ವಿಜಯಪುರ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ (ಆಡಳಿತ) ಡಾ. ಬಿ.ಎಸ್.ಕನಮಡಿ ಮಾಹಿತಿ
ವಿಜಯಪುರ: ೨೧ನೇ ರಾಷ್ಟ್ರೀಯ ಜಾನುವಾರು ಗಣತಿಗೆ ಸಿದ್ಧತೆಗಳು ಆರಂಭವಾಗಿದ್ದು, ಸೆ.೧ರಂದು ಅದಕ್ಕೆ ವಿಜಯಪುರ ತಾಲೂಕಿನಲ್ಲಿ ಚಾಲನೆ ನೀಡಲಾಗುವುದೆಂದು ತಾಲೂಕು ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ (ಆಡಳಿತ) ಡಾ. ಬಿ.ಎಸ್.ಕನಮಡಿ ತಿಳಿಸಿದ್ದಾರೆ.
ಈ ಕುರಿತು ಆ.೨೬ ಸೋಮವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ತಾಲೂಕಿನಲ್ಲಿ ಹೈನುಗಾರಿಕೆ, ಪಶುಪಾಲನೆ ಪ್ರಮುಖ ವೃತ್ತಿಯಾಗಿದೆ. ಪ್ರತಿ ೫ವರ್ಷಕ್ಕೊಮ್ಮೆ ನಡೆಸಲಾಗುವ ಈ ಗಣತಿಯಲ್ಲಿ ಜಾನುವಾರಗಳ ಪ್ರಮಾಣ, ವಯಸ್ಸು, ಲಿಂಗ ಸಂಯೋಜನೆ, ಕೋಳಿ, ಕುರಿ ಹಾಗೂ ಮೇಕೆ ಸಾಕಾಣಿಕೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಗಣತಿಯು ಸೆಪ್ಟೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಮನೆ-ಮನೆಗೆ ತೆರಳಿ ಮಾಡಲಾಗುವುದು. ಕಾರಣ ಸಾರ್ವಜನಿಕರು, ರೈತರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಡಾ.ಕನಮಡಿ ಕೋರಿದ್ದಾರೆ.
೧೭ ಸಿಬ್ಬಂದಿಯಿಂದ ಗಣತಿ
ವಿಜಯಪುರ ತಾಲೂಕಿನಲ್ಲಿ ೨೧ನೇ ಜಾನುವಾರು ಗಣತಿ ಸಲುವಾಗಿ ಇಲಾಖೆಯು ಸಕಲ ಸಿದ್ಧತೆಯಲ್ಲಿ ತೊಡಗಿದೆ. ತಂಡಗಳ ರಚನೆ ಮಾಡಿ ಅವರಿಗೆ ತರಬೇತಿ ನೀಡಲು ಮುಂದಾಗಿದೆ. ಗಣತಿ ಸಂಬಂಧ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ರೈತರಿಗೆ ಮಾಹಿತಿ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ವಿಜಯಪುರ ತಾಲೂಕಿನಲ್ಲಿ ಪಶು ಆಸ್ಪತ್ರೆ ೦೧, ಪಶು ಚಿಕಿತ್ಸಾಲಯ ೦೪ ಮತ್ತು ೧೦ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಒಬ್ಬರು ಮೇಲ್ವಿಚಾರಕರು ಹಾಗೂ ೧೧ ಜನ ಗಣತಿ ಮಾಡುವರೆಂದು ವಿಜಯಪುರ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ (ಆಡಳಿತ) ಡಾ. ಬಿ.ಎಸ್.ಕನಮಡಿ ಮಾಹಿತಿ ನೀಡಿದ್ದಾರೆ.

