ಅಧ್ಯಕ್ಷರಾಗಿ ಮೆಹಬೂಬ ಗೊಳಸಂಗಿ, ಉಪಾಧ್ಯಕ್ಷರಾಗಿ ಪ್ರೀತಿ ದೇಗಿನಾಳ ಆಯ್ಕೆ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಭಾರೀ ಕುತೂಹಲ ಕೆರಳಿಸಿದ್ದ ಪಟ್ಟಣದ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷರಾಗಿ ಪ್ರೀತಿ ದೇಗಿನಾಳ ಆಯ್ಕೆಯಾಗಿದ್ದಾರೆ.
ಒಟ್ಟು ೨೩ ಸದಸ್ಯರ ಪೈಕಿ ಬಿಜೆಪಿಯ ೮, ಕಾಂಗ್ರೆಸ್ ನ ೮, ಜೆಡಿಎಸ್ ನ ೨, ಪಕ್ಷೇತರ ೫ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹೆಬೂಬ ಗೊಳಸಂಗಿ, ಬಸವರಾಜ ಮುರಾಳ, ರಿಯಾಜ ಢವಳಗಿ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರೀತಿ ದೇಗಿನಾಳ, ಭಾರತಿ ಪಾಟೀಲ, ಸಹನಾ ಬಡಿಗೇರ ಕ್ರಮವಾಗಿ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಸವರಾಜ ಮುರಾಳ, ತಮ್ಮ ನಾಮಪತ್ರವನ್ನು ಹಿಂಪಡೆದರು. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಉಪಾಧ್ಯಕ್ಷ ಸ್ಥಾನಕ್ಕೆ ಮೂವರು ಚುನಾವಣಾ ಕಣದಲ್ಲಿ ಉಳಿದಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಮಹೆಬೂಬ ಗೊಳಸಂಗಿ ಹಾಗೂ ರಿಯಾಜ ಢವಳಗಿ ಇವರಿಬ್ಬರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪಕ್ಷೇತರ ಸದಸ್ಯ ರಿಯಾಜ ಢವಳಗಿ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದರಿಂದ ಕಾಂಗ್ರೆಸ್ ಪಕ್ಷದ ಮುಖಂಡರು ನಾಮ ಪತ್ರ ಹಿಂಪಡೆಯುವಂತೆ ಸಾಕಷ್ಟು ಹೇಳಿದರೂ ಹಿಂದೆ ಸರಿಯದೇ ಪಟ್ಟು ಹಿಡಿದಿದ್ದರು. ಬಳಿಕ ಕಾರೊಂದರಲ್ಲಿ ಕುಳಿತು ಕೆಲ ಹೊತ್ತು ತಮ್ಮ ಸ್ನೇಹಿತರು, ಕಾಂಗ್ರೇಸ್ ಪಕ್ಷದ ಪ್ರಮುಖರ ಜೊತೆ ಹೊರಗಡೆ ಹೋಗಿ ಬಂದರು.
ನಾಮ ಪತ್ರ ಹಿಂಪಡೆಯುವ ಅವಧಿಯ ಬಳಿಕ ಚುನಾವಣೆ ಪ್ರಕ್ರೀಯೆ ಶುರುವಾಯಿತು. ಇಲ್ಲಿ ಶಾಸಕ ಸಿ.ಎಸ್.ನಾಡಗೌಡರು ಸೇರಿದಂತೆ ೮ ಕಾಂಗ್ರೇಸ್ ಸದಸ್ಯರು, ೨ಜೆಡಿಎಸ್ ಸದಸ್ಯರು, ೫ ಪಕ್ಷೇತರ ಸದಸ್ಯರು ಹೀಗೆ ಒಟ್ಟು ೧೬ ಜನ ಮಾತ್ರ ಭಾಗಿಯಾಗಿದ್ದರು. ಅಧ್ಯಕ್ಷ ಸ್ಥಾನದ ನೇಮಕಕ್ಕೆ ಕ್ರಮವಾಗಿ ಮೊದಲು ಮಹೆಬೂಬ ಗೊಳಸಂಗಿಯವರ ಹೆಸರು ಸೂಚಿಸಿದಾಗ ಶಾಸಕರು, ಪೈಪೋಟಿ ಅಭ್ಯರ್ಥಿ ರಿಯಾಜ ಢವಳಗಿ ಸೇರಿದಂತೆ ಎಲ್ಲಾ ೧೬ ಸದಸ್ಯರು ಕೈ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಅದೇ ರೀತಿ ಉಪಾಧ್ಯಕ್ಷ ಸ್ಥಾನದ ಕ್ರಮ ಸಂಖ್ಯೆ ೧ ರಲ್ಲಿ ನಾಮಪತ್ರ ಸಲ್ಲಿಸಿದ್ದ ಪ್ರೀತಿ ದೇಗಿನಾಳ ಅವರ ಹೆಸರು ಸೂಚಿಸುತ್ತಿದ್ದಂತೆ ಎಲ್ಲ ೧೬ ಜನ ಕೈಎತ್ತುವ ಮೂಲಕ ಆಯ್ಕೆಮಾಡಿದರು. ಎರಡೂ ಸ್ಥಾನಕ್ಕೆ ಎಲ್ಲರೂ ಕೈ ಎತ್ತುವ ಮೂಲಕ ಇದೊಂದು ರೀತಿ ಅವಿರೋಧ ಆಯ್ಕೆಯಾದಂತಾಗಿದೆ.
ಆಯ್ಕೆಯ ಬಳಿಕ ಅಧ್ಯಕ್ಷ ಉಪಾಧ್ಯಕ್ಷರೀರ್ವರಿಗೂ ಶಾಸಕ ನಾಡಗೌಡರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಬಣ್ಣ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕುತ್ತ ಸಂಭ್ರಮಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಮಾಜಿ ಪುರಸಭೆ ಸದಸ್ಯ ಕಾಮರಾಜ ಬಿರಾದಾರ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಗುತ್ತಿಗೆದಾರ ಸಿ.ಬಿ.ಅಸ್ಕಿ, ಪ್ರಮುಖರಾದ ಸಂಗಣ್ಣ ಬಿರಾದಾರ(ಜಿಟಿಸಿ), ರಾಜು ಕರಡ್ಡಿ, ಸುರೇಶಗೌಡ ಪಾಟೀಲ, ರುದ್ರಗೌಡ ಅಂಗಡಗೇರಿ, ಗಣೇಶ ಅನ್ನಗೌನಿ, ಸಿಕಂದರ ಜಾನ್ವೇಜರ ಸೇರಿದಂತೆ ಮತ್ತೀತರರು ಇದ್ದರು. ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐ ಸಂಜಯ ತಿಪರೆಡ್ಡಿ, ಕ್ರೈಂ ಪಿಎಸ್ಐ ಆರ್.ಎಲ್.ಮನ್ನಾಬಾಯಿ, ತಾಳಿಕೋಟೆ ಪಿಎಸ್ಐ ರಾಮನಗೌಡ ಸಂಕನಾಳ, ಕ್ರೈಂ ಪಿಎಸ್ಐ ರಂಗಪ್ಪ ಬಂಗಿ ಸೇರಿದಂತೆ ೫೦ ಪೊಲೀಸ್ ಸಿಬ್ಬಂದಿಗಳ ತಂಡ ಬಿಗಿ ಬಂದೋಬಸ್ತ ವಹಿಸಿದ್ದರು.
ದೂರ ಉಳಿದ ಬಿಜೆಪಿ ಸದಸ್ಯರು
ಎಲ್ಲ ೮ ಬಿಜೆಪಿ ಸದಸ್ಯರು ಚುನಾವಣಾ ಪ್ರಕ್ರೀಯೆಯಿಂದ ದೂರ ಉಳಿದು ಮುಖ್ಯಾಧಿಕಾರಿಗಳ ಕೊಠಡಿಯಲ್ಲಿ ಕುಳಿತಿದ್ದರು. ಈ ಮೊದಲೇ ಇವರೆಲ್ಲರೂ ಪಕ್ಷೇತರ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಿಯಾಜ ಢವಳಗಿ ಇವರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಸಹನಾ ಬಡಿಗೇರ ಇವರಿಗೆ ಬೆಂಬಲಿಸಲು ತಯಾರಿ ಮಾಡಿಕೊಂಡಿದ್ದು ರಿಯಾಜ ಕಾಂಗ್ರೆಸ್ ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದರು ಎಂದು ತಿಳಿಯುತ್ತಿದ್ದಂತೆ ಪುರಸಭೆಯಿಂದ ಹೊರನಡೆದರು.
ಕಾರ್ ನಲ್ಲಿ ಹೋಗಿದ್ದ ರಿಯಾಜ ಢವಳಗಿ ಇವರನ್ನ ಶಾಸಕ ನಾಡಗೌಡರ ಬಳಿ ಕರೆದೊಯ್ಯಲಾಗಿತ್ತು. ಅಲ್ಲಿ ಅರ್ಧ ಅವಧಿಗೆ ಮಹೆಬೂಬ ಗೊಳಸಂಗಿ ಮತ್ತು ಇನ್ನರ್ಧ ಅವಧಿಗೆ ರಿಯಾಜ ಢವಳಗಿ ಇವರು ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಶಾಸಕರು ಹೇಳಿದ ಮಾತಿಗೆ ಒಪ್ಪಿ ರಿಯಾಜ ತಮ್ಮ ಪಟ್ಟು ಸಡಿಲಿಸಿ ಗೊಳಸಂಗಿ ಅವರಿಗೆ ಬೆಂಬಲಿಸಿದರು ಎನ್ನಲಾಗಿದೆ.

