ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಖಡಕ್ ಸೂಚನೆ
ಇಂಡಿ: ಪಟ್ಟಣದ ಸ್ಟ್ರೀಟ್ ಲೈಟ್, ಯಜೆಡಿ, ಟ್ರಾಫಿಕ್, ಅರ್ಹ ಪಡಿತರ ಚೀಟಿ ಯೋಜನೆ, ಗ್ರಾಮೀಣ ಭಾಗದ ಕೆಟ್ಟ ರಸ್ತೆಗಳು, ಸರಕಾರಿ ಶಾಲೆಗಳ ಕಟ್ಟಡ ಸೋರಿಕೆ ಮತ್ತು ದುರಸ್ತಿ ಹಾಗೂ ತಾಲ್ಲೂಕಿನಲ್ಲಿ ಸಂಚರಿಸುವ ಸರಕಾರಿ ಬಸ್ಸುಗಳ ಸ್ಥಿತಿಗತಿ, ಅಕಾಲಿಕ ಮಳೆಯಿಂದ ಹಾನಿಯಾದ ಕೃಷಿ ತೋಟಗಾರಿಕೆ ಹಾಗೂ ಗ್ಯಾರೆಂಟಿ ಯೋಜನೆ ಸೇರಿದಂತೆ ಆಲಿಸಿ, ಸಾರ್ವಜನಿಕ ಸಮಸ್ಯೆಗಳಿಗೆ ತುರ್ತು ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಖಡಕಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಸೂಚಿಸಿದರು.
ಸೋಮವಾರ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ಅಲ್ಲದೆ ರೈತರ ಆತ್ಮಹತ್ಯ, ಜಾನುವಾರುಗಳ ಮರಣ ಪ್ರಕರಣಗಳಿಗೆ ೧೫ ದಿನದಲ್ಲಿ ಪರಿಹಾರ ನೀಡಬೇಕು. ಆರು ತಿಂಗಳುಗಳ ಕಾಲ ಪರಿಹಾರ ನೀಡದಿದ್ದರೆ ಆ ಕುಟುಂಬದ ಪಾಡೇನಾಗುತ್ತದೆ ಎಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು.
ತಾಲೂಕಿನಲ್ಲಿ ೭೧೮೭೬ ಮಹಿಳೆಯರು ಪ್ರತಿ ತಿಂಗಳು ರೂ ೨೦೦೦ ಹಣ ಪಡೆಯುತ್ತಿದ್ದು ಪ್ರತಿ ತಿಂಗಳು ಆ ಹಣ ಒಟ್ಟು ೧೪ ಕೋಟಿ ವಿತರಣೆಯಾಗುತ್ತಿದ್ದು ಈ ವರೆಗೆ ೧೧ ತಿಂಗಳಲ್ಲಿ ೧೫೪ ಕೋಟಿ ರೂ ವಿತರಣೆ ಯಾಗಿದೆ ಎಂದು ಸಿಡಿಪಿಓ ತಿಳಿಸಿದರು.
ವಿದ್ಯುತ್ ಇಲಾಖೆಯಿಂದ ಒಟ್ಟು ೪೧ ಸಾವಿರ ಮನೆಗಳಲ್ಲಿ ೩೯ ಸಾವಿರ ಮನೆಗಳಿಗೆ ಒಟ್ಟು ೦೬ ಕೋಟಿ ಮೌಲ್ಯದ ವಿದ್ಯುತ್ ಉಚಿತ ಮತ್ತು ತಾಲೂಕಿನಲ್ಲಿ ೬೧ ಸಾವಿರ ಜನರಿಗೆ ಅಕ್ಕಿಯ ಹಣ ಕುರಿತು ಪ್ರತಿಯೊಬ್ಬರಿಗೆ ರೂ ೧೭೦ ರಂತೆ ೨೨ ಕೋಟಿ ರೂ ಹಣ ನೀಡಲಾಗುವದು ಎಂದು ಸಭೆಯಲ್ಲಿ ಸಂಬಂದಿತ ಅಧಿಕಾರಿಗಳು ಮತ್ತು ಶಾಸಕರು ತಿಳಿಸಿದರು.
ಬಸ್ ನಿಲ್ದಾಣದಲ್ಲಿ ಡ್ರೈನೇಜ್ ನೀರು ಬರುತ್ತಿದ್ದು ಪುರಸಭೆಗೆ ಸಾಕಷ್ಟು ಬಾರಿ ಈ ಕುರಿತು ಮನವಿ ಮಾಡಿದರೂ ಕಾಳಜಿ ತೋರಿಲ್ಲ ಎಂದು ಘಟಕ ವ್ಯವಸ್ಥಾಪಕ ಬಿರಾದಾರ ದೂರಿದರು.
ಕೆಡಿಪಿಗೆ ನೂತನವಾಗಿ ಆಯ್ಕೆಯಾದ ನಾಮನಿರ್ದೇಶಕ ಸದಸ್ಯರಿಗೆ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಎಸಿ ಅಬೀದ್ ಗದ್ಯಾಳ, ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ತಹಸೀಲ್ದಾರ ಬಿ.ಎಸ್. ಕಡಕಬಾವಿ, ಡಿ.ವಾಯ್.ಎಸ್.ಪಿ ಜಗದೀಶ ಎಚ್.ಎಸ್, ತಾಪಂ ಇಒ ಬಾಬು ರಾಠೋಡ, ಭೀಮು ಕವಲಗಿ, ಇಲಿಯಾಸ ಬೋರಾಮಣಿ, ಪ್ರಶಾಂತ ಕಾಳೆ, ಮಲ್ಲನಗೌಡ ಬಿರಾದಾರ ಮತ್ತಿತರರಿದ್ದರು.
ಅಧಿಕಾರಿಗಳಾದ ಆರ್.ಎಸ್. ರುದ್ರವಾಡಿ, ಮಹಾಂತೇಶ ಹಂಗರಗಿ, ಮಹಾದೇವಪ್ಪ ಏವೂರ, ಎಚ್.ಎಸ್. ಪಾಟೀಲ, ಅರಣ್ಯ ಇಲಾಖೆಯ ಎಸ್.ಜಿ. ಸಂಗಾಲಕ, ಮಂಜುನಾಥ ಧೂಳೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈಗಗಲೇ ಮುರಮ-ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೂಮಿಪೂಜೆ ನೆರವೇರಿಸಿದ್ದು, ಈಗ ಮತ್ತೆ ಅದೇ ರಾಷ್ಟ್ರೀಯ ಹೆದ್ದಾರಿಯ ಭೂಮಿ ಪೂಜೆ ಮಾಡುವುದು ಎಷ್ಟು ಸರಿ? ಈಗ ಅವರು ಮಾಡಿದ ಕಾರ್ಯಕ್ರಮ ಪ್ರೋಟೊಕಾಲ್ ಪ್ರಕಾರ ಇದೆಯೋ? ಹೇಗಿದೆ? ಅದನ್ನು ಕೂಡಲೆ ಪತ್ರ ಬರೆದು ಮಾಹಿತಿ ಪಡೆಯಲು ಶಾಸಕ ಯಶವಂತ್ರಾಯಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಇಂಡಿ ತಾಲೂಕಿನಲ್ಲಿಯ ಯಾವುದಾದರೂ ಒಂದು ಗ್ರಾಮವನ್ನು ಸಾರಾಯಿ ಮುಕ್ತ ಮಾಡಿ ಅದು ಇತರ ಗ್ರಾಮಗಳಿಗೆ ಪ್ರೇರಣೆಯಾಗುತ್ತದೆ ಎಂದು ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲರು ಸೂಚನೆ ನೀಡಿದರು. ಅದಕ್ಕೆ ಪೂರಕವಾಗಿ ಮಾತನಾಡಿದ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ಸ್ಥಳೀಯ ಧರ್ಮಸ್ಥಳ ಸೇವಾ ಸಂಸ್ಥೆ ಮತ್ತು ಪೂಜ್ಯ ಶ್ರೀ ಅಮೃತಾನಂದ ಶ್ರೀಗಳ ಸಹಕಾರದಿಂದ ಯಾವುದಾದರೂ ಒಂದು ಗ್ರಾಮ ಗುರುತಿಸಿ ಬರುವ ಅಕ್ಟೋಬರ್ ೨ ರಿಂದ ಸಾರಾಯಿ ಮುಕ್ತ ಗ್ರಾಮ ಮಾಡಲು ಕಾರ್ಯಯೋಜನೆ ರೂಪಿಸಲಾಗುವುದು ಎಂದರು.

