ಬಸವನಬಾಗೇವಾಡಿ: ಪಟ್ಟಣದ ವಿಜಯಪುರ ಮುಖ್ಯರಸ್ತೆಯಲ್ಲಿರುವ ಹಳೆ ನ್ಯಾಯಾಲಯ ಎದುರಿನ ಪಾದಚಾರಿ(ಪುಟ್ಪಾತ) ರಸ್ತೆಯ ಮೇಲಿರುವ ಬೀದಿ ಅಂಗಡಿಗಳನ್ನು ಪುರಸಭೆಯಿಂದ ತೆರವು ಗೊಳಿಸುವ ಕಾರ್ಯಾಚರಣೆ ಮಂಗಳವಾರ ಬೆಳ್ಳಂಬೆಳಗ್ಗೆ ಆರಂಭವಾಯಿತು. ನಂತರ ಜನರ ವಿರೋಧದಿಂದಾಗಿ ಅಧಿಕಾರಿಗಳು ಶುಕ್ರವಾರ ಕಾರ್ಯಾಚರಣೆ ಮುಂದೂಡಿದ ಘಟನೆ ಜರುಗಿತು.
ಹಳೆಯ ನ್ಯಾಯಾಲಯದ ಎದುರುಗಡೆ ಇದ್ದ ಎರಡು ಬೀದಿ ಬದಿಯ ಅಂಗಡಿಗಳನ್ನು ಜೆಸಿಬಿಯಿಂದ ತೆರವುಗೊಳಿಸಲಾಯಿತು. ನಂತರ ತಾಲೂಕು ಪಂಚಾಯಿತಿ ಎದುರಿಗೆ ಇದ್ದ ಎರಡು ಅಂಗಡಿಗಳನ್ನು ಪುರಸಭೆ ಜೆಸಿಬಿಯಿಂದ ತೆರವುಗೊಳಿಸಲಾಯಿತು.
ಬೀದಿ ಬದಿಯ ಅಂಗಡಿಗಳನ್ನು ತೆರವು ಗೊಳಿಸುವ ಕಾರ್ಯಾಚರಣೆ ಸುದ್ದಿ ತಿಳಿಯುತ್ತಿದ್ದಂತೆ ಬೀದಿ ಬದಿಯ ವ್ಯಾಪಾರಸ್ಥರು ಸೇರಿದಂತೆ ಸಾರ್ವಜನಿಕರು ಕಾರ್ಯಾಚರಣೆ ನಡೆಯುವ ಸ್ಥಳಕ್ಕೆ ಬಂದರು. ಸ್ಥಳಕ್ಕೆ ಆಗಮಿಸಿದ್ದ ಪುರಸಭೆ ಹಿರಿಯ ಸದಸ್ಯ ನೀಲಪ್ಪ ನಾಯಕ ಅವರು ಪುರಸಭೆ ಮುಖ್ಯಾಧಿಕಾರಿಗಳಿಗೆ ಯಾಕೆ ಬೀದಿ ಬದಿಯ ಅಂಗಡಿಗಳನ್ನು ತೆರವು ಮಾಡುತ್ತಿದ್ದೀರಿ. ನಿಮ್ಮ ಹತ್ತಿರ ಯಾವ ಆದೇಶವಿದೆ. ಒಮ್ಮೆಲೆ ಈ ರೀತಿಯಾಗಿ ಅಂಗಡಿಗಳನ್ನು ತೆರವು ಗೊಳಿಸಬಾರದು ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಿದರು. ಇವರೊಂದಿಗೆ ಕೆಲ ಸಾರ್ವಜನಿಕರು ಜೊತೆಯಾದರು. ಕೆಲ ಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಯಿತು. ಪುರಸಭೆ ಅಧಿಕಾರಿಗಳಿಗೆ ಏನು ಮಾಡಬೇಕೆಂಬುವದು ತೋಚದಾಯಿತು.
ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರು ನಮ್ಮ ಮೇಲಾಧಿಕಾರಿಗಳು ಬೀದಿ ಬದಿಯ ಅಂಗಡಿಗಳನ್ನು ತೆರವು ಗೊಳಿಸಲು ಆದೇಶ ಮಾಡಿದ್ದಾರೆ. ಈ ಕುರಿತು ಈಗಾಗಲೇ ಬೀದಿ ಬದಿ ಅಂಗಡಿಗಳ ವ್ಯಾಪಾರಸ್ಥರಿಗೆ ಮಾಹಿತಿ ನೀಡಲಾಗಿದೆ. ನಾವು ಕಾನೂನು ಪಾಲಿಸುತ್ತಿದ್ದೇವೆ ಎಂದು ಹೇಳಿದರೂ ನೀಲಪ್ಪ ನಾಯಕ ಅವರು ನೀವು ಕಾನೂನು ಪ್ರಕಾರ ಕಾರ್ಯಾಚರಣೆ ಮಾಡಬೇಕೆಂದು ಹೇಳಿದರು.
ಪುರಸಭೆ ಹಿರಿಯ ಸದಸ್ಯ ನೀಲಪ್ಪ ನಾಯಕ ಅವರು ಮಾತನಾಡಿ, ಪಟ್ಟಣದ ಬೀದಿ ಬದಿಯ ಅಂಗಡಿಗಳಿಂದ ಸಾವಿರಕ್ಕೂ ಹೆಚ್ಚು ಜನರು ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ಪುರಸಭೆ ಅಧಿಕಾರಿಗಳು ಈ ಅಂಗಡಿಗಳನ್ನು ತೆರವು ಗೊಳಿಸಿದರೆ ಸಾವಿರಾರು ಜನರ ಜೀವನ ಬೀದಿಗೆ ಬರುತ್ತದೆ. ಪುರಸಭೆ ಅಧಿಕಾರಿಗಳು ಬೀದಿ ಬದಿಯ ಅಂಗಡಿಗಳ ವ್ಯಾಪಾರಸ್ಥರಿಗೆ ರಸ್ತೆಗೆ ಬಾರದಂತೆ ತಮ್ಮ ವ್ಯಾಪಾರ ವಹಿವಾಟು ಮಾಡಿಕೊಳ್ಳಲು ಅವಕಾಶ ನೀಡಬೇಕು. ಬೀದಿ ಬದಿಯ ಅಂಗಡಿಗಳ ತೆರವು ಕಾರ್ಯಾಚರಣೆ ಕೈಬಿಟ್ಟರೆ ಸಾವಿರ ಬಡಜನರು ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದೇ ಹೋದರೆ ಬೀದಿ ಬದಿಯ ವ್ಯಾಪಾರಸ್ಥರದೊಂದಿಗೆ ಪ್ರತಿಭಟನೆ ಮುಂದಾಗಬೇಕಾಗುತ್ತದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಮಾತನಾಡಿ, ಪಟ್ಟಣದ ಪಾದಚಾರಿ ರಸ್ತೆ ಮೇಲಿರುವ ಅನಧೀಕೃತ ಬೀದಿ ಬದಿಯ ಅಂಗಡಿಗಳನ್ನು ತೆರವು ಗೊಳಿಸುವಂತೆ ನಮ್ಮ ಮೇಲಾಧಿಕಾರಿಗಳಿಂದ ಆದೇಶವಾಗಿದೆ. ಈ ನಿಟ್ಟಿನಲ್ಲಿ ಇಂದು ನಮ್ಮ ಸಿಬ್ಬಂದಿಗಳೊಂದಿಗೆ ತೆರವು ಕಾರ್ಯಾಚರಣೆ ಮಾಡಲು ಮುಂದಾಗಿದೆ. ಕೆಲ ವ್ಯಾಪಾರಸ್ಥರು ನಮಗೆ ತೆರವು ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಅನಧೀಕೃತ ಅಂಗಡಿಗಳಿಗೆ ನಾವು ಮಾಹಿತಿ ನೀಡುವ ಅಗತ್ಯವಿಲ್ಲ. ಇಲ್ಲಿ ಸೇರಿದ ಪುರಸಭೆ ಹಿರಿಯ ಸದಸ್ಯ ನೀಲಪ್ಪ ನಾಯಕ ಅವರು ಹೇಳಿದ ಮಾತಿಗೆ ಗೌರವ ಕೊಟ್ಟು ಹಾಗೂ ಮೊಹರಂ ಹಬ್ಬ ಇರುವದರಿಂದ ಬೀದಿ ಬದಿಯ ವ್ಯಾಪಾರಸ್ಥರಿಗೆ ತಮ್ಮ ಅನಧೀಕೃತ ಅಂಗಡಿಗಳನ್ನು ತೆರವುಗೊಳಿಸಿಕೊಳ್ಳಲು ಎರಡು ದಿನಗಳ ಕಾಲ ಅವಕಾಶ ನೀಡಲಾಗುವದು. ನಾವು ಶುಕ್ರವಾರ ತೆರವು ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದು ಹೇಳಿದರು.
ಬೀದಿ ಬದಿಯಲ್ಲಿ ಅಂಗಡಿ ಹಾಕಿಕೊಂಡಿರುವ ವಯೋವೃದ್ಧೆ ಬೋರವ್ವ ಮಣ್ಣೂರ ಅವರು, “ನಾನು ಇಲ್ಲದೇ ಇರುವಾಗ ನನ್ನ ಅಂಗಡಿಯನ್ನು ತೆಗೆದು ಬೇರೆಡೆ ಇಟ್ಟಿದ್ದಾರೆ. ನಾನು ಇದೇ ಅಂಗಡಿಯಿಂದ ಜೀವನ ಮಾಡುತ್ತಿದ್ದೇನೆ. ಇದು ಹೋದರೆ ನನ್ನ ಜೀವನ ನಡೆಸುವುದು ದುಸ್ತರವಾಗುತ್ತದೆ” ಎಂದು ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಪುರಸಭೆ ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ, ಎಎಸ್ಐ ಸಾರವಾಡ, ಪುರಸಭೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಬೀದಿ ಬದಿಯ ವ್ಯಾಪಾರಸ್ಥರಾದ ರಮೇಶ ಮಸಬಿನಾಳ, ವಿರೇಶ ಹಂಗರಗಿ, ಆರ್.ಜಿ.ಮಡಿವಾಳರ, ಸಂತೋಷ ನಂದ್ಯಾಳ, ದಯಾನಂದ ರಾಠೋಡ, ಸುನೀಲ ನಾಯಕ, ಸಿದ್ದಯ್ಯ ಒಡೆಯರ, ರಾಜು ಮುಳವಾಡ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

