ದೇವರಹಿಪ್ಪರಗಿ: ಕೋರವಾರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಣ್ಣಮುಚ್ಚಾಲೆಯಿಂದ ಸಾರ್ವಜನಿಕರು ಬೇಸತ್ತಿದ್ದು, ಕನಿಷ್ಠ ಸಿಂಗಲ್ ಫೇಸ್ ವಿದ್ಯುತ್ ಆದರೂ ನೀಡಿ ಅನುಕೂಲ ಮಾಡಿ ಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಸೋಮವಾರ ಕೋರವಾರ ಗ್ರಾಮದ ಹೆಸ್ಕಾಂ ಕಚೇರಿಗೆ ಆಗಮಿಸಿದ ನೂರಾರು ರೈತರು ಹೆಸ್ಕಾಂ ವಿರುದ್ದ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಈರಪ್ಪ ಕುಳೇಕುಮಟಗಿ ಹಾಗೂ ಗೌರವಾಧ್ಯಕ್ಷ ಶಿವಾನಂದ ಹಿರೇಮಠ ಮಾತನಾಡಿ, ಹಲವಾರು ದಿನಗಳಿಂದ ವಿದ್ಯುತ್ ಕಣ್ಣು ಮುಚ್ಚಾಲೆಯಿಂದ ಸಾಕಾಗಿ ಹೋಗಿದೆ. ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಹಿಟ್ಟಿನ ಗಿರಣಿ ಸೇರಿದಂತೆ ಗುಡಿಕೈಗಾರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದಿನಕ್ಕೆ ನೂರಾರು ಸಲ ವಿದ್ಯುತ್ ಸ್ಥಗಿತಗೊಳ್ಳುವುದರಿಂದ ಮನೆಯಲ್ಲಿನ ವಿದ್ಯುತ್ ಉಪಕರಣಗಳು ಸುಟ್ಟು ಹೋಗುತ್ತಿವೆ. ಇನ್ನು ಜಮೀನುಗಳಲ್ಲಿ ನೀರು ಹರಿಸಲು ಸಹ ಸರಿಯಾಗಿ ವಿದ್ಯುತ್ ವ್ಯವಸ್ಥೆ ಇಲ್ಲದೆ ಮರಗುವಂತಾಗಿದೆ. ಹಲವಾರು ಬಾರಿ ಮನವಿ ಮಾಡಿದರೂ ಕೇವಲ ಹಾರಿಕೆ ಉತ್ತರ ಮಾತ್ರ ನೀಡುತ್ತಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕರು ಸಂಕಷ್ಟ ಹೆಚ್ಚಾಗಿದೆ. ಅದಕ್ಕಾಗಿ ಕನಿಷ್ಠ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಒದಗಿಸಬೇಕು. ತೋಟಗಳಿಗೂ ವಿದ್ಯುತ್ ಸರಿಯಾಗಿ ನೀಡಬೇಕು. ವಿದ್ಯುತ್ ಪೂರೈಕೆ ವ್ಯವಸ್ಥೆ ಸರಿಯಾಗದಿದ್ದರೆ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಕೋರವಾರ ಹೆಸ್ಕಾಂ ಸಹಾಯಕ ಅಭಿಯಂತರ ಪಿ.ಆರ್.ಹಿರೇಮಠ ಇವರಿಗೆ ಮನವಿ ಸಲ್ಲಿಸಿದರು.
ರೈತರಾದ ಸುಭಾಷ ಸಜ್ಜನ, ದಾವಲಸಾಬ ಮಂದೇವಾಲ, ಸಂಗಪ್ಪಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ, ಭೀಮನಗೌಡ ಬಿರಾದಾರ, ಮಂಹಾಂತಪ್ಪ ಕುಂಬಾರ, ರಾಮಸಿಂಗ್ ರಾಠೋಡ, ಶಂಕರ ರಾಠೋಡ, ಶಿವಪ್ಪ ಜಾಲವಾದಿ, ಬಾಬು ಚವ್ಹಾಣ, ಶ್ರೀಶೈಲ ತಾಳಿಕೋಟಿ, ಮಹಾದೇವಪ್ಪ ಹುಣಸಗಿ, ಮಲ್ಲಪ್ಪ ಸುಂಬಡ, ಲಕ್ಕಪ್ಪ ಹೂಗಾರ, ರಾಚಯ್ಯ ಹಿರೇಮಠ, ನಿಂಗನಗೌಡ ವಂದಗನೂರ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
ಕೋರವಾರದಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟನೆ
Related Posts
Add A Comment

