“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್
ಸಾವು ಎಂದರೇನು?
ಎಂತಹ ಪ್ರಶ್ನೆಇದು! ಎಲ್ಲರಿಗೂ ಗೊತ್ತು, ಸಾವು ಎಂದರೇನು ಅಂತ, ಈಕೆಗೆ ಗೊತ್ತಿಲ್ಲವೇ ಎಂದು ನೀವು ಅಂದುಕೊಂಡರೆ ಅದು ನಿಮ್ಮ ತಪ್ಪಲ್ಲ.
ನಿಜ, ವೈಜ್ಞಾನಿಕ ಪರಿಭಾಷೆಯಲ್ಲಿ ಭೌತಿಕ ದೇಹ ತನ್ನೆಲ್ಲ ದೈಹಿಕ ಚಟುವಟಿಕೆಗಳನ್ನು,ಕ್ರಿಯೆಗಳನ್ನು ಶಾಶ್ವತವಾಗಿ ನಿಲ್ಲಿಸಿ ಅಂತಿಮವಾಗಿ ಉಸಿರು ದೇಹದಿಂದ ಹೊರ ಚೆಲ್ಲಿ ಜೀವರಹಿತವಾದಾಗ ಅದನ್ನು ಸಾವು ಎಂದು ಕರೆಯುತ್ತಾರೆ. ತಾಯಿಯ ಗರ್ಭದಿಂದ ಜನ್ಮ ತಾಳುವ ಮೂಲಕ ನಾವು ಹುಟ್ಟಿ ಜೀವನವನ್ನು ಆರಂಭಿಸಿದರೆ ಸಾವು ಎಂಬ ನಿಷ್ಟುರಸತ್ಯ ನಮ್ಮ ಅಂತಿಮ ದಿನದಂದು ಅನಾವರಣವಾಗುತ್ತದೆ. ಈ ಹುಟ್ಟು ಸಾವುಗಳ ನಡುವಿನ ದಿನಗಳನ್ನು ನಾವು ಬದುಕು ಎಂದು ಕರೆಯುತ್ತೇವೆ.
ಆದರೆ ನಾವು ಬದುಕಿದ್ದಾಗಲೇ ಸಾಯುವ ಸ್ಥಿತಿಯನ್ನು ಏನೆನ್ನಬಹುದು? ಸತ್ತಂತ ಬದುಕು! ಇಲ್ಲವೇ ಬದುಕಿಯೂ ಸತ್ತಂತೆ! ಎಂದಲ್ಲವೇ?
ನಿಜ ಅಂತಹ ಬದುಕನ್ನು ನಮ್ಮ ಸಮಾಜದ ಹಲವಾರು ಜನರು ‘ಇದು ಜೀವ, ಇದುವೇ ಜೀವನ’ ಎಂಬಂತೆ ಸಾಗಿಸಿ ಬಿಡುತ್ತಾರೆ. ಹಾಗಾದರೆ ಬದುಕಿಯೂ ಸತ್ತಂತೆ ಎಂದರೆ ಏನು?

ಮನುಷ್ಯ ಸ್ವಭಾವತಃ ಸಂಘ ಜೀವಿ… ಜೊತೆಗೆ ಆಧ್ಯಾತ್ಮಿಕ ಜೀವಿಯೂ ಹೌದು. ದೇವರ ಅಸ್ತಿತ್ವವನ್ನು ಹುಡುಕುತ್ತಾ ಗುಡ್ಡ, ಬೆಟ್ಟ, ನದಿ, ಕಣಿವೆಗಳಲ್ಲಿ ನಡೆದಾಡಿದವನು, ನಿಸರ್ಗದ ಸವಿಯ ಅನುಭವಿಸಿದವನು. ಅಂತಹ ವ್ಯಕ್ತಿ ಒಂದೇ ವಿಷಯಕ್ಕೆ ಅಂಟಿಕೊಂಡು ನಿಂತಲ್ಲಿಯೇ ನಿಂತರೆ ಸಣ್ಣ ಮಡುವಾಗುತ್ತಾನೆ, ಕೆಟ್ಟ ಯೋಚನೆಗಳೆಂಬ ಕ್ರಿಮಿ ಕೀಟಗಳ ವಾಸಸ್ಥಾನವಾಗುತ್ತಾನೆ. ಕಲ್ಮಶವಾಗುತ್ತಾನೆ ಕೊನೆಗೆ ಬಳಕೆಗೆ ಯೋಗ್ಯವೆನಿಸದ ಕೊಳಚೆ ನೀರಾಗುತ್ತಾನೆ. ಮನುಷ್ಯ ನಿಂತ ನೀರಾಗದೆ ಹರಿಯುವ ನೀರಾಗಬೇಕು. ಆಗಾಗ ನಿಸರ್ಗದ ಸವಿ ಸವಿಯಲು, ಈ ಸೃಷ್ಟಿಯ ಅಗಾಧತೆಯನ್ನು ಅರಿಯಲು, ಬದುಕಿನ ಸವಿ ಗಾನದ ಅರ್ಥ ಕಂಡುಕೊಳ್ಳಲು, ಲೋಕದ ರೀತಿ ನೀತಿಗಳನ್ನು ತಿಳಿಯಲು, ಜ್ಞಾನ ಸಂಪಾದಿಸಲು, ವಿದ್ಯೆ ಕಲಿಯಲು, ಜನರ ಕಷ್ಟ ಸುಖ ನೋವು ನಲಿವುಗಳಿಗೆ ಸ್ಪಂದಿಸಲು ನೀವು ಪಯಣಿಸಲೇ ಬೇಕು. ಇಲ್ಲದೆ ಹೋದರೆ ನೀವು ಸತ್ತಂತಹ ಬದುಕನ್ನು ಜೀವಿಸುತ್ತಿದ್ದೀರಿ ಎಂದರ್ಥ.
ನಿಮ್ಮ ಮನದ ದನಿಗೆ ಕಿವಿಯಾಗದಿದ್ದರೆ, ನಿಮ್ಮ ಸಂತೋಷಕ್ಕೆ ಧ್ವನಿಯಾಗದಿದ್ದರೆ, ಬೇರೆಯವರ ಸಂತಸಕ್ಕಾಗಿ ನಿಮ್ಮ ಆತ್ಮಾಭಿಮಾನವನ್ನು ಕೊಂದು ಕೊಂಡರೆ, ನಿಮ್ಮ ಸುಖ ಸಂತೋಷಗಳಿಗೆ ನೀವೇ ಹೆಗಲಾಗದೆ ಬೇರೆಯವರಲ್ಲಿ ನಿಮ್ಮ ಸುಖ ಸಂತೋಷ ನಿರೀಕ್ಷಿಸುವವರಾದರೆ,ಬೇರೆಯವರು ನಿಮ್ಮ ಸಹಾಯಕ್ಕೆ ಬಂದಾಗಲೂ ಅದನ್ನು ತಿರಸ್ಕರಿಸುವವರು ನೀವಾದರೆ …. ನೀವು ಮಾನಸಿಕವಾಗಿ ಇದ್ದೂ ಸತ್ತಂತೆ ಬದುಕುತ್ತಿರುವಿರಿ ಎಂದರ್ಥ.
ದುಷ್ಟಚಟಗಳಿಗೆ ನೀವು ದಾಸರಾದರೆ, ಅವುಗಳಿಂದ ಮುಕ್ತಿ ಪಡೆಯಲು ಪ್ರಯತ್ನಿಸದಿದ್ದರೆ, ನಿಮ್ಮ ದೈನಂದಿನ ಸತ್ವರಹಿತ ಬದುಕಿನಲ್ಲಿ ಬದಲಾವಣೆ ತರದಿದ್ದರೆ, ಬದುಕಿನ ಬಣ್ಣದ ಕನಸುಗಳಿಗೆ ನನಸು ಮಾಡಲು ಪ್ರಯತ್ನಿಸದಿದ್ದರೆ, ವಿವಿಧ ರಂಗಿನ ಬಟ್ಟೆ ತೊಡದಿದ್ದರೆ, ಅರಿಯದ ಜನರೊಂದಿಗೆ ಮಾತಿಗೆ ತೊಡಗದಿದ್ದರೆ, ಬಾವಿಯ ಕಪ್ಪೆಯಂತೆ ನೀವು ಬದುಕಿದರೆ…. ನೀವು ಮಾನಸಿಕವಾಗಿ ಇದ್ದೂ ಸತ್ತಂತಹ ಬದುಕನ್ನು ಬದುಕುತ್ತಿರುವಿರಿ ಎಂದರ್ಥ.

ಬದುಕಿನ ವಿವಿಧ ಭಾವಗಳನ್ನು ಅನುಭವಿಸುವ, ಅದರ ಏರಿಳಿತಗಳನ್ನು ಸವಿಯುವ, ಖುಷಿಗೆ ಕಣ್ಣರಳಿಸುವ, ದುಃಖಕ್ಕೆ ನರಳುವ, ಸೋಲನ್ನು ಅನುಭವಿಸಿದರೂ ಶರಣಾಗತರಾಗದೆ ಗೆಲುವಿಗೆ ಹಪಹಪಿಸುವ ಅಂತಿಮವಾಗಿ ಗೆದ್ದಾಗ ಹೃದಯ ಬಡಿತದ ಏರಿಕೆಯಲ್ಲಿ ಸಂತಸ ಸಂಭ್ರಮದಿಂದ ಭೋರ್ಗರೆಯುತ್ತ ಮರುಕ್ಷಣದಲ್ಲೇ ಅಷ್ಟೇ ವಿನಯದಿಂದ ಧನ್ಯತೆಯಿಂದ ಜಯವನ್ನು ಸ್ವೀಕರಿಸುವ ಬದುಕನ್ನು ನೀವು ಅನುಭವಿಸದಿದ್ದರೆ….. ನೀವು ಮಾನಸಿಕವಾಗಿ ಇದ್ದೂ ಸತ್ತಂತೆ ಬದುಕುತ್ತಿದ್ದೀರಿ ಎಂದು ಅರ್ಥ.
ಜೀವನದಲ್ಲಿ ಕಷ್ಟ ನೋವು ನಿರಾಶೆಗಳ ಸುಳಿಗೆ ಸಿಲುಕಿದಾಗ ಅದರಿಂದ ಹೊರಬರುವ ಅವಕಾಶ ಇದ್ದಾಗಲೂ ಕೂಡ ಸೋಲೊಪ್ಪಿಕೊಂಡರೆ, ನೀವು ಮಾಡುತ್ತಿರುವ ತೃಪ್ತಿಯಿಲ್ಲದ ಕೆಲಸದಿಂದ ನೀವು ಹೊರಬರದಿದ್ದರೆ, ಛಲದಿಂದ ಎದುರಿಸದೆ ಸೋಲನ್ನು ಒಪ್ಪಿಕೊಂಡರೆ, ನೀವು ಕಂಡ ಕನಸುಗಳ ನನಸಾಗಿಸಲು ಅವುಗಳ ಬೆಂಬತ್ತದಿದ್ದರೆ, ನಿಮ್ಮನ್ನು ನೀವು ಅರಿಯುವ ಪ್ರಯತ್ನ ಮಾಡದಿದ್ದರೆ, ತಿಳಿದವರು ಹೇಳುವ ಬುದ್ಧಿವಾದಕ್ಕೆ ಕಿವಿಗೊಡದಿದ್ದರೆ…. ನೀವು ದೈಹಿಕವಾಗಿ ಬದುಕಿಯೂ ಮಾನಸಿಕವಾಗಿ ಸಾಯುತ್ತಿರುವಿರಿ ಎಂದರ್ಥ.
ತುಂಬಾ ದೀರ್ಘವಾಯಿತಲ್ಲವೇ ಸ್ನೇಹಿತರೆ!
ತ್ಯಾಗ ಬದುಕಿನ ಬಹುದೊಡ್ಡ ಮೌಲ್ಯ ನಿಜ, ಆದರೆ ನಮ್ಮ ಅಸ್ತಿತ್ವವನ್ನು ಪಣಕ್ಕಿಟ್ಟು, ನಮ್ಮ
ಆತ್ಮಗೌರವವನ್ನು ಕೊಂದುಕೊಂಡು ಬದುಕಿದರೆ ಏನು ಪ್ರಯೋಜನ? ಅದು ಬದುಕಿದ್ದೂ ಸತ್ತಂತೆ ಅಲ್ಲವೇ?
ಚಿಕ್ಕವಳಿದ್ದಾಗ ನನಗೆ ತುಂಬಾ ಇಷ್ಟವಾದ, ನನ್ನೆಲ್ಲಾ ನೋಟ್ ಪುಸ್ತಕಗಳ ಒಳಪುಟದ ಮೇಲ್ಭಾಗದಲ್ಲಿ ನಾನು ಬರೆದುಕೊಳ್ಳುತ್ತಿದ್ದ ಒಂದು ನುಡಿ ಇದು.
” cowards die many times before their death, the valliant never taste death but once”.
ಇದರರ್ಥ ಹೇಡಿಗಳು ಬದುಕಿನಲ್ಲಿ ಹಲವಾರು ಬಾರಿ ಸಾಯುತ್ತಾರೆ… ಆದರೆ ಶೂರರಾದವರು ಕೇವಲ ಒಂದು ಬಾರಿ ಸಾವಿನ ರುಚಿ ನೋಡುತ್ತಾರೆ ಎಂದು.
ಬದುಕು ಒಡ್ಡುವ ಪ್ರತಿಯೊಂದು ಸಣ್ಣ ಸವಾಲಿಗೂ ಸಾಯುವಂತಹ ಮಾತನ್ನು ಹೇಳುತ್ತಾ ತಮ್ಮ ಹೇಡಿ ತನವನ್ನು ವ್ಯಕ್ತಪಡಿಸುತ್ತಾರೆ.ಇದು ಭೌತಿಕವಾದ ಸಾವಲ್ಲ ನಿಜ ಆದರೆ ಮಾನಸಿಕವಾಗಿ ಸತ್ತು ಸತ್ತು ಬದುಕುತ್ತಾರೆ. ಇದು ಸಲ್ಲದು.
ಬದುಕಿನ ಚೌಕಟ್ಟಿನಲ್ಲಿ ಸುಂದರವಾದ ಚಿತ್ರ ನಮ್ಮದಾಗಬೇಕು ಎಂಬ ಆಶಯದೊಂದಿಗೆ..
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್

