ರಾಜ್ಯಮಟ್ಟದ ಮಕ್ಕಳ ಕಥಾ ಕಮ್ಮಟ ಉದ್ಘಾಟಿಸಿದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕರೆ
ಉದಯರಶ್ಮಿ ದಿನಪತ್ರಿಕೆ
ಧಾರವಾಡ: ಬಾಲಮಂದಿರದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ನಾಗರೀಕ ಸಮಾಜದಲ್ಲಿರುವ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ, ಆ ಒಂದು ಪ್ರಯತ್ನದ ಭಾಗವಾಗಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ಮಕ್ಕಳ ವ್ಯಕ್ತಿತ್ವ ಅರಳಲಿ ಎನ್ನುವ ಸದಾಶಯದಿಂದ ರಾಜ್ಯಮಟ್ಟದ ಮಕ್ಕಳ ಕಥಾ ಕಮ್ಮಟವನ್ನು ನಾಡಿನ ಬಾಲ ಮಂದಿರದ ಮಕ್ಕಳಿಗಾಗಿ ಐದು ದಿನಗಳ ಕಾಲ ನಿಸರ್ಗದ ಮಡಿಲಲ್ಲಿ ರೂಪಿಸಲಾಗಿದೆ. ಇಂಥ ಮಕ್ಕಳ ಸೇವೆ ಮಾಡುವ ಸೌಭಾಗ್ಯ ನನಗೆ ದೊರೆತಿದ್ದು ನನ್ನ ಜೀವನದ ಅಮೃತ ಘಳಿಗೆ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಮಂಗಳವಾರ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಹಾಗೂ ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಆಶ್ರಯದಲ್ಲಿ ಧಾರವಾಡದ ಸಮೀಪವಿರುವ ಹಳ್ಳಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇಚರ್ ಫಸ್ಟ್ ಇಕೋ ವಿಲೇಜ್ ನಲ್ಲಿ ಬಾಲಮಂದಿರ ಮಕ್ಕಳಿಗಾಗಿ ನಡೆಯುತ್ತಿರುವ ರಾಜ್ಯಮಟ್ಟದ ಮಕ್ಕಳ ಕಥಾ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಪ್ರೇಮಿ ಹಿರೇಮಠ್ ರವರು ನಿರ್ಮಿಸಿರುವ ಪರಿಸರ ಸ್ನೇಹಿಯಾದ ಈ ಅದ್ಭುತ ರೆಸಾರ್ಟಿನಲ್ಲಿ ಬಾಲ ಮಂದಿರದ ಮಕ್ಕಳೆಲ್ಲರೂ ಬಂದು ಉಳಿದುಕೊಳ್ಳಬೇಕು ಎನ್ನುವುದು ನನ್ನ ಸದಾಶಯವಾಗಿತ್ತು. ನಿಸರ್ಗದ ಮಡಿಲಿನಲ್ಲಿರುವ ಈ ಅದ್ಭುತ ತಾಣದಲ್ಲಿ ನಾಡಿನ ಮೂಲೆ ಮೂಲೆಯಿಂದ ಬಂದ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಮಕ್ಕಳ ಬದುಕಿಗೆ ಒಂದು ಹೊಸ ತಿರುವು ದೊರೆಯಲಿ, ಈ ಕಥಾ ಕಮ್ಮಟದಲ್ಲಿ ಭಾಗವಹಿಸಿದ ಮಗುವಿನ ಸಾಧನೆಯ ಕಥೆಯನ್ನ ಜಗತ್ತು ಮುಂದೆ ಓದುವಂತಾಗಬೇಕು, ಹಾಗೆ ಮಕ್ಕಳೆಲ್ಲರೂ ಬೆಳೆಯಲೆಂದು ಸಂಗಮೇಶ ಬಬಲೇಶ್ವರ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರಿಗೆ ಉತ್ಸಾಹವಿದೆ, ನಾಡಿನಾದ್ಯಂತ ಎಲ್ಲರೊಂದಿಗೆ ಅವರಿಗೆ ಉತ್ತಮ ಬಾಂಧವ್ಯವಿದ್ದು, ಇನ್ನು ಹೆಚ್ಚಿನ ಅನುದಾನವನ್ನು ತಂದು ಈ ನಾಡಿನ ಮಕ್ಕಳ ಸೇವೆ ಮಾಡುವಂತಗಲಿ, ತಂದೆ ತಾಯಿ ಇಲ್ಲದ ಮಕ್ಕಳ ಬಗೆಗಿರುವ ಅವರ ಕಳಕಳಿ ಪ್ರಸನ್ನತೀತವಾದದ್ದು, ರೆಸಾರ್ಟ್ ನಲ್ಲಿ ಬರುವವರು ಒಂದು ದಿನ ರೆಸಾರ್ಟ್ ನಲ್ಲಿ ಉಳಿದುಕೊಳ್ಳುತ್ತಾರೆ, ಆದರೆ ನಮ್ಮ ಬಾಲ ಮಂದಿರದ ಮಕ್ಕಳು ಐದು ದಿನ ರೆಸಾರ್ಟ್ ನಲ್ಲಿ ಉಳಿದು ಈ ನಿಸರ್ಗದ ಮಡಿಲಿನಲ್ಲಿ ನಡೆಯುವ ಕಥಾ ಕಮ್ಮಟ ಕಾರ್ಯಕ್ರಮದಲ್ಲಿ ಹೊಸ ಸಂಕಲ್ಪ ಮತ್ತು ಹೊಸ ಹುರುಪಿನೊಂದಿಗೆ ಮುನ್ನಡೆಯುವಂತಾಗಲೆಂಬ ಆಶಯದಿಂದ ನಾಡು ಮೆಚ್ಚುವಂತಹ ಕೆಲಸವನ್ನು ನೂತನ ಅಧ್ಯಕ್ಷರು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಹಿರೇಮಲ್ಲೂರ ಈಶ್ವರನ್ ಮಹಾವಿದ್ಯಾಲಯದ ಪ್ರಾಚಾರ್ಯ ಶಶಿಧರ್ ತೋಡ್ಕರ್ ಮಾತನಾಡಿ, ರಾಜ್ಯದ ಎಲ್ಲಾ ಬಾಲಮಂದಿರದ ಮಕ್ಕಳಿಗಾಗಿ ನೂತನ ಅಧ್ಯಕ್ಷರು ಪ್ರವಾಸ ಕಾರ್ಯಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಮಕ್ಕಳ ಜ್ಞಾನದ ಹರಿವನ್ನು ಹೆಚ್ಚಿಸಲು ಪ್ರಯತ್ನಿಸಬೇಕೆಂದು ಹೇಳಿದರು.
ಮಲೆನಾಡು ಶಿಕ್ಷಣ ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ್ ಮಾತನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ದ್ಯಾಮಣ್ಣ ಮೆಣಸಿನಕಾಯಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸುರೇಶಗೌಡ ಕರಿಗೌಡ, ಸಾಹಿತಿ ಡಾ.ನಿಂಗು ಸೊಲಗಿ, ಶಿಬಿರದ ನಿರ್ದೇಶಕ ಫಕೀರೇಶ ಮುಡಿಯನ್ನವರ ಭಾಗವಹಿಸಿದ್ದರು.
ಅಕಾಡೆಮಿಯ ಯೋಜನಾಧಿಕಾರಿ ಶ್ರೀಮತಿ ಭಾರತಿ ಶೆಟ್ಟರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮೃತ್ ಸಾನಿಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ದೀಪ ಜಾವೂರ ವಂದಿಸಿದರು.
ಮೊದಲ ಹಂತದಲ್ಲಿ ನಾಡಿನ 9 ಜಿಲ್ಲೆಗಳಿಂದ ಆಗಮಿಸಿರುವ ಬಾಲಮಂದಿರದ ಮಕ್ಕಳು ಐದು ದಿನ ನಡೆಯುವ ರಾಜ್ಯಮಟ್ಟದ ನಡೆಯುವ ಈ ವಿಶೇಷ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಬಲೇಶ್ವರ ಗೆ ವಿಶೇಷ ಸನ್ಮಾನ
ಈ ಸಂದರ್ಭದಲ್ಲಿ ಇಂಥ ಅಪರೂಪದ ಕಾರ್ಯಕ್ರಮವನ್ನು ತಮ್ಮ ಭಾಗದಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರಿಗೆ,
ಹಳ್ಳಿಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಿಂದ ಆಗಮಿಸಿದ್ದ ಗ್ರಾಪಂ ಸದಸ್ಯರುಗಳು ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ವಿಶೇಷ ಸನ್ಮಾನ ಮಾಡಿದರು.

ಬಬಲೇಶ್ವರ ನಡೆಗೆ ಸಾರ್ವಜನಿಕರ ಪ್ರಶಂಸೆ
ರಾಜ್ಯದ ಒಂಬತ್ತು ಜಿಲ್ಲೆಗಳಿಂದ ಆಗಮಿಸಿದ್ದ ವಿವಿಧ ಮಕ್ಕಳ ತಂಡಗಳನ್ನು ಕರೆದುಕೊಂಡು ಇಕೋ ವಿಲೇಜ್ ಗೆ ಹೋಗಲು ಸ್ವತಃ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ್ ಬಬಲೇಶ್ವರ ಅವರು ತಮ್ಮ ವಾಹನದಲ್ಲಿ ಬಾಲಮಂದಿರದ ಮಕ್ಕಳು ಪಯಣಿಸಲಿ ಎನ್ನುವ ಆಶಯದಿಂದ ಸರಕಾರ ತಮಗೆ ನೀಡಿರುವ ಇನೋವಾ ವಾಹನ ಹಾಗೂ ಯೋಜನಾಧಿಕಾರಿಗಳ ಕಾರನ್ನು ಸೋಮವಾರದಿಂದ ಇಂದು ಮಂಗಳವಾರ ಹನ್ನೊಂದು ಗಂಟೆಯವರೆಗೆ ಮಕ್ಕಳನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕರೆತರಲು ಉಪಯೋಗಿಸುವಂತೆ ನಿರ್ದೇಶನ ನೀಡಿದ್ದರು. ಇದರಿಂದ ಮಕ್ಕಳು ತುಂಬಾ ಸಂತೋಷಪಟ್ಟರು. ಅಧ್ಯಕ್ಷರ ಈ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು.

ಭಾವುಕರಾದ ಬಬಲೇಶ್ವರ
“ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಬದುಕು ಕಟ್ಟಿಕೊಂಡ ನನಗೆ ನಿಮ್ಮ ಕಷ್ಟದ ಬದುಕನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ” ಎಂದು ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ತಂದೆ ತಾಯಿ ಇಲ್ಲದ ಮಕ್ಕಳ ಕಷ್ಟಗಳನ್ನು ನೆನೆದು ಸಭೆಯಲ್ಲಿ ಭಾವುಕರಾದರು. ಅವರ ಕಣ್ಣಂಚು ಒದ್ದೆಯಾಗಿತ್ತು.

