ಗ್ರಾಮಸ್ಥರ ಪರದಾಟ | ರಸ್ತೆಗಿಳಿಯದ ವೃದ್ಧರು | ಕ್ಯಾರೆ ಎನ್ನದ ಅಧಿಕಾರಿಗಳು
ಉದಯರಶ್ಮಿ ದಿನಪತ್ರಿಕೆ
ಮಲ್ಲಿಕಾಜು೯ನ ಎನ್.ಕೆಂಭಾವಿ
ಬ್ರಹ್ಮದೇವನಮಡು: ರಸ್ತೆ ತುಂಬ ಕೆಸರು, ಗ್ರಾಮಸ್ಥರು, ಶಾಲೆಗೆ ತೆರಳುವ ಮಕ್ಕಳ ಪರದಾಟ, ವೃದ್ಧರಿಗೆ ಪ್ರಾಣಸಂಕಟ, ಹಳ್ಳಿ ತುಂಬ ಆವರಿಸಿದ ರೋಗಗಳ ಭೀತಿ..
ಇದು ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಸದ್ಯದ ಚಿತ್ರಣ. ವಿಜಯಪುರ ಜಿಲ್ಲೆಯ ಗಡಿಯಲ್ಲಿರುವ, ಸಿಂದಗಿ ತಾಲೂಕು ವ್ಯಾಪ್ತಿಯ ಈ ಗ್ರಾಮದಲ್ಲಿ ೫೦೦ಕ್ಕೂ ಹೆಚ್ಚು ಮನೆಗಳಿವೆ. ೩ ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಎಲ್ಲ ಪ್ರಮುಖ ರಸ್ತೆಗಳು ಕೆಸರು ಗದ್ದೆಗಳಾಗಿ ಗ್ರಾಮಸ್ಥರು ಮನೆಯಿಂದ ಹೊರ ಬರುವುದೇ ದುಸ್ತರವಾಗಿದೆ. ವೃದ್ಧರಂತೂ ಮನೆಯಿಂದ ಹೊರಗೆ ಕಾಲಿಡದ ಸ್ಥಿತಿ ನಿರ್ಮಾಣವಾಗಿದೆ.
ಪಂಚಾಯಿತಿಯಿಂದ ಯುಕೆಪಿ ಕಚೇರಿವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದೇ ರಸ್ತೆಯಲ್ಲಿ ರಾಜೀವಗಾಂಧಿ ಸ್ಮಾರಕ ಪ್ರೌಢಶಾಲೆ ಹಾಗೂ ಸರಸ್ವತಿ ಕಿರಿಯ ಪ್ರಾಥಮಿಕ ಶಾಲೆಗಳಿದ್ದು, ನಿತ್ಯ ೩೦೦ಕ್ಕೂ ಹೆಚ್ಚು ಮಕ್ಕಳು ಕೆಸರುಮಯ ರಸ್ತೆ ದಾಟಿಕೊಂಡು ಹೋಗುವುದು ಕಷ್ಟಸಾಧ್ಯವಾಗಿದೆ. ಈ ರಸ್ತೆಯಲ್ಲಿ ನಿತ್ಯ ಮಕ್ಕಳು ಆಯತಪ್ಪಿ ಬೀಳುವುದು ಸಾಮಾನ್ಯವಾಗಿದೆ. ಪ್ರತಿ ಮನೆಗೂ ನೀರು ಒದಗಿಸುವ ಜಲ್ ಜೀವನ್ ಮಿಷನ್ ಕಾಮಗಾರಿ ನಡೆದಿರುವುದೇ ಈ ರಾದ್ಧಾಂತಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ ಮಾರ್ಚ್ ತಿಂಗಳಲ್ಲೇ ಜೆಜೆಎಂ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇಷ್ಟೊತ್ತಿಗಾಗಲೇ ಕೆಲಸ ಮುಗಿಯಬೇಕಿತ್ತು. ಕಾಮಗಾರಿ ಕುಂಟುತ್ತ ಸಾಗಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ. ನಳ ಸಂಪರ್ಕಕ್ಕಾಗಿ ಬಹುತೇಕ ಮನೆಗಳ ಮುಂದೆ ತಗ್ಗು ಅಗೆಯುತ್ತಿದ್ದಂತೆ ನಿರಂತರ ಮಳೆ ಸುರಿದು ಈ ಸ್ಥಿತಿ ಉಂಟಾಗಿದೆ. ಮನೆಯಿಂದ ಹೊರಗೆ ಹೋಗುವುದು ಹೇಗೆ ಎಂಬುದು ಗ್ರಾಮಸ್ಥರ ಚಿಂತೆಯಾಗಿದೆ. ಇನ್ನು ಕೊಳಚೆ ತುಂಬಿದ ರಸ್ತೆಯಿಂದ ಗ್ರಾಮದಲ್ಲಿ ಸೊಳ್ಳೆಗಳ ಕಾಟವೂ ಹೆಚ್ಚಾಗಿ ಕಾಲರಾ, ಮಲೇರಿಯಾದಂಥ ರೋಗಗಳ ಭೀತಿ ಆವರಿಸಿದೆ.
ಗ್ರಾಪಂನವರು ಜೆಜೆಎಂ ಕಾಮಗಾರಿ ಗುತ್ತಿಗೆದಾರರೊಂದಿಗೆ ಮಾತನಾಡಿ ಕೂಡಲೇ ಸಮಸ್ಯೆ ಬಗೆಹರಿಸಬೇಕು, ಇಲ್ಲದಿದ್ದರೆ ಪ್ರತಿಭಟನೆ ಹಾದಿ ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದು ನಿಂಗಣ್ಣ ಕ್ಶಾಡ, ಸಂಗು ಡಿಗ್ಗಿ, ಬಸಲಿಂಗಪ್ಪಗೌಡ ಪಾಟೀಲ, ಅಮಿನಸಾಬ ಬುಡ್ಡೆಖಾನ, ಇಶ್ಮಾಯಿಲ್ ತಂಗಡಗಿ, ರಿಯಾಜ್ ಗಡಗಂಜ್, ಆರೀಫ್ ತಿಂಥಣಿ, ಅಶೋಕ ಅಗಸರ,ಅನ್ವರ ಗಡಗಂಜ್, ಅಪ್ಪು ಗುತ್ತೆದಾರ ಹಾಗೂ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಬೇಜವಾಬ್ದಾರಿಗೆ ಆಕ್ರೋಶ
ಹೊನ್ನಳ್ಳಿ ಗ್ರಾಪಂ ವ್ಯಾಪ್ತಿಯ ಹೊನ್ನಳ್ಳಿ ಗ್ರಾಮದಲ್ಲಿ ಮಾತ್ರ ಈ ಸಮಸ್ಯೆ ಉಂಟಾಗಿದೆ. ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಕೇಳಲು ಜೆಜೆಎಂ ಎಇಇ ತಾರಾನಾಥ ರಾಠೋಡ ಹಾಗೂ ಗುತ್ತಿಗೆದಾರ ರಾಕೇಶ ದೊಡ್ಡಮನಿ ಅವರಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಭೇಟಿಯಾದಾಗ ಕಾಮಗಾರಿ ಬಗ್ಗೆ ಕೇಳಿದರೂ ಸರಿಯಾಗಿ ಉತ್ತರ ನೀಡದೆ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ಗ್ರಾಮಸ್ಥರು ದೂರುತ್ತಾರೆ.
“ಶಾಲೆಗೆ ತೆರಳುವ ರಸ್ತೆಗಳು ಹದಗೆಟ್ಟಿದ್ದರಿಂದ ಒಂದು ವಾರದಿಂದ ಮಕ್ಕಳಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಗ್ರಾಪಂಗೂ ಮನವಿ ಮಾಡಿಕೊಳ್ಳಲಾಗಿದೆ. ರಸ್ತೆ ಸುಧಾರಣೆಗೆ ಯಾವಾಗ ಕಾಲ ಕೂಡಿಬರುವುದೋ ಕಾಯ್ದು ನೋಡಬೇಕು.”
– ಎ.ಆರ್.ಹತ್ತಿ
ರಾಜೀವಗಾಂಧಿ ಸ್ಮಾರಕ ಪ್ರೌಢಶಾಲೆ ಮುಖ್ಯಗುರು, ಹೊನ್ನಳ್ಳಿ
“ಕಾಮಗಾರಿ ಶೇ.೮೦ರಷ್ಟು ಪೂರ್ಣಗೊಂಡಿದೆ. ಮಳೆಯಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.”
– ಸಂಗನಗೌಡ ಬಿರಾದಾರ
ಗ್ರಾಪಂ ಅಧ್ಯಕ್ಷ, ಹೊನ್ನಳ್ಳಿ

