ನೂತನ ಅಧ್ಯಕ್ಷರಾಗಿ ಶಾಂತವೀರ ಬಿರಾದಾರ, ಉಪಾಧ್ಯಕ್ಷರಾಗಿ ರಾಜಣ್ಣ ನಾರಾಯಣಕರ ಅವಿರೋಧ ಆಯ್ಕೆ |
ಸಿಂದಗಿ: ತೀವ್ರ ಕುತೂಹಲ ಕೆರಳಿದ್ದ ಸಿಂದಗಿ ಪುರಸಭೆಯ ಎರಡನೆಯ ಅವಧಿಗೆ ಒಟ್ಟು ೨೩ ಸದಸ್ಯರಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸೋಮವಾರ ಜರುಗಿತು. ಪುರಸಭೆಯ ಎರಡೂ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ೧೪ನೇ ವಾರ್ಡ್ ಸದಸ್ಯ ಶಾಂತವೀರ ಸಿದ್ದಪ್ಪ ಬಿರಾದಾರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಮತ್ತು ಸಾಮಾನ್ಯ ಮೀಸಲಾತಿ ಇರುವ ಉಪಾಧ್ಯಕ್ಷ ಸ್ಥಾನಕ್ಕೆ ೧೮ನೇ ವಾರ್ಡ್ ಸದಸ್ಯ ರಾಜಣ್ಣ ಧರ್ಮಣ್ಣ ನಾರಾಯಣಕರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು ೨೩ ಜನ ಸದಸ್ಯರು ಅದರಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ೧೮ ಜನ ಸದಸ್ಯರು ಮಾತ್ರ ಹಾಜರಿದ್ದು, ೫ ಜನ ಸದಸ್ಯರು ಗೈರಾಗಿದ್ದರು. ಕೋರಂ ಭರ್ತಿಗೆ ೯ ಜನ ಸದಸ್ಯರು ಇರಬೇಕು ಚುನಾವಣಾ ಪ್ರಕ್ರಿಯೆಯಲ್ಲಿ ೧೮ ಸದಸ್ಯರಿರುವ ಕಾರಣ ಚುನಾವಣೆ ಪೂರ್ಣಗೊಂಡಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ತಿಳಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಶಾಂತವೀರ ಬಿರಾದಾರ ಮಾಧ್ಯಮದವರೊಂದಿಗೆ ಮಾತನಾಡಿ, ಅಧ್ಯಕ್ಷನಾಗಬೇಕು ಎನ್ನುವ ಬಯಕೆ ಬಹು ದಿನಗಳಿಂದ ಇತ್ತು. ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿಯೇ ನಾನು ಅಧ್ಯಕ್ಷನಾಗಿದ್ದು, ನನಗೆ ಬೆಂಬಲ ನೀಡಿದ ಎಲ್ಲ ಸದಸ್ಯರಿಗೂ ನಾನು ಅಭಿನಂದನೆ ಸಲ್ಲಿಸುವೆ. ಶಾಸಕರ ಮಾರ್ಗದರ್ಶನದಲ್ಲಿ ಅವರ ಸಹಕಾರದಿಂದ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಪಕ್ಷ ಭೇದ ಮರೆತು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಂಡು ಪಟ್ಟಣದ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗುತ್ತೇನೆ ಎಂದರು.
ಈ ವೇಳೆ ನೂತನ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಮಾತನಾಡಿ, ದಿ.ಎಮ್.ಸಿ.ಮನಗೂಳಿ ಅವರ ಸಹಕಾರದಿಂದ ನಾನು ೨ನೆಯ ಬಾರಿ ಜೆಡಿಎಸ್ ಪಕ್ಷದಿಂದ ಸದಸ್ಯನಾಗಿ ಆಯ್ಕೆಯಾಗಿದ್ದು, ಪ್ರಸ್ತುತ ನಾನು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಶಾಸಕರ, ನೂತನ ಅಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ದಿಗೆ ಬದ್ದ ಎಂದರು.
ಈ ವೇಳೆ ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಮಾತನಾಡಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಪ್ರತಿಭಾ ಕಲ್ಲೂರ, ಉಮಾದೇವಿ ಸುಲ್ಪಿ, ಕಲಾವತಿ ಕಡಕೋಳ, ಬಸವರಾಜ ಯರನಾಳ, ಹಣಮಂತ ಸುಣಗಾರ, ಬಾಷಾಸಾಬ ತಾಂಬೋಳಿ, ಖೈರುನಬಿ ನಾಟೀಕಾರ, ಹಾಸಿಂಪೀರ ಆಳಂದ, ಪಾರ್ವತಿ ದುರ್ಗಿ, ಮಹಾಂತೇಶ ಬಿರಾದಾರ, ಡಾ.ಶಾಂತವೀರ ಮನಗೂಳಿ, ಭೀಮಣ್ಣ ಕಲಾಲ, ತಹಶೀನ ಮುಲ್ಲಾ, ಗೊಲ್ಲಾಳ ಬಂಕಲಗಿ, ಶರಣಗೌಡ ಪಾಟೀಲ, ಮಹಾದೇವಿ ನಾಯ್ಕೋಡಿ, ಮುಖ್ಯಾಧಿಕಾರಿ ಸುರೇಶ ನಾಯಕ ಸೇರಿದಂತೆ ಇತರರು ಇದ್ದರು.
ಈ ವೇಳೆ ಚುನಾವಣಾ ಸಿಬ್ಬಂದಿ, ಪುರಸಭೆಯ ಸಿಬ್ಬಂದಿ ಇದ್ದರು. ಪಿಎಸ್ಐ ಆರೀಫ್ ಮುಷಾಪುರಿ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಪುರಸಭೆಯ ಸುತ್ತಲೂ ಬಿಗಿ ಭದ್ರತೆ ಕೈಗೊಂಡಿದ್ದರು.

” ಪುರಸಭೆಗೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಂಡು ನಗರದ ಸಂಪೂರ್ಣ ಅಭಿವೃದ್ದಿಯೆಡೆಗೆ ಹೆಚ್ಚಿನ ಗಮನ ಹರಿಸಬೇಕು. ರಾಜ್ಯದಲ್ಲಿಯೇ ಸಿಂದಗಿ ನಗರವನ್ನು ಸ್ವಚ್ಚತೆಯಿಂದ ಕೂಡಿದ ನಗರ ಎಂದೂ ಕರೆಯಿಸಿಕೊಳ್ಳುವಲ್ಲಿ ಶ್ರಮಿಸಬೇಕು. ಸರಕಾರ ಮಟ್ಟದಲ್ಲಿ ನಾನು ಹೋರಾಟ ಮಾಡಿ ಪಟ್ಟಣದ ಅಭಿವೃದ್ದಿಗೆ ಹೆಚ್ಚಿನ ಅನುದಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಯಾವುದೇ ಕಾಲಕ್ಕೂ ನಗರದ ಅಭಿವೃದ್ದಿ ವಿಚಾರದಲ್ಲಿ ಸದಸ್ಯರು ಭಿನ್ನಾಭಿಪ್ರಾಯ ತಾಳದೇ, ಎಲ್ಲರೂ ಪಕ್ಷಾತೀತವಾಗಿ ಸಹಕಾರದಿಂದ ಕಾರ್ಯ ಮಾಡಬೇಕು.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ.

