ಸಾತಲಗಾಂವ ಕ್ರಾಸ್ ನಲ್ಲಿ ೧೧೦/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರ ಉದ್ಘಾಟನೆ
ಇಂಡಿ: ತಾಲೂಕಿನಲ್ಲಿ ಈಗಾಗಲೇ ೧೩ ವಿದ್ಯುತ್ ವಿತರಣಾ ಕೇಂದ್ರಗಳಿದ್ದು ಇನ್ನೂ ಎರಡು ಸಧ್ಯದಲ್ಲಿಯೇ ಪ್ರಾರಂಭವಾಗಲಿದ್ದು ಇನ್ನು ನಾಲ್ಕು ಮಂಜುರಾತಿ ಹಂತದಲ್ಲಿವೆ. ತಾಲೂಕಿಗೆ ವಿದ್ಯುತ್ ಇಲಾಖೆಯ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಅವರು ತಾಲೂಕಿನ ಸಾತಲಗಾಂವ ಕ್ರಾಸ್ ನಲ್ಲಿ ೧೧೦/ ೧೧ ಕೆ ವಿ ವಿದ್ಯುತ್ ವಿತರಣಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯವು ವಿದ್ಯುತ್ ವಿತರಣೆಯಲ್ಲಿ ಸ್ವಾವಲಂಬಿಯಾಗಿದ್ದು ಹೈಡ್ರೊ, ವಿಂಡ್, ಸೋಲಾರ, ಎನ್.ಟಿ.ಪಿಸಿ ಮತ್ತು ಕಾರ್ಖಾನೆಯ ಕೊಜೆನ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು ದಿನದ ಏಳು ಗಂಟೆ ವಿದ್ಯುತ್ ಇಂಡಿ ತಾಲೂಕಿನಲ್ಲಿ ರೈತರಿಗೆ ನೀಡಲಾಗುತ್ತಿದೆ ಎಂದರು.
ಕೇಂದ್ರದ ಆಗಿನ ಇಂಧನ ಸಚಿವ ಸುಶೀಲಕುಮಾರ ಇವರ ಸಹಕಾರದಿಂದ ಎನ್ಟಿಪಿಸಿ ಕೂಡಗಿಯಲ್ಲಿ ಆಗಿದ್ದು ಆಲಮಟ್ಟಿ ಆಣೆಕಟ್ಟಿನ ಎತ್ತರ ೫೨೪ ಮೀ ಆದರೂ ನಾವು ರೈತರ ಹೊಲಗಳಿಗೆ ವಿದ್ಯುತ್ ಸಾಕಾಗುತ್ತದೆ ಎಂದರು.
ಈ ಹಿಂದೆ ದಕ್ಷಿಣ ಕರ್ನಾಟಕದಲ್ಲಿ ವಿದ್ಯುತ ತೊಂದರೆ ಇರಲಿಲ್ಲ. ನಾವು ನ್ಯಾಯಯುತವಾದ ಬೇಡಿಕೆ ಮಾಡಿದ್ದರಿಂದ ಸಿದ್ದರಾಮಯ್ಯನವರು ಸಹಕರಿಸಿದ್ದಾರೆ. ಇದರಿಂದ ಗ್ರಾಮೀಣ ಬದುಕು ಬದಲಾಗುತ್ತಿದೆ. ಅದಲ್ಲದೆ ತಾಲೂಕಿನಲ್ಲಿ ವಿದ್ಯುತ್ ಸೇರಿದಂತೆ ಎಲ್ಲ ೧೫೯ ಇಲಾಖೆಗಳಿಗೂ ಅನುದಾನ ತಂದು ಅಭಿವೃದ್ದಿ ಮಾಡುತ್ತಿದ್ದೇವೆ ಎಂದರು.
ಮುಖ್ಯ ಅಭಿಯಂತರ ಜಿ.ಕೆ.ಗೋಟ್ಯಾಳ ಮಾತನಾಡಿ, ಸಾತಲಗಾಂವ ಕ್ರಾಸ್ ನಲ್ಲಿ ಇಂದು ಪ್ರಾರಂಬಿಸಲಾಗಿರುವ ವಿದ್ಯುತ್ ವಿತರಣಾ ಕೇಂದ್ರ ೨೦ ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ. ಇದರಿಂದ ಸಾಲೋಟಗಿ, ನಾದ, ಸಾತಲಗಾಂವ ಮತ್ತು ಗೋಳಸಾರ ಗ್ರಾಮಗಳಿಗೆ ರೈತರ ಹೊಲಗಳಿಗೆ ವಿದ್ಯುತ್ ವಿತರಣೆ ಯಾಗುತ್ತಿದೆ ಎಂದರು.
ಇಂಡಿ ತಾಲೂಕಿನಲ್ಲಿ ಇರುವಷ್ಟು ವಿತರಣಾ ಕೇಂದ್ರ ರಾಜ್ಯದ ಯಾವದೇ ತಾಲೂಕಿನಲ್ಲಿ ಇಲ್ಲ. ಇನ್ನು ಹಡಲಸಂಗ, ಭೈರುಣಗಿ, ನಿಂಬಾಳ ಗ್ರಾಮಗಳಲ್ಲಿ ವಿತರಣಾ ಕೇಂದ್ರ ಸದಸ್ಯದಲ್ಲಿಯೇ ಪ್ರಾರಂಭಿಸಲಾಗುತ್ತದೆ ಎಂದರು.
ಗಂಗಾಧರ ಲೋಣಿ, ಬಸವರಾಜ ಗೊರನಾಳ, ದಾದಾಸ್ವಾಮಿ ಮಠ ಮಾತನಾಡಿದರು.
ವೇದಿಕೆಯ ಮೇಲೆ ಪರಮಪೂಜ್ಯ ಮದ್ದಾನಿ ಮಹಾರಾಜರು, ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಇಒ ಬಾಬು ರಾಠೋಡ, ವೃತ್ತ ಅಧಿಕ್ಷಕ ಅಭಿಯಂತರ ರಮೇಶ ಪವಾರ, ಹೆಸ್ಕಾಂ ಅಧಿಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ,ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ,ಗ್ರಾ.ಪಂ ಸಾಲೋಟಗಿ ಅಧ್ಯಕ್ಷೆ ದಾನಮ್ಮ ಕುಂಬಾರ, ನಾದ ಗ್ರಾ.ಪಂ ಅಧ್ಯಕ್ಷ ಸಿದರಾಯ ಐರೋಡಗಿ, ಜಗದೀಶ ಜಾಧವ, ಎಸ್.ಎ.ಬಿರಾದಾರ, ಎಸ್.ಆರ್.ಮೆಂಡೆಗಾರ, ಆರ್.ವಿ.ಕುಂಬಾರ ಮತ್ತಿತರಿದ್ದರು.
ಭೂಮಿದಾನ ನೀಡಿದ ದಯಾನಂದ ಅವಟಿ, ಗುತ್ತಿಗೆದಾರ ಮಹಾದೇವ ಗಚ್ಚಿನಮಠ ಇವರನ್ನು ಸನ್ಮಾನಿಸಲಾಯಿತು.

