ವಿಜಯಪುರ: ಶಿಕ್ಷಕರು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಮಾನವೀಯ ಮೌಲ್ಯ ಪಡೆದ ಮಕ್ಕಳು ಜಗದ್ವಿಖ್ಯಾತರಾಗಲು ಸಾಧ್ಯವಾಗುತ್ತದೆ ಎಂದು ಚಿತ್ತರಗಿಯ ಶಿವಯೋಗ ಮತ್ತು ನಿಸರ್ಗ ಚಿಕಿತ್ಸೆ ಕೇಂದ್ರದ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.
ನಗರದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯ ವಿಜಯಪುರ ನೇತೃತ್ವದಲ್ಲಿ ಗುರುವಾರ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ದೊಡ್ಡ ಗೌರವ ಸೀಗುವುದು ಶಿಕ್ಷಕರಿಗೆ ಮಾತ್ರ, ಅಜ್ಞಾನದಿಂದ ಸುಜ್ಞಾನದ ಕಡೆ ಕೊಂಡೊಯ್ಯುದು ಜಾಗೃತಿ ಮಾಡುವವರು ಶಿಕ್ಷಕರು, ವಿದ್ಯೆ ಬಹುದೊಡ್ಡ ಸಂಪತ್ತು, ಅದನ್ನು ಗುರುಗಳು ಧಾರೆ ಎರೆಯುತ್ತಾರೆ. ಹೃದಯದಿಂದ ಮಕ್ಕಳಿಗೆ ಮಾನವೀಯ ಮೌಲ್ಯ ಬೆಳೆಸಬೇಕು. ಅಜ್ಞಾನದ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವವನೇ ಶಿಕ್ಷಕ. ಜಗತ್ವಿಖ್ಯಾತ ವ್ಯಕ್ತಿ ಮಾಡುವ ಸಾಮರ್ಥ್ಯ ಇರುವದು ಶಿಕ್ಷಕನಿಗೆ ಮಾತ್ರ ಎಂದರು.
ತಿಕೋಟಾ ತಾಲ್ಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಮಾತನಾಡಿ, ನಮ್ಮ ಕರ್ತವ್ಯವನ್ನು ನಾವು ಪ್ರಾಮಾಣಿಕವಾಗಿ ಮಾಡಬೇಕು. ಅಂದಾಗ ಸಮಾಜ ನಮಗೆ ಗೌರವ ಕೊಡುತ್ತದೆ ಎಂದರು.
ತಾಲ್ಲೂಕಿನ ಸಾಧಕ ಶಾಲೆಗಳ ವಿಡಿಯೋ ಎಲ್ಇಡಿ ಮೂಲಕ ಬಿತ್ತರಿಸಲಾಯಿತು. ವಯೋನಿವೃತ್ತ, ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ಅಕಾಲಿಕ ನಿಧನ ಹೊಂದಿದ ಶಿಕ್ಷಕರ ಕುಟುಂಬಗಳ ಸದಸ್ಯರಿಗೆ ಗೌರವ ಸಲ್ಲಿಸಲಾಯಿತು.
ಬಿಇಓ ಪ್ರಮೋದಿನಿ ಬಳೋಲಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾಪೌರ ಮಹೇಜಬಿನ ಅಬ್ದುಲರಜಾಕ ಹೊರ್ತಿ, ತಾಪಂ ಇಓ ಬಸವರಾಜ ಐನಾಪುರ, ಅರ್ಜುನ ಲಮಾಣಿ, ಶಿವರಾಜ ಬಿರಾದಾರ, ಪುಷ್ಪಾ ಗಚ್ಚಿನಮಠ, ಎ.ಬಿ.ಧಡಕೆ, ಮಲ್ಲನಗೌಡ ಹಡಲಗೇರಿ, ವಸಂತ ನಾಯಕ, ಬಸವರಾಜ ರೆಬಿಬಾಳ, ದೇಶಪಾಂಡೆ, ಹಣಮಂತ ಕುಡಚಿ, ಗಜಾನಂದ ಜುಂಜರವಾಡ, ಬಿ.ಎಸ್.ಮಠ, ಝಡ್.ಐ.ಇಂಡಿಕಾರ, ಅಶೋಕ ಬಜಂತ್ರಿ, ಎಸ್.ಎಂ.ಚಿತ್ತರಗಿ, ಮುತ್ತಪ್ಪ ಪೂಜಾರಿ, ಆರ್.ಬಿ.ಜಾಧವ, ಎಂ.ಎನ್.ನಾಯಿಕ, ದೀಪಾಕ್ಷಿ ಜಾನಕಿ, ಎಸ್.ಡಿ.ಮೊಸಲಗಿ, ದಿನೇಶ ಹಳ್ಳಿ, ಅಶ್ಪಾಕ ಮನಗೂಳಿ, ಜ್ಯೋತಿ ಖೋತ ಇದ್ದರು.
ಕಾರ್ಯಕ್ರಮವನ್ನು ರೇವತಿ ಬೂದಿಹಾಳ, ಕಾಶಿನಾಥ ಜಾಧವ, ಪ್ರಭು ಬಿರಾದಾರ ನೆರವೇರಿಸಿದರು.
“ಮಕ್ಕಳಷ್ಟು ದೊಡ್ಡ ಸಂಪತ್ತು ಈ ಜಗತ್ತಿನಲ್ಲಿ ಇಲ್ಲ. ಸಾವಿರ ತಾಯಿಯ ಹೃದಯ ಒಬ್ಬ ಶಿಕ್ಷಕನಲ್ಲಿ ಇರುತ್ತದೆ. ಇಲಾಖೆಯ ಹಲವು ಒತ್ತಡಗಳ ಮಧ್ಯೆ ಪ್ರಾಮಾಣಿಕವಾಗಿ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕರ ಕುರಿತು ಹೆಮ್ಮೆ ಇದೆ. ತಮ್ಮ ಕೈಯಲ್ಲಿ ಕಲಿತ ಮಗು ಉನ್ನತ ಹುದ್ದೆ ಏರಿದಾಗ ಶಿಕ್ಷಕ ಸಂತೋಷ ಪಡುತ್ತಾನೆ.”
– ಸಂಗಮೇಶ ಬಬಲೇಶ್ವರ
ಅಧ್ಯಕ್ಷರು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ

