ಕಲಬುರಗಿ ಮನೀಷ ಮ್ಯಾನ್ ಪವರ್ ಏಜೆನ್ಸಿ ಮೇಲೆ ಕ್ರಮಕ್ಕೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಾಕಿ ವೇತನ ಪಾವತಿಸಲು, ಸಿಬ್ಬಂದಿ ಕಡಿತ ಮಾಡಿದ ಆದೇಶ ವಾಪಸು ಪಡೆಯಲು, ಸಮಯಕ್ಕೆ ಸರಿಯಾಗಿ ವೇತನ ಪಾವತಿಸಲಾರದ ಮನೀಷ ಮ್ಯಾನ್ ಪಾವರ್, ಕಲಬುರಗಿ ಇವರ ಮೇಲೆ ಶಿಸ್ತಿನಕ್ರಮ ಜರುಗಿಸುವಂತೆ ಒತ್ತಾಯಿಸಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇವರಿಗೆ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭೀಮಶೆಟ್ಟಿ ಯಂಪಳ್ಳಿ ರಾಜ್ಯಾಧ್ಯಕ್ಷರು ಮಾತನಾಡಿ, ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ, ಕ್ರೈಸ್ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಬಾಕಿ ವೇತನ ಪಾವತಿಸದೆ ಇರುವದರಿಂದ ನೌಕರರು ಅತ್ಯಂತ ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾರೆ. ಅಲ್ಲದೇ ಸಿಬ್ಬಂದಿ ಕಡಿತ ಮಾಡಿರುವದರಿಂದ ಕೆಲಸದ ಹೊರೆ ಹೆಚ್ಚಾಗಿ ಅನಾರೋಗ್ಯದಿಂದ ನೌಕರರು ಬಳಲುವಂತಾಗಿದೆ. ಅಲ್ಲದೆ ಕ್ರೈಸ್ ವಸತಿನಿಲಯಗಳ ವೇತನಕ್ಕಾಗಿ ಅನುದಾನವಿದ್ದರು ಕೂಡಾ ಮನೀಷ ಮ್ಯಾನ್ ಪಾವರ್ ನಿರ್ಲಕ್ಷತನದಿಂದ ವೇತನ ಸಮಯಕ್ಕೆ ಸರಿಯಾಗಿ ಪಾವತಿಸದೇ ನೌಕರರು ಗೋಳಾಡುವಂತಾಗಿದೆ ಎಂದರು.
ಹುಲಗಪ್ಪ ಎಚ್. ಚಲವಾದಿ ಜಿಲ್ಲಾದ್ಯಕ್ಷರು, ಮಾತನಾಡಿ, ಬಾಕಿ ಉಳಿದಿರುಕೊಂಡಿರುವ ವೇತನ ಪಾವತಿಸಬೇಕು. ಸಿಬ್ಬಂದಿ ಕಡಿತ ಮಾಡಿದ ಆದೇಶ ವಾಪಸು ಪಡೆಯಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ೫೦ ವಿದ್ಯಾರ್ಥಿಗಳಿಗೆ ೩ ಜನರಂತೆ ಹಿಂದಿನ ಆದೇಶ ಜಾರಿಮಾಡಬೇಕು. ಕಳೆದ ಮೂರು ವರ್ಷಗಳಿಂದ ಕಡಿಮೆ ವೇತನ ಪಾವತಿಸಿದ ಮನೀಷ ಮ್ಯಾನ್ ಪಾವರ್, ಕಲಬುರಗಿ ವ್ಯತ್ಯಾಸದ ಹಣ ಕೊಡಿಸಬೇಕು ಮತ್ತು ಇಡೀ ರಾಜ್ಯದಲ್ಲಿ ಕ್ರೈಸ ವಸತಿ ಶಾಲೆಗಳಲ್ಲಿ ಅಲ್ಲಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತಿರುವದರಿಂದ ಎಲ್ಲಾ ವಸತಿ ಶಾಲೆಗಳಲ್ಲಿ ಪ್ರಿನ್ಸಿಪಾಲವಾರ್ಡನ ಮತ್ತು ದೈಹಿಕ ಶಿಕ್ಷಕ ಮಹಿಳೆಯರು ಇರಬೇಕೆಂದು ಒತ್ತಾಯಿಸಿದರು.
ಈ ಕುರಿತು ಒಂದು ವಾರದೊಳಗೆ ಕ್ರಮಕೈಗೊಳ್ಳದೇ ಹೋದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.
ಈ ಸಮಯದಲ್ಲಿ ಲಕ್ಷ್ಮಣ ಮಸಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಯಮನಪ್ಪ ಬಜಂತ್ರಿ, ಜಿಲ್ಲಾ ಸಹ ಕಾರ್ಯದರ್ಶಿ, ರಾಮಚಂದ್ರ ಕೋಳಿ ಜಿಲ್ಲಾ ಖಜಾಂಚಿ, ನೂರಜಾನ ಯಲಗಾರ, ಸಂಗಮ್ಮ ಹಂಜಗಿ, ಶಾಂತಾ ಕ್ವಾಟಿ, ಬೇಬಿ ಹೊಸಮನಿ, ಮೀನಾಕ್ಷಿ ತಳವಾರ, ರಾಮವ್ವ ಬಜಂತ್ರಿ, ಮಲಕಾಜಿ ಚಲವಾದಿ, ಗೌರಕ್ಕ ಬೀಳೂರ, ಅನಸೂಯಾ ಬಡಿಗೇರ, ಲಕ್ಷ್ಮಿ ಮಂಗಸೂಳಿ, ಲಕ್ಷ್ಮಿ ಕಡೇಮನಿ, ಮಹಾದೇವಿ ಕಡೇಮನಿ, ರೇಣುಕಾ ಮಾಡಗಿ, ಹೀನಾ ಪಡೇಕನೂರ, ಸುಜಾತಾ ಕೂಡಗಿ, ನಿತೀಶ ತಳಕೇರಿ, ಮಲಕಾರಿ ಮೋರೆ, ಶ್ರೀಕಾಂತ ಗುಡಿಮನಿ, ಇನ್ನಿತರರು ಉಪಸ್ಥಿತರಿದ್ದರು.

