“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ
2012 ರ ಡಿಸೆಂಬರ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬರ್ಲಾಡ್ ನವರ್ರೇ ಎಂಬಲ್ಲಿ ನಡೆಯುತ್ತಿದ್ದ ಕ್ರಾಸ್ ಕಂಟ್ರಿ ಓಟದಲ್ಲಿ
ಕೀನ್ಯಾದ ನೀಗ್ರೋ ಓಟಗಾರ ಅಬೆಲ್ ಮಥಾಯಿ ಸ್ಪರ್ಧೆಯಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿದ್ದ, ಆತನ ಹಿಂದೆಯೇ ಸ್ಪೇನ್ ದೇಶದ ಇವಾನ್ ಫರ್ನಾಂಡಿಸ್ ಓಡಿ ಬರುತ್ತಿದ್ದನು. ಇನ್ನೇನು ಓಟದ ಹಾದಿಯ ಅಂತಿಮ ರೇಖೆಯನ್ನು ಮುಟ್ಟುವ ಸಮಯದಲ್ಲಿ ಅಬೆಲ್ ಅಂತಿಮ ಗೆರೆಯನ್ನು ತಪ್ಪಾಗಿ ಊಹಿಸಿಕೊಂಡು ಓಟವನ್ನು ಪೂರೈಸಿದ್ದೇನೆ ಎಂದು ನಿಧಾನವಾಗಿ ಓಟವನ್ನು ಇನ್ನೇನು ನಿಲ್ಲಿಸಬೇಕು ಎಂಬಷ್ಟರಲ್ಲಿ ಹಿಂದಿನಿಂದ ಬರುತ್ತಿದ್ದ ಇವಾನ್ ಫರ್ನಾಂಡಿಸ್ ಗೆ ಅಬೆಲ್ಗೆ ಉಂಟಾದ ಗೊಂದಲದ ಅರಿವಾಯಿತು. ಸ್ಪಾನಿಷ್ ಭಾಷೆಯಲ್ಲಿ ಇನ್ನೂ ಮುಂದೆ ಹೋಗು, ಅಂತಿಮ ಗೆರೆ ಮುಂದೆ ಇದೆ ಎಂದು ಜೋರಾಗಿ ಕೂಗಿದನಾದರೂ ಭಾಷೆ ಗೊತ್ತಿಲ್ಲದ ಕೀನ್ಯದ ಅಬೆಲ್ ಮತ್ತಷ್ಟು ಗೊಂದಲಕ್ಕೀಡಾದನು.

ಆಗ ಇವಾನ್ ಅಬೆಲ್ ನನ್ನು ಮುಂದಕ್ಕೆ ತಳ್ಳುತ್ತಾ, ತಾನು ನಿಧಾನವಾಗಿ ಓಡುತ್ತಾ ಅಬೆಲ್ ಅಂತಿಮ ರೇಖೆಯನ್ನು ಮುಟ್ಟಿದ ಮೇಲೆ ತಾನು ಆತನ ಹಿಂದೆ ಓಡಿ ಗುರಿಯನ್ನು ತಲುಪಿದನು.
ಇವಾನ್ ಫರ್ನಾಂಡಿಸ್ ನ ಈ ನಡತೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ಎಲ್ಲರೂ ಚಪ್ಪಾಳೆ ಹೊಡೆದು ಹೊಡೆಯುವ ಮೂಲಕ ಅವರಿಬ್ಬರನ್ನು ಅಭಿನಂದಿಸಿದರು.
ಈ ಕುರಿತು ಪತ್ರಕರ್ತರೊಬ್ಬರು ಇವಾನ್ ಫರ್ನಾಂಡಿಸ್ ರನ್ನು ನೀವು ಪ್ರಥಮ ಸ್ಥಾನ ಗಳಿಸಬಹುದಿತ್ತು ಎಂದು ಹೇಳಿದಾಗ ಇವಾನ್ ನಸುನಗುತ್ತಾ ‘ಅಬೆಲ್ ಈಗಾಗಲೇ ಪಂದ್ಯವನ್ನು ಗೆದ್ದಿದ್ದು ಈ ಜಯಕ್ಕೆ ಆತ ಸಂಪೂರ್ಣ ಅರ್ಹನಾದ ವ್ಯಕ್ತಿ ಎಂದು ಉತ್ತರಿಸಿದ.
ಮತ್ತೆ ಆ ಪತ್ರಕರ್ತ ‘ಪರಿಸ್ಥಿತಿಯ ಲಾಭ ಪಡೆದು ನೀವು ಗೆಲ್ಲಬಹುದಿತ್ತು?’ ಎಂದು ಹೇಳಿದಾಗ
ಇವಾನ್
“ಹಾಗಾದರೆ ನನ್ನ ಆ ರೀತಿಯ ಗೆಲುವಿಗೆ ನೀವು ಏನೆಂದು ಹೆಸರಿಸುತ್ತೀರಿ? ಹಾಗೆ ಗಳಿಸಿದ ಮೆಡಲಿಗೆ ಯಾವ ಗೌರವ ನೀಡಲು ಸಾಧ್ಯ… ಮತ್ತೂ ಹೇಳಬೇಕೆಂದರೆ ಒಬ್ಬರ ಅರಿವಿಲ್ಲದೆ ನಡೆಯುತ್ತಿದ್ದ ತಪ್ಪಿನ ಲಾಭವನ್ನು ಪಡೆದು ನಾನು ಗೆದ್ದಿದ್ದರೆ ನನ್ನ ತಾಯಿಗೆ ಹೇಗೆ ಮುಖ ತೋರಿಸಲು ಸಾಧ್ಯವಾಗುತ್ತಿತ್ತು? ನಾನು ಏನೆಂದು ನನ್ನ ತಾಯಿಗೆ ಸಮಜಾಯಿಷಿ ಕೊಡಬೇಕಿತ್ತು? ಅಸಲಿಗೆ ಅಂತಹ ಗೆಲುವಿನ ಅವಶ್ಯಕತೆ ಇದೆಯೇ?” ಎಂದು ಮರು ಪ್ರಶ್ನಿಸಿದ.
ನೋಡಿದಿರಾ ಸ್ನೇಹಿತರೆ, ಇವಾನ್ ಫರ್ನಾಂಡಿಸ್ ಮನಸ್ಸು ಮಾಡಿದ್ದರೆ ಆತ ಅಬೆಲ್ ಮಥಾಯಿಯ
ಗೊಂದಲದ ಲಾಭ ಪಡೆದು ಅಂತರರಾಷ್ಟ್ರೀಯ ಗುಡ್ಡಗಾಡು ಓಟದಲ್ಲಿ ಪ್ರಶಸ್ತಿ ಗಳಿಸಬಹುದಾಗಿತ್ತು.
ಆದರೆ ಮೌಲ್ಯಗಳನ್ನು ಎತ್ತಿ ಹಿಡಿದ ಆತ ಓಟದಲ್ಲಿ ಎರಡನೆಯ ಸ್ಥಾನ ಪಡೆದರೂ ಜನರ ಮನಸ್ಸಿನಲ್ಲಿ ಅಚ್ಚಳಿಯದ ಅಗ್ರಸ್ಥಾನ ಪಡೆದರು.
ಅವನು ಸೋತು ಗೆದ್ದವನು, ತಾನು ಸೋತು ಕ್ರೀಡಾ ಸ್ಪೂರ್ತಿಯನ್ನು, ಮೌಲ್ಯಗಳನ್ನು ಗೆಲ್ಲಿಸಿದನು .
ಪಾಲಕರು ತಮ್ಮ ಮಕ್ಕಳಲ್ಲಿ ತುಂಬಿದ ಮೌಲ್ಯಗಳು ತಲೆತಲಾಂತರವಾಗಿ ಸಾಗಿ ಇತರರಿಗೆ ಸ್ಪೂರ್ತಿಯಾಗುತ್ತವೆ . ಪಾಲಕರು ತುಂಬಿದ ಮೌಲ್ಯಗಳು ಮಕ್ಕಳ ಜೀವನವನ್ನು ಬೆಳಗುತ್ತವೆ. ಆ ಮೌಲ್ಯಗಳನ್ನು ಉಳಿಸಿ ಬೆಳೆಸುವ ಮೂಲಕ ಮಕ್ಕಳು ತಮ್ಮ ಪಾಲಕರ ಜೀವನವನ್ನು ಸಾರ್ಥಕಗೊಳಿಸುತ್ತಾರೆ. ಅಂತಿಮವಾಗಿ ತನಗೆ ಇಷ್ಟೆಲ್ಲಾ ಮೌಲ್ಯಗಳನ್ನು ಕಲಿಸಿಕೊಟ್ಟ ತಾಯಿ ಬೇರೊಬ್ಬರ ಬಲಹೀನತೆಯ ಲಾಭ ಪಡೆದರೆ ಒಪ್ಪಳು ಎಂಬ ಅರಿವಿನ ಪ್ರಜ್ಞೆ ಮಕ್ಕಳನ್ನು ತಪ್ಪುಮಾಡದಂತೆ ತಡೆಯುತ್ತದೆ.
ಇದೀಗ ಅಲ್ಲಲ್ಲಿ ಸಾಕಷ್ಟು ಸಂಘ-ಸಂಸ್ಥೆಗಳು ಹುಟ್ಟಿಕೊಂಡಿದ್ದು ಸಾಹಿತ್ಯ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಒಳ್ಳೆಯದೇ ಆದರೂ ಅವರು ನೀಡುತ್ತಿರುವ ಕೆಲವು ಪ್ರಶಸ್ತಿಗಳು ಅಪಾತ್ರರಿಗೆ ಸಲ್ಲುತ್ತಿವೆ. ನಿಜವಾದ ಸಾಧಕರು ಇಂತಹ ಪ್ರಶಸ್ತಿಗಳನ್ನು ಪಡೆಯಲು ಹಿಂಜರಿದರೆ, ಮತ್ತೆ ಹಲವರು ಇಂತಹ ಪ್ರಶಸ್ತಿಗಳ ಬೆನ್ನಟ್ಟಿ ಅವುಗಳನ್ನು ಶತಾಯಗತಾಯ ಗಳಿಸುತ್ತಾರೆ.
ಇವಾನ್ ಫರ್ನಾಂಡಿಜ್ ರ ಮೌಲ್ಯಯುತ ಮಾತುಗಳು ಜನರ ಮನಕ್ಕೆ ಕವಿದಿರುವ ಮಂಕನ್ನು ತೊಡೆದು ಹಾಕಿ ಮೌಲ್ಯಯುತ ಬದುಕನ್ನು ತಮ್ಮದಾಗಿಸಿಕೊಳ್ಳುವ ಪ್ರಕ್ರಿಯೆಗೆ ತೊಡಗಿಸಲಿ ಎಂದು ಹಾರೈಸುವ..
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ

