ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಲ್ಲಿರುವ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸಲು ಬಿ. ಎಂ. ಪಾಟೀಲ ಫೌಂಡೇಶನ್ ವತಿಯಿಂದ ತರಬೇತಿ ನೀಡಲಾಗುವುದು ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.
ಬುಧವಾರ ನಗರದ ಬಿ.ಎಲ್.ಡಿ.ಇ ಸಂಸ್ಷೆಯ ಸಮನ್ವಯ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಎಸ್. ಎಸ್. ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಮನ್ವಯ ಹಬ್ಬ, ಶ್ರೀ ಕೃಷ್ಣ ಜನ್ಮಾಷ್ಢಮಿ, ಫುಡ್ ಫೆಸ್ಟಿವಲ್, ಹೊಸ ಬೋದನಾ ಕೊಠಡಿಗಳು, ಗಣಿತ, ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇಲ್ಲಿನ ಮಕ್ಕಳು ತಯಾರಿಸಿರುವ ವಿಜ್ಞಾನ ಮಾದರಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಶಾಲೆಗಳ ಮಕ್ಕಳಿಗಿಂತಲೂ ಹೆಚ್ಚು ಕೌಶಲ್ಯದಿಂದ ಕೂಡಿವೆ. ವಿದ್ಯಾರ್ಥಿಗಳು ಪ್ರದರ್ಶಿಸಿದ ಶ್ರೀಕೃಷ್ಣ ಜನ್ಮಾಷ್ಠಮಿ ನೃತ್ಯ ಕಂಡು ಮೂಕವಿಸ್ಮಿತನಾಗಿದ್ದೇನೆ. ಅಲ್ಲದೇ, ಈ ಚಿಣ್ಣರು ಫುಡ್ ಫೆಸ್ಟಿವಲ್ ನಲ್ಲಿ ತಯಾರಿಸಿರುವ ತರಹೇವಾರಿ ತಿಂಡಿ ತಿನಿಸುಗಳು ಬಹಳ ರುಚಿಕರವಾಗಿದ್ದವು. ಇಂಥ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಶ್ರೀ ಬಿ. ಎಂ. ಪಾಟೀಲ ಫೌಂಡೇಶನ್ ಮೂಲಕ ತರಬೇತಿ ನೀಡಲಾಗುವುದು. ಈ ಮೂಲಕ ಇಲ್ಲಿನ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುವುದು. ನಾನು ಬಾಲ್ಯದಲ್ಲಿ ಕಲಿತ ಶಾಲೆ ಈಗ ಇಷ್ಟೋಂದು ಅಭಿವೃದ್ಧಿಯಾಗಿರುವುದು ಸಂತಸ ತಂದಿದೆ. ಈ ಶಾಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಇದೇ ವೇಳೆ, ಸುನೀಲಗೌಡ ಪಾಟೀಲ ಅವರು ವಿದ್ಯಾರ್ಥಿಗಳು ಫುಡ್ ಫೆಸ್ಟಿವಲ್ ನಲ್ಲಿ ಇಟ್ಟಿದ್ದ ನಾನಾ ಖಾದ್ಯಗಳನ್ನು ಖರೀದಿಸಿ ರುಚಿ ಸವಿದರು.
ಈ ಸಂದರ್ಭದಲ್ಲಿ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಡಳಿತಾಧಿಕಾರಿಗಳಾದ ಐ. ಎಸ್. ಕಾಳಪ್ಪನವರ, ಬಿ. ಆರ್. ಪಾಟೀಲ, ಬಿ.ಎಲ್.ಡಿ.ಇ ಫಾರ್ಮಸಿ ಕಾಲೇಜಿನ ಎಚ್ಓಡಿ ಡಾ. ಆರ್. ಬಿ. ಕೊಟ್ನಾಳ, ಬಿ.ಎಲ್.ಡಿ.ಇ ಸಂಸ್ಥೆಯ ಕಚೇರಿ ಅಧೀಕ್ಷಕ ಎಸ್. ಎ. ಬಿರಾದಾರ(ಕನ್ನಾಳ), ಎಸ್. ಎಸ್. ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಗಿರೀಶ ಅಕಮಂಚಿ, ಮುಖ್ಯ ಶಿಕ್ಷಕರಾದ ಸಿದ್ಧು ಬಿರಾದಾರ, ವಿ. ಬಿ. ಪಾಟೀಲ, ಮುಖಂಡರಾದ ಸಿದ್ದು ಗೌಡನವರ, ಚನ್ನಪ್ಪ ವಾರದ ಮುಂತಾದವರು ಉಪಸ್ಥಿತರಿದ್ದರು.

