ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನಲ್ಲಿ ಸರಕಾರಿ ಶಾಲೆಗಳಿಗೆ ಸಂಬಂಧಿಸಿದ ಆಸ್ತಿಗಳಿಗೆ ಕಾನೂನು ಭದ್ರತೆ ಕಲ್ಪಿಸುವ ಕಾರ್ಯಕ್ಕೆ ತಾಲೂಕಾ ಆಡಳಿತ ಮುಂದಾಗಿದ್ದು ಈ ವರ್ಷದಿಂದ ಶಾಲೆಗಳ ಆಸ್ತಿಗಳಿಗೆ ಇ ಸ್ವತ್ತು ಮಾಡುವ ಕುರಿತು ಕಂದಾಯ ಉಪ ವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿಯ ಎಸಿ ಸಬಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಗ್ರಾಮದ ಹೊರಗೆ ಇರುವ ಶಾಲಾ ಆಸ್ತಿಗೆ ಆರ್.ಟಿ.ಸಿ ಮಾಡಬೇಕು ಮತ್ತು ಗ್ರಾಮದ ಒಳಗೆ ಇರುವ ಸರಕಾರಿ ಶಾಲೆಯ ಆಸ್ತಿಗೆ ಇ ಸ್ವತ್ತು ಮಾಡಬೇಕು ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ ಮಾತನಾಡಿ, ಸರಕಾರಿ ಶಾಲೆಗಳ ನಿರ್ಮಾಣಕ್ಕಾಗಿ ಹಿಂದೆ ಸಾಕಷ್ಟು ದಾನಿಗಳು ಜಮೀನನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಖಾತೆ ಮಾಡಿಸಿಕೊಳ್ಳಲು ಮುಂದಾಗಿರಲಿಲ್ಲ. ಇದರಿಂದ ದಾನಿಗಳ ವಂಶಸ್ಥರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಶಾಲೆಯ ಜಾಗವನ್ನು ಮರಳಿ ಪಡೆಯುವಂತಾಗಿತ್ತು.
ಕೊನೆಗೂ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ತಾಲೂಕಿನಲ್ಲಿರುವ ಶಾಲೆ ಆಸ್ತಿಗಳ ಇ ಸ್ವತ್ತು ಅಂದೋಲನ ಆರಂಭಿಸಿದೆ. ಅದರಂತೆ ಕೇವಲ ಒಂದು ವರ್ಷದ ಅವಧಿಯಲ್ಲಿ ಶಾಲೆಗಳ ಆಸ್ತಿಗಳನ್ನು ಖಾತೆ ಮಾಡುವ ಮೂಲಕ ಕಾನೂನು ಭದ್ರತೆ ನೀಡುತ್ತಿರುವದು ಶ್ಲಾಘನೀಯ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್.ನಡುಗಡ್ಡಿ ಮಾತನಾಡಿ ಸರಕಾರಿ ಶಾಲಾ ಆಸ್ತಿಗಳಿಗೆ ಇ ಸ್ವತ್ತು ಮಾಡಿರುವ ದಾಖಲೆಗಳನ್ನು ಫ್ರೇಮ ಮಾಡಿ ಅಳವಡಿಸಬೇಕು. ಇದರೊಂದಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ತಾಲೂಕಾ ಆಡಳಿತ ವೆಬ್ ಸೈಟ್ ನಲ್ಲಿ ಅಪ್ ಲೋಡ ಮಾಡಲಾಗಿದ್ದು ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ ಎಂದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಯ ಜಮೀನಿಗೆ ಸಂಬಂದಿಸಿದ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವದು ಕಂಡು ಬಂದಿದೆ. ಆ ಹಿನ್ನೆಲೆಯಲ್ಲಿ ಎಷ್ಟು ವರ್ಷದಿಂದ ನಡೆಸಲಾಗುತ್ತಿದೆ ಎಂಬ ದಾಖಲೆಗಳ ಆಧಾರದ ಮೇಲೆ ಖಾತೆ ಮಾಡುವಂತೆ ಎಸಿಯವರು ಸೂಚನೆ ನೀಡಿದ್ದು ತಿಂಗಳೊಳಗಾಗಿ ನ್ಯಾಯಾಲಯದಲ್ಲಿರುವ ಪ್ರಕಣಗಳನ್ನು ಹೊರತುಪಡಿಸಿ ಉಳಿದೆಲ್ಲ ಶಾಲೆಗಳ ಆಸ್ತಿಗಳಿಗೆ ಕಾನೂನು ಭದ್ರತೆ ಸಿಗಲಿದೆ ಎಂದರು.
ತಾಲೂಕಿನಲ್ಲಿ ಒಟ್ಟು ೨೭೩ ಶಾಲೆಗಳಿದ್ದು ಅದರಲ್ಲಿ ೧೯ ಸರಕಾರಿ ಪ್ರೌಢಶಾಲೆ ಮತ್ತು ೨೫೪ ಪ್ರಾಥಮಿಕ ಶಾಲೆಗಳಿವೆ ಎಂದರು.
ವೇದಿಕೆಯ ಮೇಲೆ ಶಿಕ್ಷಣ ಸಂಯೋಜಕರಾದ ಆನಂದಪ್ಪ ಹುಣಸಗಿ, ಎ.ಬಿ.ಚೌಧರಿ ಇದ್ದರು.
ಸಭೆಯಲ್ಲಿ ತಾಲೂಕಿನ ಎಲ್ಲ ಸಿ.ಆರ್.ಪಿ ಮತ್ತು ಮುಖ್ಯ ಗುರುಗಳು ಉಪಸ್ಥಿತರಿದ್ದರು.

