ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ ಮತ್ತು ವಿಜಯಪುರ ಜನ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ.
ವಿಜಯಪುರ: ಸ್ಲಂ ಘೋಷಣೆ, ಮನೆಗಳ ಹಕ್ಕು ಪತ್ರ ವಿತರಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಸ್ಲಂ ನಿವಾಸಿಗಳು ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ ಮತ್ತು ವಿಜಯಪುರ ಜನ ವೇದಿಕೆ (ಸಿ.ಸಿ.ಎಫ್.ಎಫ್) ನೇತೃತ್ವದಲ್ಲಿ ಗುರುವಾರ ಇಲ್ಲಿನ ಮನಗೂಳಿ ರಸ್ತೆಯಲ್ಲಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಆವರಣದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.
ನಗರದ ಕೊಳಗೇರಿ ಪ್ರದೇಶದಲ್ಲಿ ಸ್ಲಂ ಅಭಿವೃದ್ಧಿ ಕಾರ್ಯಗಳು ಬಹಳ ವಿಳಂಬವಾಗಿ ನಡೆಯುತ್ತಿವೆ. ಈ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು. ಸ್ಲಂ ನಿವಾಸಿಗಳಿಗೆ ಆದಷ್ಟು ಬೇಗ ಮನೆಗಳ ಹಕ್ಕುಪತ್ರ ನೀಡಬೇಕು ಎಂದು ಧರಣಿನಿರತರು ಒಕ್ಕೊರಲಿನಿಂದ ಆಗ್ರಹಿಸಿದರು.
ಕೆಲಹೊತ್ತಿನ ನಂತರ ಕೊಳಗೇರಿ ಅಭಿವೃದ್ಧಿ ಮಂಡಳಿ ವಿಜಯಪುರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಾನಂದ ರಾಠೋಡ ಅವರು ಧರಣಿ ಸ್ಥಳಕ್ಕೆ ಆಗಮಿಸಿ, ಧರಣಿ ನಿರತ ಸ್ಲಂ ನಿವಾಸಿಗಳ ಸಮಸ್ಯೆಗಳ ಸಮಸ್ಯೆಗಳನ್ನು ಶಾಂತಚಿತ್ತದಿಂದ ಆಲಿಸಿ ಅವರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.
ಇಬ್ರಾಹಿಂಪುರ ಸ್ಲಂ(ಬಜಂತ್ರಿ ಗಲ್ಲಿ) ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ಮುನ್ನೂರು ಮನೆಗಳಿವೆ. ಹಕ್ಕುಪತ್ರಕ್ಕಾಗಿ ಎಂಭತ್ತು ಅರ್ಜಿಗಳು ಮಾತ್ರ ಬಂದಿವೆ. ಅಲ್ಲಿ ಇನ್ನೊಮ್ಮೆ ಸಂಪೂರ್ಣ ಸರ್ವೇ ಮಾಡಬೇಕಿದೆ. ಒಂದು ವಾರದಲ್ಲಿ ಸರ್ವೇ ಮಾಡುತ್ತೇವೆ. ಈ ಕುರಿತಂತೆ ಎರಡು ದಿನ ಮುಂಚಿತವಾಗಿ ಎಲ್ಲರಿಗೂ ತಿಳಿಸುತ್ತೇವೆ. ಅಲ್ಲಿ ವಾಸವಾಗಿರುವ ಎಲ್ಲ ನಿವಾಸಿಗಳಿಗೂ ಹಕ್ಕುಪತ್ರ ನೀಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರಿಗೆ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟದ ಅಧ್ಯಕ್ಷ ಮುತ್ತು ಭೋವಿ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆಗಳ ನಿರ್ಮಾಣ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಬೇಕು. ರಾಮನಗರ, ವಡ್ಡರ ಓಣಿ, ಸುಣಗಾರ ಗಲ್ಲಿ, ಇಬ್ರಾಹಿಂಪುರ ಸ್ಲಂ ನಿವಾಸಿಗಳಿಗೆ ಬೇಗನೆ ಹಕ್ಕುಪತ್ರ ನೀಡಬೇಕು. ರಾಮನಗರದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮೂರು ತಿಂಗಳ ಹಿಂದೆ ಕೊಳವೆಬಾವಿ ತೋಡಿದ್ದು, ಎರಡು ಇಂಚು ನೀರು ಸಹ ಇದೆ. ಅಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದ್ದು, ಕೂಡಲೇ ಕೊಳವೆಬಾವಿಗೆ ಪಂಪಸೆಟ್ ಅಳವಡಿಸಿ ನೀರು ಸರಬರಾಜು ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಇವೇ ಮುಂತಾದ ಬೇಡಿಕೆಗಳ ಕುರಿತು ಮನವಿ ಪತ್ರದಲ್ಲಿ ಹಕ್ಕೊತ್ತಾಯ ಮಂಡಿಸಲಾಗಿದೆ.
ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟದ ಮುಖಂಡ ಅಕ್ರಂ ಮಾಶಾಳಕರ, ನಗರ ಉಪಾಧ್ಯಕ್ಷ ಪಂಡಿತ ಖಂಡೇಗಳ, ಕಾರ್ಯದರ್ಶಿ ಶ್ರೀಮತಿ ನಿರ್ಮಲಾ ಹೊಸಮನಿ, ಖಜಾಂಚಿ ಮೀನಾಕ್ಷಿ ಕಾಲೇಬಾಗ, ಕೃಷ್ಣಾ ಜಾಧವ, ರಾಜೇಸಾಬ ಸುತಾರ, ಅಶೋಕ ಬಾಗೇವಾಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ನಗರದ ಇಬ್ರಾಹಿಂಪುರ, ರಾಮನಗರ, ಶಿಖಾರಖಾನೆ, ರಂಗೀನ ಮಸೀದಿ, ಸುಣಗಾರಗಲ್ಲಿ, ಶಾಸ್ತ್ರೀನಗರ ಸೇರಿದಂತೆ ವಿವಿಧ ಸ್ಲಂಗಳ ನೂರಾರು ನಿವಾಸಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು. ಧರಣಿಯಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿತ್ತು.

