ಕಾಲ್ನಡಿಗೆಯಲ್ಲಿ ಬಂದ ಲಕ್ಷಾಂತರ ಭಕ್ತರು | ವಿಠ್ಠಲ-ರುಕ್ಮಿಣಿ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ
– ಸಿದ್ರಾಮ ಮಾಳಿ
ವಿಜಯಪುರ: ಮಹಾರಾಷ್ಟ್ರದಲ್ಲಿರುವ ಪವಿತ್ರ ತೀರ್ಥಕ್ಷೇತ್ರ ಪಂಢರಪುರದಲ್ಲಿ ಬುಧವಾರದಂದು ಆಷಾಢ ಏಕಾದಶಿಯ ಸಡಗರ ಮನೆ ಮಾಡಿತ್ತು. ವಿಠ್ಠಲನ ಅವತಾರದಲ್ಲಿ ನೆಲೆಸಿರುವ ವಿಷ್ಣುವಿನ ದರ್ಶನ ಪಡೆದು ಪಾದ ಸ್ಪರ್ಶಿಸಲು ದೇಶದ ವಿವಿಧ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿದ್ದರು.
ಸಂಪ್ರದಾಯದಂತೆ ಮಹಾರಾಷ್ಟ್ರ ಸರ್ಕಾರದ ಪ್ರಥಮ ಪೂಜೆಯನ್ನು ಮುಖ್ಯಮಂತ್ರಿ ಏಕನಾಥ ಶಿಂಧೆ ದಂಪತಿ ನೆರವೇರಿಸಿದರು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ರಾಜ್ಯಗಳ ಲಕ್ಷಾಂತರ ಭಕ್ತರು ಪಂಢರಪುರಕ್ಕೆ ಆಗಮಿಸಿ, ಇಲ್ಲಿನ ಚಂದ್ರಭಾಗ ನದಿಯಲ್ಲಿ ಸ್ನಾನ ಮಾಡಿ ವಿಠಲನ ದರ್ಶನ ಪಡೆದರು. ತುಳಸಿ ಮಾಲೆ ಧರಿಸಿದ ಸಂತರು, ತಲೆಯ ಮೇಲೆ ತುಳಸಿಕಟ್ಟೆ ಹೊತ್ತು, ಹೆಚ್ಚೆ ಹಾಕುತ್ತಾ ಕೈ ಕೈ ಹಿಡಿದುಕೊಂಡು ಕುಣಿದು ಸಂಭ್ರಮಿಸಿ ಪಂಢರಿನಾಥನಿಗೆ ಜೈಕಾರ ಹಾಕಿದರು.
ಪಂಢರಪುರದ ಪ್ರಮುಖ ಬೀದಿಗಳಲ್ಲಿ ಸಂಜೆ ವಿಠಲ-ರುಕ್ಮಿಣಿ ಪಲ್ಲಕ್ಕಿ ಉತ್ಸವ ನಡೆಯಿತು. ಏಕಾದಶಿ ಅಂಗವಾಗಿ ವಾರಕಾರಿ ಸಪ್ತಾಹ ಜರುಗಿತು. ಅಭಂಗಗಳನ್ನು ಹಾಡುತ್ತಾ ಕುಣಿಯುತ್ತ ಭಜನೆ, ನಾಮ ಸಂಕೀರ್ತನೆಗಳಲ್ಲಿ ಭಕ್ತರು ಮೈಮರೆತರು. ಲಕ್ಷೋಪಲಕ್ಷ ಭಕ್ತರು ಪಾದಯಾತ್ರೆ, ವಾಹನಗಳ ಮೂಲಕ ವಿಠಲನ ಸನ್ನಿಧಿಗೆ ಆಗಮಿಸಿದ್ದ ಹಿನ್ನಲೆಯಲ್ಲಿ ಪಂಢರಪುರದಲ್ಲಿ ಸಂಚಾರ ದಟ್ಟಣೆ ಅಧಿಕವಾಗಿತ್ತು. ದೇವಾಸ್ಥಾನದಲ್ಲಿ ವಿಠಲನ ದರ್ಶನಕ್ಕೆ ಭಕ್ತರು ಮುಗಿಬಿದ್ದ ಹಿನ್ನಲೆಯಲ್ಲಿ ನೂಕುನುಗ್ಗಲು ಉಂಟಾಯಿತು. ಭಕ್ತರನ್ನು ನಿಯಂತ್ರಿಸಲು ಪೊಲೀಸ್ರು ಹಾಗೂ ಸ್ವಯಂ ಸೇವಕರು ಹರಸಾಹಸ ಪಟ್ಟರು.
ಯಾತ್ರಿಕರಿಗೆ ಉಚಿತ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಚಂದ್ರಭಾಗ ನದಿ ತೀರದಲ್ಲಿ ಭಕ್ತರು ಪುಣ್ಯಸ್ನಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರು ಸಿಹಿ-ತಿನಿಸು, ವಿಠಲ-ರುಕ್ಮಿಣಿಯರ ಮೂರ್ತಿ, ಪೂಜಾ ಸಾಮಾಗ್ರಿ, ಮಕ್ಕಳ ಆಟಿಕೆಗಳನ್ನು ಖರೀದಿಸಿದರು. ವ್ಯಾಪಾರ, ವಹಿವಾಟು ಜೋರಾಗಿತ್ತು.
ಹಿನ್ನಲೆ: ಕರ್ನಾಟಕದ ನೆರೆಯ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿರುವ ಪವಿತ್ರ ಕ್ಷೇತ್ರದಲ್ಲಿ ವಿಠ್ಠಲನ ಪಾದ ದರ್ಶನಕ್ಕೆ ಮಹಾರಾಷ್ಟ್ರದಲ್ಲಿಯೇ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಪವಿತ್ರ ಸ್ಥಳವಾಗಿರುವ ಐತಿಹಾಸಿಕ ದೇಗುಲಕ್ಕೆ ಸುಮಾರು ೮೦೦ ವರ್ಷಗಳಿಂದಲೂ ಭಕ್ತರು ಕಾಲ್ನಡಿಗೆಯಲ್ಲಿ ತೀರ್ಥಯಾತ್ರೆ ಕೈಗೊಳ್ಳುತ್ತಾ ಬಂದಿದ್ದಾರೆ. ಹೀಗಾಗಿ ಆಷಾಢ ಏಕಾದಶಿ ಪಂಢರಪುರದಲ್ಲಿ ಒಂದು ದೊಡ್ಡ ಜಾತ್ರೆ.
ಸೋಲಾಪುರ ಜಿಲ್ಲೆಯಲ್ಲಿರುವ ಚಂದ್ರಭಾಗ ನದಿ ದಡದಲ್ಲಿರುವ ಪಂಢರಪುರದಲ್ಲಿರುವ ವಿಠ್ಠಲ ದೇವಾಲಯವು ವೈಷ್ಣವರ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿ ವಿಷ್ಣುವನ್ನು ವಿಠ್ಠಲ ಅಥವಾ ಪಾಂಡುರಂಗ ರೂಪದಲ್ಲಿ ಆರಾಧಿಸಲಾಗುತ್ತದೆ. ಇದು ಕೃಷ್ಣ ಅಥವಾ ವಿಷ್ಣುವಿನ ಪುನರ್ಜನ್ಮ ಎಂದು ನಂಬಲಾಗಿದೆ.
ಪಂಢರಾಪುರದಲ್ಲಿ ಭಗವಂತನಾದ ವಿಷ್ಣು; ವಿಠ್ಠಲ ಅಥವಾ ವಿಠೋಬಾ ಅವತಾರದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ. ಭಾರತದಲ್ಲಿ ವೈಷ್ಣವರ ಪ್ರಮುಖ ಆರಾಧಾನಾ ಕ್ಷೇತ್ರವಿದು. ಇಲ್ಲಿನ ವಿಶೇಷವೆಂದರೆ, ಭಕ್ತರು ವಿಠ್ಠಲನ ಪಾದ ಸ್ಪರ್ಶಿಸಿ ನಮಸ್ಕರಿಸಬಹುದಾಗಿದೆ.


