ರಾಷ್ಟ್ರೀಯ ಹೆದ್ದಾರಿ ಭೂಮಿ ಪೂಜೆ ನೆರವೇರಿಸಿದ ಸಂಸದ ರಮೇಶ ಜಿಗಜಿಣಗಿ ಮಾಹಿತಿ
ಇಂಡಿ: ನಾನು ಪ್ರಚಾರಪ್ರೀಯನಲ್ಲ. ಸದ್ದಿಲ್ಲದೆ ಅಭಿವೃಧ್ಧಿ ಕೆಲಸ ಮಾಡಿ ಮುಗಿಸಿ ತೃಪ್ತಿಪಡುವುದು ನನ್ನ ಸ್ವಭಾವವಾಗಿದೆ. ಕಳೆದ ೧೦ ವರ್ಷಗಳಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ಧಿಗಾಗಿ ೧ ಲಕ್ಷ ೧೦ ಸಾವಿರ ಕೋಟಿ ರೂ, ಗಳ ಅನುದಾನ ತಂದಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಅವರು ಸೋಮವಾರ ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ೯೮೪ ಕೋಟಿ ರೂ, ಗಳ ೫೪೮-ಬಿ ರಾಷ್ಟ್ರೀಯ ಹೆದ್ದಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನನ್ನ ೫೦ ವರ್ಷಗಳ ರಾಜಕೀಯ ಜೀವನಕ್ಕೆ ಇಂಡಿ ಜನತೆ ಜೀವ ತುಂಬಿದ್ದಾರೆ. ಅವರ ಋಣ ಮುಟ್ಟಿಸುವದಕ್ಕಾಗಿ ನನ್ನ ಜೀವ ಒತ್ತೇ ಇಟ್ಟು ಕೆಲಸ ಮಾಡುತ್ತಿದ್ದೇನೆ ಎಂದರು.
ಇಂಡಿ ಕಾಲುವೆಯ ರಿಪೇರಿಗಾಗಿ ೨೭೦೦ ಕೋಟಿ ರೂ, ಗಳ ಅನುದಾನಕ್ಕಾಗಿ ಪ್ರಧಾನ ಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಇಷ್ಟರಲ್ಲಿಯೇ ಮಂಜೂರಾತಿ ಸಿಗುವ ವಿಶ್ವಾಸವಿದೆ ಎಂದರು.
ಇಂದು ಭೂಮಿಪೂಜೆ ನಡೆದ ಈ ೯೮೪ ಕೋಟಿ ರೂ, ಗಳ ಅನುದಾನದ ಸುಮಾರು ೧೦೨ ಕಿಮೀ ಉದ್ದದ ಹೆದ್ದಾರಿ ಕಾಮಗಾರಿ ಶೀಘ್ರವೇ ಪ್ರಾರಂಭಿಸಲಾಗುವದು. ಇದರಲ್ಲಿ ೧೦ ಸೇತುವೆಗಳು ಬರಲಿದ್ದು, ಎಲ್ಲಾ ಕಾರ್ಯಗಳನ್ನು ಬೇಗನೇ ಮುಗಿಸಲು ಸೂಚನೆ ನೀಡಲಾಗಿದೆ ಎಂದರು.
ತಾಲ್ಲೂಕಿನ ಇಂಚಗೇರಿ, ಗುಡ್ಡಗಳಲ್ಲಿ ನೀರು ಸಂಗ್ರಹಿಸಿ, ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವಂತೆ ಕ್ರಮ ಜರುಗಿಸಲಾಗಿದೆ. ೧೨೦ ಕೋಟಿ ಅನುದಾನದಲ್ಲಿ ೭೬ ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿಗಾಗಿ ಜಲಧಾರೆ ಯೋಜನೆ ಮಾಡಲಾಗಿದೆ. ಕೆಲಸ ಭರದಿಂದ ಸಾಗಿದೆ. ಭೀಮಾ ನದಿಯ ದಂಡೆಗೆ ಇರುವ ಗ್ರಾಮಗಳಿಗೂ ಕೂಡಾ ಕೃಷ್ಣಾ ಮೇಲ್ದಂಡೆ ಯೋಜನೆಯ ಜಲಧಾರೆ ಯೋಜನೆಯಿಂದ ಕುಡಿಯುವ ನೀರು ಒದಗಿಸಲಾಗುತ್ತದೆ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಮಾಜಿ ಶಾಸಕ ರಮೇಶ ಬೂಸನೂರ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ಡಿ .ಪಾಟೀಲ, ಚಂದ್ರಶೇಖರ ಕವಟಗಿ, ಕಾಸುಗೌಡ ಬಿರಾದಾರ ಮಾತನಾಡಿದರು.
ವೇದಿಕೆಯಲ್ಲಿ ಬಿಜೆಪಿ ಪ್ರಮುಖರಾದ ಶ್ರೀಪತಿಗೌಡ ಬಿರಾದಾರ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಕಿವಡೆ, ಸಿದ್ದಲಿಂಗ ಹಂಜಗಿ, ಶೀಲವಂತ ಉಮರಾಣಿ, ಅಣ್ಣಪ್ಪ ಖೈನೂರ, ಸಂಜೀವ ಐಹೊಳೆ, ಬಿ.ಎಸ್. ಪಾಟೀಲ, ಶ್ರೀಶೈಲಗೌಡ ಬಿರಾದಾರ, ವಿವೇಕ ಡಬ್ಬಿ, ಉಮೇಶ ಕೋಳಕೂರ, ದೇವೇಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಅನೀಲ ಜಮಾದಾರ, ಶರಣಗೌಡ ಬಂಡಿ, ಶ್ರೀಶೈಲಗೌಡ ಬಿರಾದಾರ, ವಿರಾಜ ಪಾಟೀಲ, ಎಸ್.ಜೆ. ವಾಲೀಕಾರ, ನಾಗುಗೌಡ ಪಾಟೀಲ (ಅಥರ್ಗಾ), ಪ್ರಕಾಶ ಹಿಟ್ನಳ್ಳಿ, ರವಿ ವಗ್ಗೆ, ರಾಘವೇಂದ್ರ ಕಾಪಸೆ, ಸಂಜು ದಶವಂತ, ಶಾಂತು ಕಂಬಾರ ಸೇರಿದಂತೆ ಇನ್ನಿತರರು ಇದ್ದರು.
ದೇವೇಂದ್ರ ಕುಂಬಾರ ಸ್ವಾಗತಿಸಿದರು. ಮಲ್ಲಿಕಾರ್ಜುನ ಕಿವುಡೆ ವಂದಿಸಿದರು.

