ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಸೆಪ್ಟೆಂಬರ್ ೧೭ರಂದು ವಿಶ್ವಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.
ವಿಶ್ವಕರ್ಮ ಜಯಂತಿಯ ಅಂಗವಾಗಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ, ಸೆ.೧೭ರಂದು ಬೆಳಗ್ಗೆ ೯.೩೦ಕ್ಕೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ವಿವಿಧ ಕಲಾತಂಡಗಳೊಂದಿಗೆ ವಿಶ್ವಕರ್ಮ ಅವರ ಭಾವಚಿತ್ರದ ಮೆರವಣಿಗೆ ಚಾಲನೆ ನೀಡಲಾಗುವುದು. ಮೆರವಣಿಗೆಯೂ ನಗರದ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ ವೃತ್ತ, ಕನಕದಾಸ ವೃತ್ತದ ಮಾರ್ಗವಾಗಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರವರೆಗೆ ನಡೆಯಲಿದೆ. ಬೆಳಗ್ಗೆ ೧೦.೩೦ಕ್ಕೆ ರಂಗಮಂದಿರದಲ್ಲಿ ವಿಶ್ವಕರ್ಮ ಜಯಂತಿ ವೇದಿಕೆ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದಲ್ಲಿ ಉಪನ್ಯಾಸ, ಸುಗಮಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು.
ಅಂದು ನಗರದ ವಿವಿಧ ವೃತ್ತಗಳಿಗೆ ಸ್ವಚ್ಚತೆ ಹಾಗೂ ದೀಪಾಲಂಕಾರಗೊಳಿಸುವಂತೆ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸುವುದು, ವೇದಿಕೆ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲು ಸಂಬಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ವಿಜಯಪುರ ಗ್ರೇಡ್-೨ ತಹಶೀಲ್ದಾರ ಐ.ಎಚ್. ತುಂಬಗಿ, ಮಹಾನಗರಪಾಲಿಕೆ ಉಪ ಆಯುಕ್ತ ವಾಯ್.ಎಸ್. ನಾರಾಯಣಕರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವನಗೌಡ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ಪೂಜ್ಯಶ್ರೀ ಮಹೇಂದ್ರ ಸ್ವಾಮಿಗಳು, ಶ್ರೀಕಾಂತ ಕುಂದನಗಾರ, ಬಾಳು ಗಿರಗಾಂವಕರ, ಪ್ರಮೋದ ಬಡಿಗೇರ, ಈರಣ್ಣ ಪತ್ತಾರ, ಸಂತೋಷ ವಿಶ್ವಕರ್ಮ, ಪ್ರದೀಪ ಪತ್ತಾರ, ಮನೋಹರ ಪತ್ತಾರ, ಮಹೇಶ ಕೆಂದೂರ, ವಿನೋದ ಪತ್ತಾರ, ಮೌನೇಶ ಪತ್ತಾರ, ಮುಕುಂದ ಕುಂದನಗಾರ, ಶಾರದಾ ಪತ್ತಾರ, ಸುನಂದ ವಿಶ್ವಕರ್ಮ, ಮೀನಾ ಕುಂದನಗಾರ, ಮಂಜುನಾಥ ಪತ್ತಾರ, ಸೋಮನಗೌಡ ಕಲ್ಲೂರ, ದೇವೇಂದ್ರ ಮೀರೆಕರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

