ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಮುಖ್ಯಸ್ಥರ ಪದಗ್ರಹಣ
ವಿಜಯಪುರ: ವಿದ್ಯಾರ್ಥಿ ಜೀವನದಲ್ಲಿ ಗುರಿ ಹೊಂದಿ ಅದರ ಸಾಧನೆಗಾಗಿ ಅಧ್ಯಯನಶೀಲತೆಯನ್ನು ರೂಢಿಸಿಕೊಳ್ಳಬೇಕು ಎಂದು ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರೂ ಆದ, ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ಅವರು ನಗರದ ಟಕ್ಕೆಯಲ್ಲಿರುವ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಗುರುವಾರ ನಡೆದ ವಿದ್ಯಾರ್ಥಿ ಮುಖ್ಯಸ್ಥರ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನಕ್ಕೆ ಒತ್ತು ನೀಡುವ ಮೂಲಕ ಎಲ್ಲಾ ವಿಷಯಗಳನ್ನು ಕರಗತ ಮಾಡಿಕೊಂಡು ಗುರಿಯೆಡೆಗೆ ಸಾಗಬೇಕು. ಅಭ್ಯಾಸದ ಮೂಲಕ ಸಾಣೆ ಹಿಡಿದು ಜೀವನದಲ್ಲಿ ಯಶಸ್ಸು ಹೊಂದಿ ತಾವು ಕಲಿತ ಶಾಲೆಯ ಹೆಸರು ಬೆಳೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಪರಿಷತ್ನ ವಿದ್ಯಾರ್ಥಿ ಮುಖ್ಯಸ್ಥರಿಗೆ ಬ್ಯಾಡ್ಜ್ ವಿತರಿಸಲಾಯಿತು. ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಜುನ್ನಾ ರಾಮ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಸಿ.ಬಿ.ಚಿಕ್ಕಲಗಿ,ಮನಗೂಳಿ ಗ್ರೇಡ್-೧ ಶಿಕ್ಷಣ ಕಾಲೇಜು ಪ್ರಾಂಶುಪಾಲರಾದ ಪ್ರೊ ಐ.ಎಸ್.ಮಠಪತಿ, ಉಪನೋಂದಣಾಧಿಕಾರಿ (ಪರೀಕ್ಷಾ) ದೈಹಿಕ ಶಿಕ್ಷಣ ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕ್ರೀಡಾ ವಿಜ್ಞಾನ ವಿಭಾಗ ಅಧ್ಯಕ್ಷರಾದ ಡಾ.ರಾಜಕುಮಾರ್ ಪಿ ಮಾಲಿಪಾಟೀಲ್, ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಆನಂದ ಹುಬ್ಳೀಕರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಸ್.ಎಚ್.ರಂಗನಾಥ್, ನಿವೃತ್ತ ಸಂಗೀತ ಶಿಕ್ಷಕರಾದ ಚಂದ್ರಕಾಂತ್ ಎನ್ ಜಾಧವ್, ಶ್ರೀಮತಿ ನಿರ್ಮಲಾ, ಭಾಗ್ಯವಂತ ಮಸೂದಿ, ಜಿಲ್ಲಾಸ್ಪತ್ರೆಯ ಆರ್ಎಂಒ ಡಾ. ಸುರೇಶ ಚವ್ಹಾಣ, ಅಂಚೆ ಅಧೀಕ್ಷಕರಾದ ಎಂ ಕುಮಾರ ಸ್ವಾಮಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

