ಸೇತುವೆಯ ಕಂಬಗಳಲ್ಲಿ ಇಳಿಯುತ್ತಿರುವ ನೀರು | ಸೇತುವೆ ಮೇಲೆ ಗುಂಡಿಗಳು | ಕಂಬಗಳು ಶಿಥಿಲಗೊಳ್ಳುವ ಸಂಭವ

– ಗುರು ಆರ್.ಹಿರೇಮಠ (ದೇವಣಗಾಂವ)
ಆಲಮೇಲ: ವಿಜಯಪುರ, ಕಲ್ಬುರ್ಗಿ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿರುವ ದೇವಣಗಾಂವ ಸೇತುವೆ ಇದೀಗ ಕುಸಿದು ಬೀಳುವ ಭೀತಿ ಎದುರಾಗಿದೆ.
ಕಳೆದ ಹಲವು ವರ್ಷಗಳಿಂದ ಲೋಕೋಪಯೋಗಿ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿರುವ ಈ ಸೇತುವೆ ರಿಪೇರಿಯಾಗದೆ ಮೇಲ್ಬಾಗದಲ್ಲಿ ಮಳೆಯ ನೀರು ನಿಂತು ಸೇತುವೆಯ ಕಂಬಗಳಲ್ಲಿ ನೀರು ಇಳಿಯುತ್ತಿದೆ. ಆದ್ದರಿಂದ ಕಂಬಗಳು ಶಿಥಿಲವಾಗುವ ಹಂತ ತಲುಪಿದೆ ಇದು ಹೀಗೆ ಮುಂದುವರೆದರೆ ಕಲ್ಲಿನ ಕಂಬಗಳಲ್ಲಿ ಒಂದೇ ಕಲ್ಲು ಸರಿದು ಹೋದರೆ ಸಾಕು ಶಿಥಿಲವಾಗುವ ಹಂತ ಹೆಚ್ಚಾಗುತ್ತದೆ.
ಸದ್ಯ ಸೇತುವೆ ತುಂಬ ಹೊಂಡಗಳು ನಿರ್ಮಾಣವಾಗಿ ಸೇತುವೆ ಮೇಲ್ಭಾಗದ ತುಂಬಾ ನೀರು ನಿಂತು ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ ಮೊಳಕಾಲು ಉದ್ಧದ ಗುಂಡಿಗಳು ತುಂಬಿಕೊಂಡಿವೆ.
ಸೇತುವೆಯ 2 ಭಾಗದ ತಡೆಗೋಡೆಗಳು ಶಿಥಿಲಾವಸ್ತೆಯಲ್ಲಿದ್ದು ಅವುಗಳು ಕೂಡ ಅಪಾಯಕ್ಕೆ ಆಹ್ವಾನ ನೀಡುತ್ತಿವೆ
1960 ರಲ್ಲಿ ಪ್ರಾರಂಭಗೊಂಡು 1963 ರಲ್ಲಿ ಉದ್ಘಾಟನೆಗೊಂಡಿರುವ ಈ ಸೇತುವೆ ಜಿಲ್ಲೆಯ ಅತಿ ಹಳೆಯ ಸೇತುವೆ ಎಂಬ ಹೆಗ್ಗಳಿಕೆ ಪಡೆದಿದೆ. ಸಂಪೂರ್ಣ ಕಲ್ಲಿನಿಂದ ನಿರ್ಮಾಣಗೊಂಡಿರುವ ಕಂಬಗಳು ಇಂದಿಗೂ ಕೂಡ ಗಟ್ಟಿ ಮುಟ್ಟಾಗಿರುವುದು ಕಟ್ಟಡದ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ಅವುಗಳು ಶಿಥಿಲಗೊಳ್ಳುವ ಮೊದಲೇ ಅಧಿಕಾರಿಗಳು ಎಚ್ಚರಗೊಂಡರೆ ಐತಿಹಾಸಿಕ ಸೇತುವೆಯು ಇನ್ನಷ್ಟು ತನ್ನ ಸೇವೆಯನ್ನು ದೇಶಕ್ಕೆ ನೀಡಲಿ ಎಂಬ ಜನರ ಬಯಕೆ ಈಡೇರುವುದು.
2003-04 ರಲ್ಲಿ ಸೇತುವೆಯ ಕಂಬಗಳು ಇನ್ನೂ ಸುಸ್ಥತಿಯಲ್ಲಿ ಇದ್ದ ಕಾರಣ ಅಂದಿನ ಸರ್ಕಾರ ಮೇಲ್ಭಾಗದ ರಿಪೇರಿಯನ್ನು ಕೈಗೊಂಡಿತ್ತು ಆದರೆ ದುರಾದೃಷ್ಟವಶಾತ್ ರಿಪೇರಿಗೊಂಡಿರುವ ಮೇಲ್ಭಾಗವೇ ದುರಸ್ತಿಗೆ ಬಂದಿದೆ. ಆದರೆ ಕೆಳಗಿನ ಕಂಬಗಳು ಇಂದಿಗೂ ಗಟ್ಟಿಮುಟ್ಟಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೇತುವೆಯ ಗುಣಮಟ್ಟವನ್ನು ಪರೀಕ್ಷಿಸಿ, ರಿಪೇರಿ ಮಾಡಿದ್ದೆ ಆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ದಿನಗಳ ಕಾಲ ಸೇತುವೆಯ ಉಪಯೋಗ ಜನರಿಗೆ ಸಿಗುವುದು.
ಈ ಸೇತುವೆಯು ಕಳೆದ ಏಳು ದಶಕಗಳಿಂದ ಕಲಬುರ್ಗಿ ವಿಜಯಪುರ ಅಲ್ಲದೆ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ, ತುಳಜಾಪುರ, ಲಾತೂರ್, ಆಂಧ್ರಪ್ರದೇಶ, ತೆಲಂಗಾಣದ ಹೈದರಾಬಾದ್ ಸೇರಿದಂತೆ ಎಲ್ಲ ಪ್ರಮುಖ ನಗರಗಳಿಗೆ ಸಂಪರ್ಕ ಸೇತುವೆ ಕೊಂಡೆಯಾಗಿ ಕಾರ್ಯವನ್ನು ನಿರ್ವಹಿಸುತ್ತಾ ಬಂದಿದೆ ಸದ್ಯದ ಸ್ಥಿತಿ ನೋಡಿದರೆ ಸೇತುವೆಯ ಮೇಲ್ಭಾಗ ಬಹಳ ಹಡೆಗಟ್ಟು ಹೋಗಿದೆ ಆದ್ದರಿಂದ ಕೂಡಲೇ ರಿಪೇರಿ ಮಾಡಿದರೆ ಇನ್ನಷ್ಟು ದಿನಗಳ ಕಾಲ ಈ ಸೇತುವೆ ಜನರ ಪ್ರಯಾಣಕ್ಕೆ ಅನುಕೂಲವಾಗುವುದು.

