ಮಹಾನಗರಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ನೇತೃತ್ವದಲ್ಲಿ ವಿವಿಧ ಬಡಾವಣೆಗಳಲ್ಲಿ ಗಿಡನೆಡುವ ಕಾರ್ಯ ಚುರುಕು
ವಿಜಯಪುರ: ನಗರದ ಹಸರೀಕರಣಕ್ಕೆ ಹೆಚ್ಚಿನ ಒತ್ತು ನೀಡಿರುವ ವಿಜಯಪುರ ಮಹಾನಗರಪಾಲಿಕೆ, ಶಾಲಾ ಆವರಣ, ಸಮುದಾಯ ಭವನ, ಉದ್ಯಾನವನ ಹಾಗೂ ವಿವಿಧ ರಸ್ತೆಗಳಲ್ಲಿ ಗಿಡನೆಡುವ ಕಾರ್ಯ ಚುರುಕುಗೊಳಿಸಿದೆ.
ಪ್ರಸಕ್ತ ಮಳೆಗಾಲದಲ್ಲಿ ಮಹಾನಗರಪಾಲಿಕೆ ನಗರದಲ್ಲಿ ಎಂಟು ಸಾವಿರ ಗಿಡಗಳನ್ನು ನೆಡುವ ಗುರಿ ಹೊಂದಿ ಈಗಾಗಲೇ ವಿವಿಧ ಬಡಾವಣೆಗಳಲ್ಲಿ ಸುಮಾರು ಆರು ಸಾವಿರ ಗಿಡಗಳನ್ನು ನೆಟ್ಟು ಸಾಧನೆ ಮಾಡಿದೆ.
ಮಹಾನಗರಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಹಿರಿಯ ಅಧಿಕಾರಿ ಶಾಂತೇಶ ಪತ್ತಾರ ಅವರ ನೇತೃತ್ವ ಹಾಗೂ ಉಸ್ತುವಾರಿಯಲ್ಲಿ ಗಿಡನೆಡುವ ಕಾರ್ಯ ಭರದಿಂದ ಸಾಗಿದೆ.
ನಗರದ ಕನಕದಾಸ ಬಡಾವಣೆ, ಗುರುಪಾದೇಶ್ವರ ನಗರ, ತ್ರಿಮೂರ್ತಿ ನಗರ, ರಾಮನಗರ, ರಾಜಾಜಿನಗರ, ಪೊಲೀಸ್ ಪರೇಡ್ ಮೈದಾನ ರಸ್ತೆ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಗಿಡಗಳನ್ನು ನೆಡಲಾಗಿದ್ದು, ಗಿಡನೆಡುವ ಕಾರ್ಯ ಇನ್ನೂ ಮುಂದುವರೆದಿದೆ.
ಹಸರೀಕರಣದ ಮುಂದುವರೆದ ಭಾಗವಾಗಿ ಶನಿವಾರ ನಗರ ಹೊರವಲಯದಲ್ಲಿರುವ ಗಣೇಶನಗರದ ಶ್ರೀ ಸಿದ್ಧಿವಿನಾಯಕ ಹಾಗೂ ಶ್ರೀ ಸಾಕ್ಷಿ ಹನುಮಾನ ದೇವಸ್ಥಾನ (ಉದ್ಯಾನವನದ ಬಳಿ) ಪಕ್ಕದ ರಸ್ತೆ ಬದಿಗೆ ಗಿಡಗಳನ್ನು ನೆಡಲಾಯಿತು.
ಮಹಾನಗರಪಾಲಿಕೆ ಸದಸ್ಯ ಕುಮಾರ ಗಡಗಿ ಗಿಡನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಇಲ್ಲಿ ವಿವಿಧ ಜಾತಿಯ ಹಲವಾರು ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಉದ್ಯಾನವನ ವಿಭಾಗದ ಸೂಪರವೈಜರ್ ಆಕಾಶ ಜಾಧವ, ಗಣೇಶನಗರ ಬಡಾವಣೆಯ ಮುಖಂಡರಾದ ಡಿ.ಎನ್.ಕಾಮರಡ್ಡಿ, ಚಿದಾನಂದ ಹಡಪದ, ರಾಘವೇಂದ್ರ ಕುಲಕರ್ಣಿ(ಕೇಟರಿಂಗ್), ಆರ್.ಜಿ.ಹಿರೇಗೌಡರ, ಯುವ ಮುಖಂಡ ಪ್ರವೀಣ ಹಳ್ಳಿ, ಸಂತೋಷ ಕಾರಜೋಳ (ಇಬ್ರಾಹಿಂಪುರ), ಪತ್ರಕರ್ತ ದೇವೇಂದ್ರ ಹೆಳವರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

