“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಲೇಖನ ಮಾಲಿಕೆ)-ಜಯಶ್ರೀ.ಜೆ. ಅಬ್ಬಿಗೇರಿ,ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ. ಮೊ: ೯೪೪೯೨೩೪೧೪೨
ಎಡವಿ ಬಿದ್ದಾಗ ಮೇಲೆತ್ತುವ ಕೈ, ನೊಂದಾಗ ಸಮಾಧಾನ ಹೇಳುವ ಮನಸ್ಸು, ಸುಖವಿರಲಿ ದುಃಖವಿರಲಿ ಜೊತೆಗೂಡಿ ಸಾಗುವ ಸಂಬಂಧವೇ ಗೆಳೆತನ. ಗೆಳೆತನ ಮಾಡುವುದು ದೊಡ್ಡದಲ್ಲ. ಮಾಡಿದ ಗೆಳೆತನವನ್ನು ಕೊನೆವರೆಗೂ ಉಳಿಸಿಕೊಳ್ಳುವುದು ದೊಡ್ಡದು. ಅರಮನೆ ಕಟ್ಟುವಂತಹ ಸಿರಿತನ ಇಲ್ಲದಿದ್ದರೇನಂತೆ ಕಣ್ಣೀರು ಒರೆಸುವಂತಹ ಗೆಳೆತನ ಇದ್ದರೆ ಸಾಕು. ಎಂಬೆಲ್ಲ ಮಾತುಗಳನ್ನು ಕೇಳಿಯೇ ಇರುತ್ತೇವೆ. ಮಾನವ ಒಬ್ಬಂಟಿಯಾಗಿರಲು ಇಷ್ಟಪಡುವುದು ತುಂಬಾ ಕಡಿಮೆ. ಆತ ಯಾವಾಗಲೂ ಸಂಘಜೀವಿ ಸಮಾಜಜೀವಿ ಸ್ನೇಹಜೀವಿ ಅನ್ನುವುದನ್ನು ವಿವಿಧ ರೀತಿಯಲ್ಲಿ ನಿರೂಪಿಸುತ್ತಲೇ ಬಂದಿದ್ದಾನೆ. ಸಾಂಘಿಕ ಸಾಮಾಜಿಕ ಜೀವನದಲ್ಲಿ ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಅವನು ಇತರರನ್ನು ಅವಲಂಬಿಸಲೇಬೇಕು. ತನ್ನ ಮನೆ ಮಂದಿಯನ್ನೆಲ್ಲ ಕಣ್ಣಲ್ಲಿ ಕಣ್ಣಿಟ್ಟು ಕಾಳಜಿ ವಹಿಸುವ ವಾತ್ಸಲ್ಯಮಯಿ. ಬೇರೆ ಬೇರೆ ಹುದ್ದೆಯ ಮೂಲಕ ಸಮಾಜವನ್ನು ಪೊರೆಯುತ್ತಾನೆ. ಕುಟುಂಬ ವೃತ್ತಿ ಹಾಗೂ ಸಾಮಾಜಿಕ ಜೀವನವನ್ನು ಸರಿದೂಗಿಸಿಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ. ಆದರೆ ಗೆಳೆತನವೆಂಬ ಮಧುರ ತಂಗಾಳಿಯ ತೀಡುವಿಕೆಯಿಂದ ಮನಸ್ಸಿಗೆ ಶಾಂತಿ ಸಮಾಧಾನ ನೆಮ್ಮದಿ ಸಿಗುವುದು ಖಚಿತ. ಗೆಳೆತನವೆಂದರೆ?
ಗೆಳೆತನವೆಂದರೆ ನಾವು ಚಿಕ್ಕಮಕ್ಕಳಿದ್ದಾಗ ಚಿಟ್ಟೆಯ ಬೆನ್ನತ್ತಿ ಅದು ಕೈಗೆ ಸಿಕ್ಕಾಗ ಕುಣಿದು ಕುಪ್ಪಳಿಸಿದ ರೀತಿಯಂತಹದು. ಗೆಳೆತನ ಅತಿ ಶ್ರೇಷ್ಠವಾದ ಸಂಗತಿಯಾಗಿದೆ. ಗೆಳೆತನವನ್ನು ಯಾರು ಬೇಕಾದರೂ ಮಾಡಬಹುದು. ಗೆಳೆತನವನ್ನು ಕಾರ್ಯರೂಪಕ್ಕೆ ತರುವಲ್ಲಿ ಸತ್ವ ಪರೀಕ್ಷೆ ಜರುಗುತ್ತದೆ. ಗೆಳೆತನಕ್ಕೆ ಎಲ್ಲೂ ಅಬ್ಬರ ಆರ್ಭಟವಿರಬಾರದು. ಅದು ಸಹಜವಾಗಿ ಹರಿದು ಹೋಗುವ ಪುಟ್ಟ ತೊರೆಯಂತಿರಬೇಕು. ಅದರ ಜುಳು ಜುಳು ನಾದ ಕೇಳಿ ಮನಸ್ಸು ಉಲ್ಲಾಸಗೊಳ್ಳಬೇಕು. ಹರಿವ ನೀರಿನ ಸೊಂಪಾದ ಸುಳಿಗಾಳಿಯ ಸೊಗಸಾದ ಸಂತಸ ತುಂಬುತಲಿರಬೇಕು. ಗೆಳೆಯರೆಂದರೆ ಹೂವು ಮತ್ತು ಸುವಾಸನೆಯಂತೆ ಒಂದನ್ನು ಬಿಟ್ಟು ಇನ್ನೊಂದು ಇರಲಾರದು. ಬದುಕಿನಲ್ಲಿ ಬೆಲೆಯೇ ಕಟ್ಟಲಾಗದ ಬಂಧವೇ ಗೆಳೆತನ. ಮುತ್ತು, ರತ್ನ, ವಜ್ರ, ವೈಡೂರ್ಯ, ಹಣ, ಆಸ್ತಿ ಇವೆಲ್ಲ ಬದುಕಿನ ನಿಜವಾದ ಸಿರಿತನಗಳಲ್ಲ. ನಿಜವಾದ ಗೆಳೆತನವೇ ಬದುಕಿನ ಸಿರಿತನ.
ಲಾಭಕ್ಕೆ ಅಸ್ತ್ರ
ಇಂದು ಸ್ನೇಹ ಲೋಕ ಹೆಚ್ಚು ಹೆಚ್ಚು ಲಾಭಕ್ಕೆ ಅಸ್ತ್ರವಾಗಿ ಬಳಸಲ್ಪಡುತ್ತಿದೆ. ಹೀಗಾಗಿ ಗೆಳೆತನದ ಕಡೆಗೆ ಗಮನಹರಿಸಲೆಬೆಕು. ಒತ್ತಡದ ಜೀವನಶೈಲಿಯಲ್ಲಿ ಎಲ್ಲದಕ್ಕೂ ವಿಪರೀತವಾದ ಸ್ಪರ್ಧೆ ಅನೇಕ ತೊಡರುಗಳನ್ನು ಎದುರಿಸಿ ಮುಂದೆ ಬರಲು ನಿರಾಶೆಯ ಮಡುವಿನಲ್ಲಿರುವಾಗ ಆಸೆಯ ಹೂವನ್ನು ಮತ್ತೆ ಅರಳಿಸುವ ಹೊಸ ಸಂಚಲನವನ್ನು ಮೂಡಿಸುವ ಒತ್ತಡವನ್ನು ಮರೆಮಾಚಿಸುವ ಗುಣ ರಾರಾಜಿಸಬೇಕು. ಮದುವೆ ಮನೆಯಿಂದ ಹಿಡಿದು ಮಸಣದ ಮನೆಯವರೆಗೂ ಕಣ್ಣೀರು ಒರೆಸುವ ಸೇವಾ ಕೈಂಕರ್ಯಗಳು ಗೆಳೆತನದಿಂದ ಸಾಗುತ್ತಲೇ ಇರಬೇಕು.
ಉತ್ತಮ ಕೇಳುಗರಾಗಿ
ಕಿವಿ ಎಲ್ಲವನ್ನೂ ಕೇಳುತ್ತದೆ. ಒಳ್ಳೆಯದಿರಬಹುದು ಕೆಟ್ಟದ್ದಿರಬಹುದು ಹೊಗಳಿಕೆಯಿರಬಹುದು ತೆಗಳಿಕೆಯಿರಬಹುದು ಒಟ್ಟಿನಲ್ಲಿ ಕೇಳುವ ಕಾಯಕ ಕಿವಿಯದ್ದು. ವೈಯಕ್ತಿಕ ಜೀವನದ ಎಲ್ಲವನ್ನೂ ಮರೆತು ಗಂಟೆಗಟ್ಟಲೇ ಆಲಿಸುವ ಭಾವ ಬೆಳೆಸಿಕೊಳ್ಳುವ ಅನಿವಾರ್ಯತೆ ಇದ್ದೇ ಇದೆ. ಗೆಳೆಯರ ಮಾತುಗಳಿಗೆ ಉತ್ತಮ ಕಿವಿಗಳಾಗಬೇಕು.

ಬೆಂಬಲ ಸೂಚಿಸಿ
ಬದುಕಿನಲ್ಲಿ ದೊಡ್ಡ ಗೆಲುವಿಗಾಗಿ ನಿರಂತರ ಹೋರಾಟ ನಡೆದೇ ಇರುತ್ತದೆ. ಗೆಲುವಿಗೆ ಅಡ್ಡದಾರಿಗಳಿಲ್ಲ. ಅದಕ್ಕೇನಿದ್ದರೂ ಕಾಲು ದಾರಿಯೇ ಶ್ರೇಷ್ಠ. ಯಾವುದೋ ಮಹೋನ್ನತ ಸಾಧನೆಗೆ ಧೈರ್ಯವಾಗಿ ಹೆಜ್ಜೆ ಇಡಲು ಮನಸ್ಸು ಮಾಡುತ್ತೇವೆ. ಅಂತಹ ಸಂದರ್ಭದಲ್ಲಿ ಕೆಲವೊಮ್ಮೆ ಮನೆಯವರ ವಿರೋಧವನ್ನು ಕಟ್ಟಿಕೊಂಡು ಎಲ್ಲವನ್ನೂ ಕಳೆದುಕೊಂಡು ನಿಲ್ಲುತ್ತೇವೆ. ದುಸ್ಥಿತಿಯಲ್ಲಿ ಬೆಂಬಲವಾಗಿ ನಿಲ್ಲುವವರು ಗೆಳೆಯರು. ಅವರ ಅಷ್ಟೊಂದು ಬೆಂಬಲ ಸೂಚಿಸಿದ, ಪರಿಶ್ರಮಕ್ಕೆ ಫಲ ನೀಡುವ ಕಾಲ ಬರುವಂತೆ ಮಾಡಬೇಕು. ಕೀರ್ತಿ ಜನರ ಪ್ರೀತಿ ಗಳಿಸಿರುವ ಗೆಳೆಯನನ್ನು ಮೆಚ್ಚಿ ಒಳ್ಳೆಯ ಮಾತುಗಳನ್ನಾಡಬೇಕು. ನಾನು ನಿನ್ನ ಸಾಧನೆ ಕಣ್ತುಂಬಿಸಿಕೊಂಡು ಆನಂದ ತುಂದಿಲನಾಗಿದ್ದೇನೆಂದು ಹೇಳುವುದರಲ್ಲಿ ತಪ್ಪೇನಿಲ್ಲ.
ತೆರೆದ ಮನಸ್ಸಿನಿಂದಿರಿ
ಜೀವನದಲ್ಲಿ ನಡೆಯುವ ಎಲ್ಲದಕ್ಕೂ, ಸುತ್ತಮುತ್ತಲಿನ ಎಲ್ಲರಿಗೂ ಸಮಜಾಯಿಸಿ ಕೊಡುವುದಾಗಲಿ, ಉತ್ತರ ನೀಡುವುದಾಗಲಿ ಕೊಂಚ ಅಲ್ಲ ತುಂಬಾ ಕಷ್ಟವೇ ಅನ್ನಿ. ಬೆನ್ನ ಹಿಂದೆ ಆಡಿಕೊಳ್ಳುವ, ಮುಖದ ಮುಂದೆ ಹಂಗಿಸುವ, ನಿಂದಿಸುವ ಸ್ವಭಾವವನ್ನು ಬಿಟ್ಟು ತೆರೆದ ಮನಸ್ಸಿನಿಂದ ತೆರೆದ ಪುಸ್ತಕದಂತೆ ಇರುವುದು ಸೂಕ್ತ. ಸಹಕಾರ ಮತ್ತು ಉಪಕಾರವನ್ನು ಸ್ಮರಿಸಿರಿ. ಗುಣಮಟ್ಟದ ಸಮಯ ಕಳೆಯಿರಿ
ಸಂಭ್ರಮಿಸಿ
ಸಣ್ಣ ಗೆಲುವುಗಳನ್ನು ನಿರ್ಲಕ್ಷಿಸುವುವುದು ಸಂಭ್ರಮವನ್ನು ಮುಂದೂಡುವುದು ಸಲ್ಲ. ಮಹತ್ವಾಕಾಂಕ್ಷೆಗಳನ್ನು ಬೆನ್ನು ಹತ್ತಿದವರಿಗೆ ಪುಟ್ಟ ಹೆಜ್ಜೆಗಳ ಸಾಧನೆ ಲೆಕ್ಕಕ್ಕೆ ಬರುವುದಿಲ್ಲ. ಹೀಗಾಗಿ ಸಂಭ್ರಮ ಮನೆ ಮಾಡುವುದಿಲ್ಲ. ಸಂಭ್ರಮಿಸುವ ಬದಲಾಗಿ ನಕಾರಾತ್ಮಕ ಮನೋಭಾವನೆಯನ್ನು ಸಹಜಗುಣಗಳನ್ನಾಗಿ ಮಾಡಿಕೊಳ್ಳುತ್ತಿದ್ದೇವೆ. ಇದರ ಫಲವಾಗಿ ನಿರಂತರ ಅತೃಪ್ತಿ ಮುಂದುವರೆಯುತ್ತದೆ. ಕಾರಣ ಸಣ್ಣಪುಟ್ಟ ಯಶಸ್ಸನ್ನು ಸಂಭ್ರಮಿಸುವ ಗುಣ ಕಲಿಯಬೇಕು.
ಕ್ಷಮಿಸಿ ಮರೆತು ಬಿಡಿ
ನಮ್ಮ ತಪ್ಪಿದ್ದರೆ ಯಾವುದೇ ಮುಜುಗರವಿಲ್ಲದೇ ಕ್ಷಮೆ ಕೇಳಬೇಕು. ಮತ್ತೆ ಆ ತಪ್ಪನ್ನು ಮಾಡದಂತೆ ಎಚ್ಚರವಹಿಸಬೇಕು. ಗೆಳೆಯರು ನಮ್ಮ ಮನಸ್ಸನ್ನು ನೋಯಿಸುವುದರೂ ಸಹ ಯಾವುದೇ ಕೋಪ ಅಸಮಾಧಾನಗಳನ್ನು ಕಹಿ ಭಾವನೆಗಳನ್ನು ಮನಸ್ಸಿನಲ್ಲಿ ಉಳಿಸಿಕೊಳ್ಳದೇ ಮನ್ನಿಸಬೇಕು. ಆಗಿದ್ದನ್ನು ಹೆಚ್ಚು ಜಗ್ಗದೇ ಆಗಿದ್ದು ಆಗಿ ಹೋಯಿತೆಂದು ಕ್ಷಮಿಸಬೇಕು. ಗೆಳೆಯರ ನಡುವೆ ಕ್ಷಮೆ ಇರದೇ ಇದ್ದರೆ ಅರ್ಥವೇ ಇರುವುದಿಲ್ಲ. ಗೆಳೆತನವನ್ನು ಪೋಷಿಸಿ ಮತ್ತು ಸಹನೆಯಿಂದಿರಿ
ಪ್ರಶಂಸೆಯಿರಲಿ
ನಿಮ್ಮನ್ನು ಕಂಡುಕೊಳ್ಳಲು ಉತ್ತಮ ಮಾರ್ಗವೆಂದರೆ, ಇತರರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಳ್ಳುವುದು. ಇದು ಮಹಾತ್ಮ ಗಾಂಧೀಜಿಯವರು ಹೇಳಿದ ಮಾತು. ನಿಜಕ್ಕೂ ಎಷ್ಟು ಅದ್ಭುತ ಮಾತಲ್ಲವೇ? ಎಲ್ಲದರಲ್ಲೂ ಶ್ರಮ ಮಹತ್ತರವಾದದ್ದು. ಸ್ನೇಹತ್ವದ ಕನಸನ್ನು ನನಸಾಗಿಸಿಕೊಳ್ಳಲು ಶ್ರಮಶೀಲ ಮತ್ತು ಪ್ರಾಮಾಣಿಕವಾಗಿರುವುದು ತುಂಬ ಮುಖ್ಯ. ಪ್ರಶಂಸಿಸುವ ಮೂಲಕ ಹೊಸದೊಂದು ಸಾಹಸದತ್ತ ದಿಟ್ಟ ಹೆಜ್ಜೆಯನ್ನಿಡಲು ಪ್ರೇರೇಪಿಸಲು ಸಾಧ್ಯ.
ಪರೋಪಕಾರಿ
ಚಂದ್ರನು ಅಮೃತಮಯವಾದ ಕಿರಣಗಳಿಂದ ಈ ಜಗತ್ತನ್ನು ಯಾಕೆ ಸಂತೋಷಪಡಿಸುತ್ತಾನೆ? ಮೋಡವು ಮಳೆಯನ್ನು ಸುರಿಸಿ ಭೂಮಿಯನ್ನು ಯಾವ ಕಾರಣಕ್ಕಾಗಿ ತೋಯಿಸುತ್ತದೆ? ಸೂರ್ಯನು ಈ ಜಗತ್ತಿಗೆ ಬೆಳಕನ್ನು ಕೊಟ್ಟು ಯಾಕೆ ಆನಂದ ಪಡಿಸುತ್ತಾನೆ? ಇವುಗಳೆಲ್ಲವನ್ನು ಗಮನಿಸಿದಾಗ ಪರೋಪಕಾರ ಮಾಡುವ ವಿಷಯದಲ್ಲಿ ಸಜ್ಜನರು ಯಾವ ಕಾರಣವನ್ನೂ ಬಯಸುವುದಿಲ್ಲ. ಇದು ಅವರ ಹಿರಿಮೆಗೆ ಧ್ಯೋತಕವಾಗಿದೆ. ಎಂದು ಶ್ಲೋಕವೊಂದು ಹೇಳುತ್ತದೆ. ಹಾಗೆಯೇ ಗೆಳೆಯರು ಕೂಡ ಒಂದು ತರಹದ ನಿಸ್ವಾರ್ಥದ ಪರೋಪಕಾರಿಗಳೇ. ನಮ್ಮೊಳಗೆ ನಾವು ಕಂಡುಕೊಳ್ಳಲಾಗದ ಸಂತೋಷವನ್ನು ಕಾಣುವಂತೆ ಮಾಡುವ ಗೆಳೆಯರು ಪ್ರಮುಖರಾಗುತ್ತಾರೆ.
ಆಸ್ತಿ ದೋಸ್ತಿ
ಬದುಕಿನಲ್ಲಿ ಅಭದ್ರತೆ ಮತ್ತು ಅಸ್ಥಿರತೆ ಕಾಡದೇ ಇರದು. ಸಣ್ಣ ಪುಟ್ಟ ಸಂಗತಿಗಳು ದೊಡ್ಡ ರಂಪ ಆಗುತ್ತವೆ. ಆಗ ಮನಸ್ಸಿನ ಸಮಾಧಾನಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ. ಯಾವ ಕೊರತೆಯೂ ಇಲ್ಲದ, ಎಲ್ಲ ವಿಧದ ಸುಖವಿರುವ ಜೀವನದ ಕಲ್ಪನೆಯು ಕನಸಿನ ಲೋಕದಲ್ಲಿ ತೇಲಿಸುವ ಗುಣ ಗೆಳೆತನ ಹೊಂದಿದೆ. ದುರ್ಗಮ ಹಾದಿಯಲ್ಲಿ ನಡೆಯುವಾಗ ಉನ್ನತ ಹಂತಕ್ಕೆ ತಂದು ನಿಲ್ಲಿಸುವ ಹೊಸ ಪ್ರೇರಕ ಶಕ್ತಿ ಗೆಳೆತನಕ್ಕಿದೆ. ನಿರ್ಮಲ ಸ್ನೇಹ ಸುಲಭವಾಗಿ ಸಿಗುವುದಿಲ್ಲ. ಅದನ್ನು ನಾವು ಪ್ರೀತಿಯಿಂದ ಗಳಿಸಬೇಕು. ಬದಲಾದ ಕಾಲದಲ್ಲಿ ಬಾಳಿಗೆ ಬೆಳಕಾಗುವ ಗೆಳೆತನವನ್ನು ವ್ಯಾಪಾರೀಕರಿಸುವುದು ಬೇಡ. ಬದುಕಿನ ನಿಜವಾದ ಸಿರಿತನವಾದ ಗೆಳೆತನದ ಒಡೆಯರಾಗೋಣ. ಆಸ್ತಿ ಇಲ್ಲದೇ ಬಾಳಬಹುದು ಆದರೆ ದೋಸ್ತಿ ಇಲ್ಲದೇ ಬಾಳಲಾಗದು ಅಲ್ಲವೇ?
-ಜಯಶ್ರೀ.ಜೆ. ಅಬ್ಬಿಗೇರಿ,
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ. ಮೊ: ೯೪೪೯೨೩೪೧೪೨

