಶಿ, ಕಾಂತು ಸಿಂದೆ, ಮಹಾನಗರ ಪಾಲಿಕೆ ಸದಸ್ಯರಾದ ಎಮ್.ಎಸ್. ಕರಡಿ, ಪ್ರೇಮಾನಂದ ಬಿರಾದಾರ, ಸಚೀನ ಕುಮಶಿ, ನಂದು ಬಡಗಿ, ಪಾಪುಸಿಂಗ ರಜಪೂತ,ವಾರೀಶ ಕುಲಕರ್ಣಿ, ಪ್ರಕಾಶ ಬಾಗೇವಾಡಿ, ಉದಯ ಕನ್ನೋಳಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

