ವಿಶ್ವ ರೇಬೀಸ್ ದಿನಾಚರಣೆ | ಪ್ರಾಣಿಜನ್ಯ ರೋಗಗಳ ಬಗ್ಗೆ ಶಾಲಾ ಮಕ್ಕಳಿಗೆ ಅರಿವು
ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಹುಚ್ಚು ನಾಯಿ ಕಡಿತದ ರೇಬೀಸ್ ರೋಗ ಮಾರಣಾಂತಿಕ ರೋಗವಾಗಿದ್ದು, ಆ ದಿಸೆಯಲ್ಲಿ ಜನಜಾಗೃತಿ ವಹಿಸುವುದು ಅತ್ಯಗತ್ಯ ಎಂದು ಜಮಖಂಡಿ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ,ಆರ್.ಬಿ.ನಾಗರಳ್ಳಿ ಹೇಳಿದರು.
ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಬಾಗಲಕೋಟೆ ಜಿಲ್ಲಾ ಪ್ರಾಣಿದಯಾ ಸಂಘ ಸಂಯುಕ್ತ ಆಶ್ರಯದಲ್ಲಿ ವಿಶ್ವ ರೇಬೀಸ್ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರಾಣಿಜನ್ಯ ರೋಗಗಳ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಕು ನಾಯಿಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಅದರಲ್ಲೂ ಬೀದಿ ನಾಯಿಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ಜಾಗರೂಕತೆಯಿಂದ ಇರಬೇಕು. ಹುಚ್ಚುನಾಯಿ ರೋಗದ ಹೆಸರು ಕೇಳಿದ ಕೂಡಲೇ ಭಯಬೀತಿ ಆವರಿಸುತ್ತದೆ. ಇದು ಮೈಮನ ನಡುಕು ಹುಟ್ಟಿಸುವ ಪ್ರಾಣಿಜನ್ಯ ರೋಗವಾಗಿದ್ದು ಲಿಸ್ಸಾ ಎಂಬ ವೈರಾಣುವಿನಿಂದ ಹರಡುವ ಮಾರಣಾಂತಿಕ ರೋಗವಾಗಿದೆ. ಒಮ್ಮೆ ಈ ರೋಗಕ್ಕೆ ತುತ್ತಾಗಿ ಸರಿಯಾದ ರೀತಿಯಲ್ಲಿ ಉಪಚಾರ ಕೈಗೊಳ್ಳದಿದ್ದರೆ ಜೀವಕ್ಕೆ ಕಂಟಕ ಎದುರಾಗುತ್ತದೆ ಎಂದು ಎಚ್ಚರಿಸಿದರು.
ರೇಬೀಸ್ ರೋಗಕ್ಕೆ ಒಳಗಾದರೆ ಗುಣಪಡಿಸುವುದು ಕಷ್ಟಕರ. ಆದರೆ ಅದನ್ನು ತಡೆಗಟ್ಟಲು ಸಾಧ್ಯ. ಈ ರೋಗದ ಬಗ್ಗೆ ಅಸಡ್ಡೆ, ನಿರ್ಲಕ್ಷ್ಯ ಎಳ್ಳಷ್ಟು ಸಲ್ಲದು. ಯಾವುದೇ ಪ್ರಾಣಿ ಕಚ್ಚಿದಾಗ ಕೂಡಲೇ ಸಾಬೂನಿನಿಂದ ಯಥೇಚ್ಛವಾಗಿ ನೀರನ್ನು ಬಳಸಿ ಗಾಯವನ್ನು ಸ್ವಚ್ಛವಾಗಿ ತೊಳೆದು ಅ್ಯಂಟಿಸೆಪ್ಟಿಕ್ ಜೌಷಧಿ ಹಚ್ಚಿಕೊಳ್ಳಬೇಕು.ಯಾವುದೇ ಕಾರಣಕ್ಕೂ ಹತ್ತಿ, ಬಟ್ಟೆಯಿಂದ ಗಾಯವನ್ನು ಮುಚ್ಚಬಾರದು. ತಕ್ಷಣವೇ ಸೂಕ್ತ ಚಿಕಿತ್ಸೆಗಾಗಿ ವೈದ್ಯರನ್ನು ಭೇಟಿಯಾಗಿ ಪ್ರಥಮ ಚಿಕಿತ್ಸಾ ಉಪಚಾರದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಡಾ.ಆರ್.ಬಿ.ನಾಗರಳ್ಳಿ ಸಲಹೆ ನೀಡಿದರು.
ಚಿಕ್ಕಪಡಸಲಗಿ ಪಶು ಚಿಕಿತ್ಸಾಲಯದ ಹಿರಿಯ ಪಶುವೈದ್ಯಾಧಿಕಾರಿ ಡಾ,ಮಂಜುನಾಥ ಹೊಳಗಿ, ಪಶು ವೈದ್ಯಕೀಯ ಪರಿವೀಕ್ಷಕ ಆರ್.ಎಸ್.ಮಿಜಿ೯, ಕೃತಕ ಗರ್ಭಧಾರಣ ಕಾರ್ಯಕರ್ತ ರಮೇಶ್ ಅಂಬಿ, ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ವಿಶ್ರಾಂತ ಹಿರಿಯ ಶಿಕ್ಷಕ ಬಸವರಾಜ ಅನಂತಪೂರ, ಶಿಕ್ಷಕ ಈರಣ್ಣ ದೇಸಾಯಿ, ಜಿ.ಆರ್.ಜಾಧವ, ಶಿಕ್ಷಕಿಯರಾದ ಕವಿತಾ ಅಂಬಿ, ಸಹನಾ ಹತ್ತಳ್ಳಿ, ಪ್ರಮೀಳಾ ತೇಲಸಂಗ ಇತರರಿದ್ದರು.
ಶಿಕ್ಷಕ ಸದಾಶಿವ ಸಿದ್ದಾಪುರ ನಿರೂಪಿಸಿ, ವಂದಿಸಿದರು.

