ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಡಿಸಿ ಟಿ.ಭೂಬಾಲನ್ ಕರೆ
ವಿಜಯಪುರ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸರ್ಕಾರ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮದ ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.
ಅವರು ಶುಕ್ರವಾರ ಕೇಸ್ವಾನ ಸಭಾಂಗಣದಲ್ಲಿ ವಿವಿಧ ತಾಲೂಕಿನ ತಹಶೀಲ್ದಾರ್, ತಾಲೂಕ ಪಂಚಾಯತ್ ಅಧಿಕಾರಿ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಪುರಸಭೆಯ ಅಧಿಕಾರಿ ಸಿಬ್ಬಂದಿಗಳೊಂದಿಗೆ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವಿರೇಶನಗರದಿಂದ ಆಲಮಟ್ಟಿಯವರೆಗೆ ನಡೆಯುವ ಮಾನವ ಸರಪಳಿ ರಚನೆಯ ಮಾರ್ಗದುದ್ದಕ್ಕೂ ಕಿಮೀ ಗುರುತಿಸುವ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಈ ಕಾರ್ಯಕ್ರಮಕ್ಕಾಗಿ ನಿಯೋಜಿಸಿದ ಅಧಿಕಾರಿ ಸಿಬ್ಬಂದಿಗಳು, ಮಾನವ ಸರಪಳಿ ಮಾರ್ಗದ ಪರಿಶೀಲನೆ ನಡೆಸಬೇಕು. ಶಾಲಾ ಕಾಲೇಜು, ವಸತಿ ನಿಲಯ, ಗ್ರಾಮಗಳ, ಪಟ್ಟಣಗಳ ವಿವರ ಖಚಿತ ಪಡಿಸಿಕೊಂಡು, ಪ್ರತಿ ಒಂದು ಕೀ.ಮಿಗೆ ಯೋಜನೆ ಸಿದ್ಧಪಡಿಸಿ ಮೈಕ್ರೋ ಪ್ಲಾನಿಂಗ್ ಮಾಡಿಕೊಂಡು ಅಚ್ಚುಕಟ್ಟಾಗಿ ಯಾವುದೇ ಸಮಸ್ಯೆ ಬಾರದಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಮಾನವ ಸರಪಳಿ ಮಾರ್ಗದುದ್ದಕ್ಕೂ ಸುರಕ್ಷತಾ ದೃಷ್ಟಿಯಿಂದ ಪ್ರತಿ ಕಿ.ಮಿ ಒಬ್ಬರಂತೆ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಮಾನವ ಸರಪಳಿ ರಚನೆ ಕಾರ್ಯಕ್ರಮವನ್ನ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಜಿಲ್ಲೆಯ ಸಾರ್ವಜನಿಕರು ಕಾರ್ಯಕ್ರಮದ ಆನ್ಲೈನ್ ಲಿಂಕ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಲು ಅಗತ್ಯ ಪ್ರಚಾರ ಕೈಗೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಕಾರ್ಯಕ್ರಮಕ್ಕೆ ನಿಯೋಜಿಸಿದ ನೋಡಲ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಸೇರಿದಂತೆ ಮುದ್ದೆಬಿಹಾಳ, ತಾಲಿಕೋಟೆ, ಬ.ಬಾಗೇವಾಡಿ, ನಿಡಗುಂದಿ ತಾಲೂಕಿನ ತಹಶೀಲ್ದಾರ, ತಾಪಂ ಅಧಿಕಾರಿ ಸಿಬ್ಬಂದಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

