-ಡಾ.ಯಂಕನಗೌಡ ಎಸ್ ಪಾಟೀಲ, ಮಾಲಹಳ್ಳಿ ಉಪನ್ಯಾಸಕರು , ಮೊ:9008370650.
ಸ್ವಾತಂತ್ರ್ಯ ಎಂಬ ಪದವು ಮೂಲ ಲ್ಯಾಟಿನ್ ಭಾಷೆಯ “ಲಿಬರ್” ಎಂಬ ಪದದಿಂದ ಬಂದಿದೆ ಲಿಬರ್ ಎಂದರೆ “ಪ್ರೀ” ಬಂಧನದಿಂದ ಮುಕ್ತಿ ಎಂದರ್ಥ ಆಂಗ್ಲ ಭಾಷೆಯ “ಲಿಬರ್ಟಿ” ಕನ್ನಡ ಅನುವಾದವೇ “ಸ್ವಾತಂತ್ರ್ಯ” ಎಂದು ಕರೆಯುತ್ತಾರೆ. ಈ ಪದವನ್ನು ಎರಡು ರೀತಿಯಲ್ಲಿ ಅರ್ಥೈಸಬಹುದು. ಒಂದು ರಾಷ್ಟ್ರದ ಸ್ವಾತಂತ್ರ್ಯ ಇನ್ನೂಂದು ನಾಗರಿಕ ಸ್ವಾತಂತ್ರ್ಯ, ಒಂದು ರಾಷ್ಟ್ರವು ಪ್ರಪಂಚದ ಇತರ ರಾಷ್ಟ್ರಗಳ ಅಧೀನದಲ್ಲಿರದೆ ಸಂಪೂರ್ಣ ಸ್ವಾಯತ್ತತೆ ಹೊಂದಿರುವುದೇ ರಾಷ್ಟ್ರದ ಸ್ವಾತಂತ್ರ್ಯ ಎನ್ನುತ್ತೇವೆ. ನನ್ನಂತೆಯೇ ಎಲ್ಲರೂ ಎನ್ನುವುದೇ ನಾಗರಿಕ ಸ್ವಾತಂತ್ರ್ಯ ಎಂದು ಕರೆಯಲಾಗುತ್ತದೆ.
ಸ್ವಾತಂತ್ರ್ಯ ಎಂದರೆ ಜವಾಬ್ದಾರಿ, ಸ್ವಾತಂತ್ರ್ಯ ಎಂದರೆ ಪ್ರಗತಿಯ, ಸಂವರ್ಧನೆ, ಸ್ವಾತಂತ್ರ್ಯ ಎಂದರೆ ಧನಾತ್ಮಕ ಚಿಹ್ನೆ, ಅದೊಂದು ತಿಳಿ ಬೆಳಕು, ಚಿಂತನಾ ಲಹರಿ, ಕಾರ್ಯಕ್ಷಮತೆಯ ಪರಿಧಿ, ಸ್ವಾತಂತ್ರ್ಯ ಎಂದರೆ ಸ್ವೇಚ್ಛೆ ಅಲ್ಲ ಅದೊಂದು ನಾಗರಿಕತೆಯ ಕುರುಹು, ಸಭ್ಯತೆಯ ಸಾರ್ವಕಾಲಿಕ ಸತ್ಯ, ಇತಿಮಿತಿಯ ಸಮಾಜದ ದ್ಯೋತಕ, ವ್ಯವಹಾರ ಕೌಶಲವೂ ಹೌದು. ಪರರಿಗೆ ನೋವುಣಿಸದೆ ಸಹಕಾರ ನೀಡುವ ತತ್ವವು ಹೌದು, ಸತ್ವದ ಸರಳ ಸಾಕ್ಷಾತ್ಕಾರ, ವ್ಯಕ್ತಿಗತ ನಡೆ ನುಡಿ ಬದುಕಿನ ಪೋಷಕಧಾತು. ಒಟ್ಟಿನಲ್ಲಿ ಭಾರತದಂತಹ ವಿಶಾಲ ರಾಷ್ಟ್ರದ ಸಾಮೂಹಿಕ ಬದುಕಿನ ಸಾಮರಸ್ಯವೇ ಸ್ವಾತಂತ್ರ್ಯ. ಬ್ರಿಟಿಷರಿಂದ ಅಗಸ್ಟ್ 15,1947 ರಂದು ಸ್ವಾತಂತ್ರ್ಯಗೊಂಡು ಏಳು ಬೀಳುಗಳು ಮಧ್ಯೆ 78 ವರ್ಷಗಳನ್ನು ಪೂರೈಸುತ್ತಿರುವ, ಭಾರತ ದೇಶವು ಹಲವು ಮೈಲಿಗಲ್ಲುಗಳನ್ನು ಕಂಡಿದ್ದು. ಸಾಮಾಜಿಕ, ಆರ್ಥಿಕ, ರಾಜಕೀಯ, ತಂತ್ರಜ್ಞಾನ, ವಿಜ್ಞಾನ, ಮೂಲಸೌಕರ್ಯಗಳು ಹೀಗೆ ಎಲ್ಲಾ ಕ್ಷೇತ್ರಗಳಲ್ಲು ಸಹ ಅನೇಕ ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆಯ ಅಭಿವೃದ್ಧಿಗಳ ಸಂಖ್ಯೆ ಸ್ವಾತಂತ್ರ್ಯ ಭಾರತದಲ್ಲಿ ಹೆಚ್ಚುತ್ತಲೇ ಇರುವುದು ಆಶಾದಾಯಕ ಬೆಳವಣಿಗೆಯಾಗಿದ್ದು. ಸ್ವಾತಂತ್ರ ಭಾರತದ ಹಿಂದಿನ ಆಸೆಯ ನಂತರದ ದುಸ್ಥಿತಿಯನ್ನು ನೋಡಿದಾಗ ಸ್ವಾತಂತ್ರ್ಯ ಎಂಬುದನ್ನು ಸರಿಯಾಗಿ ಅರ್ಥೈಸುವಲ್ಲಿ ನಾವು ಎಡವಿದ್ದದಾರು ಎಲ್ಲಿ ಎಂಬುದು ಯಕ್ಷ ಪ್ರಶ್ನೆ. ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾದ ಸ್ವಾತಂತ್ರ ಸಮಾನತೆ ಭ್ರಾತೃತ್ವ ಹಾಗೂ ನ್ಯಾಯದ ಪರಿಕಲ್ಪನೆ, ಬಡವ, ಬಲ್ಲಿದ, ಮೇಲು, ಕೀಳು, ಸಾಮಾಜಿಕ, ಆರ್ಥಿಕ, ರಾಜಕೀಯ, ತಾರತಮ್ಯ, ನಿವಾರಣೆಗೆ ನಿಜವಾದ ಪ್ರಯತ್ನ ನಡೆಯದೆ, ದೇಶದಲ್ಲಿ ಬಡವ ಬಡವನಾಗಿ, ಶ್ರೀಮಂತ ಶ್ರೀಮಂತನಾಗಿ, ಮದ್ಯಮ ಮಧ್ಯೆದಲ್ಲಿ ನೇತಾಡುತ್ತಿರುವುದು ವಿಪರ್ಯಾಸ.
ಭಾರತದ ಬಿಸ್ಮಾರ್ಕ್ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಪಟೇಲ್ ಹೇಳಿದಂತೆ “ಪ್ರತಿಯೊಬ್ಬ ಪ್ರಜೆಯೂ ದೇಶ ಹಾಗೂ ನೆರೆಹೊರೆಯವರಿದ ತಾನು ಏನು ನಿರೀಕ್ಷಿಸುತ್ತಾನೋ ಅದನ್ನೇ ದೇಶ ಮತ್ತು ನೆರೆಹೊರೆಯವರಿಗಾಗಿ ಮಾಡುವುದು ಸ್ವಾತಂತ್ರ್ಯ. ಆದರೆ ಸ್ವಾತಂತ್ರ್ಯ ಭಾರತದಲ್ಲಿ ಇಂದಿಗೂ ಸಹ ಹಲವು ಕಡೆಗಳಲ್ಲಿ ಅಸಮಾನತೆ, ಅತ್ಯಾಚಾರ, ಕೊಲೆ, ಸುಲಿಗೆ, ಮಹಿಳೆಯರ ಮೇಲಿನ ಎಲ್ಲ ತರಹದ ಕಿರುಕುಳಗಳು, ಆಸಿಡ್ ದಾಳಿ, ಭ್ರಷ್ಟಾಚಾರ, ಜನರಿಂದ ಆಯ್ಕೆಯಾದ ಜನನಾಯಕರು ಎದುರಿಸುತ್ತಿರುವ ಅಪಾಧನೆಗಳು, ಮತ್ತು ಅಪರಾಧಗಳು, ರಾಜಕೀಯ ಪಕ್ಷಗಳ ಕೆಸರೆರಚಾಟ. ಬರಿ ಸ್ವಾರ್ಥ ತುಂಬಿಕೊಂಡ ಹೌದಪ್ಪಗಳ ನಾಯಕತ್ವ, ಅಂಧಾನುಕರಣೆಯ ಯುವ ಜನಾಂಗದಿಂದ ದೇಶದ ಸ್ವಾತಂತ್ರ್ಯ ಸೊರಗುತ್ತಿರುವುದು ಸೋಜಿಗದ ಸಂಗತಿ. ಸ್ವತಂತ್ರ್ಯ ವೆಂದರೆ ಐಷಾರಾಮಿ ಅಲ್ಲ ಅದು ಅಗತ್ಯ, ಶಿಸ್ತು, ವಿಧೇಯತೆ, ಶಾಂತಿ, ಅದಿಲ್ಲದಿದ್ದರೆ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದ್ವೇಷ, ಅಸೂಯೆ, ಪರಸ್ಪರ ನಿಂದನೆಯನ್ನು, ಬಿಟ್ಟು ದೇಶದ ಶಾಂತಿಗೆ ಧಕ್ಕೆ ತರುವ ದುಷ್ಟಶಕ್ತಿಗಳ ಮಟ್ಟ ಹಾಕಲು ದೇಶದ ಸತ್ಪ್ರಜೆಗಳಾದ ನಾವು ಸನ್ನದ್ಧರಾಗಬೇಕಿದೆ. ಜತೆಗೆ ಪ್ರಪಂಚದ ಜ್ಞಾನವನ್ನು ಬಳೆಸಿಕೊಂಡು, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುತ್ತಾ. ಒಬ್ಬ ವ್ಯಕ್ತಿಯು ತನ್ನ ಸ್ವಾತಂತ್ರ್ಯ ಹಕ್ಕಿನಿಂದ ವಂಚಿತನಾಗದೆ ಮತ್ತೊಬ್ಬರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ ಯಾವುದೇ ಕೆಲಸದಲ್ಲಿ ತೊಡಗಬಾರದೆಂಬ ದೃಢ ಸಂಕಲ್ಪ ಪ್ರತಿಯೊಬ್ಬ ಭಾರತೀಯನದ್ದಾಗಿರಬೇಕು. ಅಂದಾಗ ನಾವೆಲ್ಲರೂ ಸೇರಿ ಆಚರಿಸುವ ‘ಭಾರತೀಯತೆಗೆ’ ಒಂದು ಅರ್ಥ ಬರುತ್ತದೆ, ನಮ್ಮೆಲ್ಲರನ್ನೂ ಒಟ್ಟಿಗೆ ಹಿಡಿದಿಟ್ಟಿರುವ ಸಾರ್ವಭೌಮತ್ವ, ಏಕ್ ಭಾರತ, ಶ್ರೇಷ್ಠ ಭಾರತ, ಬಲಿಷ್ಠ ಭಾರತ, ಭವ್ಯ ಭಾರತದ ಐಕ್ಯತೆ, ಮತ್ತು ಸಮಗ್ರತೆಯನ್ನು, ಸಾರುವ ಸಾಮಾನ್ಯ ತತ್ವವೇ ರಾಷ್ಟ್ರದ ಸ್ವಾತಂತ್ರ್ಯೋತ್ಸವ ಎಂಬುದನ್ನು ನಾವ್ಯಾರೂ ಮರೆಯಬಾರದು.
ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯವರ ಮುಂದಾಳತ್ವದಲ್ಲಿ ಅನೇಕ ಮಹನೀಯರ, ಮಹಿಳೆಯರ, ಯುವಕರ, ವೀರಯೋಧರ ತ್ಯಾಗ ಬಲಿದಾನದಿಂದ ಬಂದ ಸ್ವಾತಂತ್ರ್ಯ ಉಳಿಸಿ ಬೆಳೆಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಶಕ್ತಿ ನಮ್ಮದಾಗಿದೆ. ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ಕೊಡುಗೆ ಕೊಡಬಲ್ಲೆ ಎಂಬ ಮನೋಭಾವ ಮೈಗೂಡಿಸಿಕೊಂಡು ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿದು ಐತಿಹಾಸಿಕ ದಿನವಾದ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿಯೊಬ್ಬ ಭಾರತೀಯನ ಆಚರಿಸಿದಾಗ, ಪ್ಲೇಟೋನ ಆದರ್ಶ ರಾಜ್ಯ, ಗಾಂಧೀಜಿಯ ರಾಮರಾಜ್ಯ, ಕನಕನ ರಾಗಿ ರಾಜ್ಯ, ಕಾರ್ಲ್ ಮಾರ್ಕ್ಸ್ ರ ಕಾರ್ಮಿಕ ರಾಜ್ಯ, ಬಸವಣ್ಣನ ಕಲ್ಯಾಣ ರಾಜ್ಯ, ಅಂಬೇಡ್ಕರರ ಪ್ರಜಾರಾಜ್ಯ, ನಂಜುಂಡಸ್ವಾಮಿಯ ರೈತ ರಾಜ್ಯ, ಸರ್ವೇ ಜನ ಸುಖಿನೋ ಭವಂತು ಎಂಬ ಸುಖಿ ರಾಜ್ಯದ ಕನಸು ನನಸಾಗಲು ಸಾಧ್ಯ. ದೇಶ ಸೇವೆಯೇ ಈಶ ಸೇವೆ ಎನ್ನುತ್ತಾ, ಜನನಿ ಜನ್ಮಭೂಮಿ ಸ್ವರ್ಗಾದಪಿ ಗರಿಯೆಸಿ ಎನ್ನುವ ಕವಿ ಸಾಲುಗಳನ್ನು ಇಂದಿನ ಯುವಶಕ್ತಿ ಮೆಲುಕು ಹಾಕುತ್ತಾ, ಸ್ವಾತಂತ್ರ ಭಾರತದ ಉದಾತ್ತ ವಿಚಾರಗಳನ್ನು ನಿತ್ಯ ನಿರಂತರ ಶಾಲಾ ಕಾಲೇಜುಗಳಲ್ಲಿ, ಮನೆ ಮನಗಳಲ್ಲಿ, ಮಂದಿರ, ಮಸೀದಿ, ಚರ್ಚ್ ಗಳಲ್ಲಿ ಮೊಳಗಬೇಕು. ಗುರು ಹಿರಿಯರ, ಬುದ್ಧಿ ಜೀವಿಗಳ ಸೇರಿ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಸನ್ನದ್ಧರಾಗಬೇಕಿದೆ.

– ಡಾ.ಯಂಕನಗೌಡ ಎಸ್ ಪಾಟೀಲ, ಮಾಲಹಳ್ಳಿ ಉಪನ್ಯಾಸಕರು , ಮೊ:9008370650.

