ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕರೆ
ವಿಜಯಪುರ: ಶ್ರೀ ಕೃಷ್ಣನ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವುದರ ಮೂಲಕ ಅವರನ್ನು ಆದರ್ಶಪ್ರಾಯ ವ್ಯಕ್ತಿಯಾಗಿ ರೂಪಿಸಿ ವಿಶ್ವ ಮಾನವ ಸಂದೇಶ ಎಲ್ಲೆಡೆ ಪಸರಿಸಬೇಕು ಎಂದು ಧಾರವಾಡದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದಿಂದ ನಗರದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ಜರುಗಿದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ವ ಸಮುದಾಯಗಳ ಪ್ರೀತಿಗೆ ಪಾತ್ರರಾದ ಶ್ರೀ ಕೃಷ್ಣರ, ಕೌಶಲ್ಯ, ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ, ಆದರ್ಶ, ಸ್ನೇಹ, ಅಪಾಯಮಾನ್ಯವಾಗಿದೆ. ರಾಜತಾಂತ್ರಿಕ ನಿಪುಣತೆ, ಸಹನೆ, ತಾಳ್ಮೆಯಂತಹ ಗುಣಗಳಿಂದ ವಿಶಿಷ್ಟವಾಗಿ ಹೊರಹೊಮ್ಮಿದ ಶ್ರೀ ಕೃಷ್ಣ ಎಲ್ಲರಲ್ಲೂ ಬೆರೆಯುವ ವ್ಯಕ್ತಿತ್ವ ಅವರದ್ದು, ಕುಚೇಲ ಶ್ರೀಕೃಷ್ಣನ ಸ್ನೇಹ, ಯಾವ ಬೇಧ ಭಾವಗಳಿಲ್ಲದ ಅಪರೂಪದ ವ್ಯಕ್ತಿತ್ವ, ಶ್ರೀ ಕೃಷ್ಣನ ಆದರ್ಶಗಳು ನಮ್ಮ ಮನೆ ಮನ ಬೆಳಗುವಂತಾಗಲಿ, ಮಕ್ಕಳಿಗೆ ಶ್ರೀಕೃಷ್ಣನ ಆದರ್ಶಗಳನ್ನು ತಾಯಂದಿರ ತಿಳಿಸಿಕೊಡಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಬಲೇಶ್ವರ ಕರೆ ನೀಡಿದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿದರು.
ಉಪನ್ಯಾಸ ನೀಡಿದ ಪಂಡಿತ ಆಚಾರ್ಯ ವಿನಾಯಕ ಗುಡಿ ಅವರು, ಶ್ರೀ ಕೃಷ್ಣನ ಬಾಲ ಲೀಲೆಗಳು, ಜೀವನ ಚರಿತ್ರೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ವೀಣಾ ಥಿಟೆ ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ವೇದಿಕೆಯ ಮೇಲೆ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ದುರ್ಗಪ್ಪ ಉಳ್ಳಾಗಡ್ಡಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಶ್ರೀ ಕೃಷ್ಣ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಗುರು ಕಣ್ಣುರ, ರಾಮು ಮನಗೂಳಿ, ಮಹಾದೇವ ದಲಾಲಿ, ಯಂಕಪ್ಪ ಜಾಲವಾದಿ ಯಲ್ಲಪ್ಪ ದ್ಯಾಬೇರಿ, ಮಹಾದೇವಿ ಬಾಗಲಕೋಟ, ಯಂಕಪ್ಪ ಜೋರಪುರ, ಸುರೇಶ್ ಗೊಲ್ಲರ, ಹಣಮಂತ ತೊರವಿ, ಯಲ್ಲಪ್ಪ ರಬಕವಿ, ಭೀಮವ್ವ ಬಾಗಲಕೋಟೆ, ದುರ್ಗಾವ್ವ ಚಿಕ್ಕರೂಗಿ, ಸಾಮವ್ವ ಗೊಲ್ಲರ, ಯಲ್ಲವ್ವ ನಾಗಠಾಣ, ರಮೇಶ್ ಗೊಲ್ಲರ, ಮಹಾಂತೇಶ್ ಗೊಲ್ಲರ, ದೇವೇಂದ್ರ ಮೀರೆಕರ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ, ಅಡಿವೆಪ್ಪ ಸಾಲಗಲ್, ವಿದ್ಯಾವಂತಿ ಅಂಕಲಗಿ ಉಪಸ್ಥಿತರಿದ್ದರು.

