ಚುನಾವಣೆ ಟಾಸ್ಕ್ನಲ್ಲಿ ಸೋತ ಸಚಿವರನ್ನು ಸಂಪುಟದಿಂದ ಕೈಬಿಡಲು ಮಾಲಿಕಯ್ಯ ಗುತ್ತೇದಾರ ಆಗ್ರಹ
ಅಫಜಲಪುರ: ಕಲಬುರಗಿ ಲೋಕಸಭೆಯಿಂದ ಮತದಾರರು ನನ್ನನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳಿಸಿದ್ದಾರೆ, ನಾನು ಕಲಬುರಗಿ ಧ್ವನಿಯಾಗಿ ಸಂಸತ್ತಿನಲ್ಲಿ ಕೆಲಸ ಮಾಡುತ್ತೇನೆ ಎಂದು ಸಂಸದ ರಾಧಾಕೃಷ್ಣ ದೊಡ್ಮನಿ ಹೇಳಿದರು.
ಪಟ್ಟಣದ ಸರಸಂಬಾ ಕಲ್ಯಾಣ ಮಂಟಪದಲ್ಲಿ ನಡೆದ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ, ಮತದಾರರು ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಎಲ್ಲರ ಕಣ್ಣು ಕಲಬುರಗಿ ಮೇಲಿತ್ತು. ಆದರೆ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ಪಕ್ಷದ ಹಿರಿಯರು, ಶಾಸಕರು, ಸಚಿವರು, ಮುಖಂಡರು, ಕಾರ್ಯಕರ್ತರು, ಕ್ಷೇತ್ರದ ಮತದಾರರ ಅಭಿಪ್ರಾಯ, ಸಲಹೆ ಪಡೆದು ಅಭಿವೃದ್ದಿ ಕೆಲಸಗಳನ್ನು ಮಾಡುತ್ತೇನೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡುತ್ತಾ, ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧೆ ಮಾಡಿದ್ದ ಸಂದರ್ಭದಲ್ಲಿ ಅಫಜಲಪುರ ಮತಕ್ಷೇತ್ರದಿಂದ ೩೭ ಸಾವಿರ ಮತಗಳು ಬಿಜೆಪಿಗೆ ಲೀಡ್ ಬಂದಿದ್ದರಿಂದ ಖರ್ಗೆ ಅವರು ಸೋಲಬೇಕಾಯಿತು. ಆದರೆ ಈ ಬಾರಿ ಲೀಡ್ ಕಡಿಮೆಯಾಗಿ ಕಾಂಗ್ರೆಸ್ ಪಕ್ಷಕ್ಕೆ ಮತಗಳು ಬಂದಿದ್ದರಿಂದ ರಾಧಾಕೃಷ್ಣ ದೊಡ್ಮನಿ ಅವರಿಗೆ ಗೆಲುವಾಗಿದೆ ಎಂದರು.
ಶಾಸಕ ಎಂ.ವೈ ಪಾಟೀಲ್ ಮಾತನಾಡುತ್ತಾ ಈ ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ಶ್ರಮ ವಹಿಸಿ ಮತದಾರರಿಗೆ ಮನವಿ ಮಾಡಿದರೂ ಕೂಡ ನಮ್ಮ ನಿರೀಕ್ಷೆಯಷ್ಟು ಮತಗಳು ಬರಲಿಲ್ಲ. ಹೀಗಾಗಿ ಸಂಸದರು ಮತದಾರರಿಗೆ ಅಭಿನಂದನೆಗಳು ಸಲ್ಲಿಸಲು ಬಂದಿದ್ದಾರೆ. ಆದರೆ ಅಭಿನಂದನೆ ಸ್ವಿಕರಿಸಲು ನಮಗೆ ಮನಸ್ಸಾಗುತ್ತಿಲ್ಲ. ಇಷ್ಟಾದರೂ ಕೂಡ ಸಂಸದರು ಅಭೀನಂದನೆ ಸಲ್ಲಿಸಲು ಬಂದಿದ್ದು ಅವರ ಹೃದಯ ವೈಶಾಲ್ಯತೆ ತೋರಿಸುತ್ತದೆ ಎಂದರು.
ಇನ್ನೂ ತಾಲೂಕಿನ ಅಭಿವೃದ್ದಿಯ ದೃಷ್ಟಿಯಿಂದ ಕರ್ಜಗಿಯಿಂದ ಅಫಜಲಪುರದ ವರೆಗಿನ ೨೨ ಕಿ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ಸಾರಿಗೆ ಸಚಿವ ಗಡ್ಕರಿ ಅವರಿಗೆ ಹೇಳಿ ಮಂಜೂರು ಮಾಡಿಸಿಕೊಟ್ಟರೆ ಅನುಕೂಲವಾಗಲಿದೆ ಎಂದರು.
ಮುಖ್ಯಮಂತ್ರಿಗಳ ಸಲಹೆಗಾರ ಶಾಸಕ ಬಿ.ಆರ್ ಪಾಟೀಲ್ ಮಾತನಾಡುತ್ತಾ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಅಭಿವೃದ್ದಿ ಕೆಲಸಗಳಿಂದೇ ಕಲ್ಯಾಣ ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲುವಂತಾಗಿದೆ. ನೂತನ ಸಂಸದರು ಹಿಂದುಳಿದ ಈ ಭಾಗದ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.
ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಮಾತನಾಡುತ್ತಾ, ರಾಧಾಕೃಷ್ಣ ದೊಡ್ಮನಿ ಅವರು ಯಾವತ್ತು ಅಧಿಕಾರಕ್ಕೆ ಬಯಸಿ ಜನರ ಮಧ್ಯದಲ್ಲಿದ್ದವರಲ್ಲ. ಈಗ ಅವರು ಸಂಸದರಾಗಿದ್ದಾರೆ. ಆದರೂ ಅವರು ಎಂದಿನಂತೆ ಸರಳತೆಯಿಂದಲೇ ಇದ್ದಾರೆ. ಮೊದಲಿನಂತೆ ಜನಸೇವೆ ಮಾಡುವ ಮೂಲಕ ತಾವು ನಿಜವಾದ ಜನಸೇವಕ ಎನ್ನುವುದುನ್ನು ಸಾಬೀತು ಮಾಡುತ್ತಿದ್ದಾರೆ ಎಂದರು.
ಮಾಜಿ ಸಚಿವ ರೇವುನಾಯಕ ಬೆಳಮಗಿ, ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿದರು.
ಈ ಸಂದರ್ಭದಲ್ಲಿ ತಿಪ್ಪಣ್ಣಪ್ಪ ಕಮಕನೂರ, ಪಪ್ಪು ಪಟೇಲ, ಮಕ್ಬೂಲ ಪಟೇಲ, ಜೆ.ಎಂ ಕೊರಬು, ಮಶಾಕ ಪಟೇಲ, ಲಚ್ಚಪ್ಪ ಜಮಾದಾರ, ಮತೀನ ಪಟೇಲ, ಸಾಯಬಣ್ಣ ನೀಲಪ್ಪಗೋಳ, ಚಂದು ಕರ್ಜಗಿ, ಸಿದ್ದಯ್ಯ ಹಿರೇಮಠ, ರಾಜುಗೌಡ ಅವರಳ್ಳಿ, ಸಿದ್ದಾರ್ಥ ಬಸರಿಗಿಡ, ಸಿದ್ದು ಸಿರಸಗಿ, ಅರವಿಂದ ಗುತ್ತೇದಾರ, ರೇಣುಕಾ ಸಿಂಗೆ, ಸಂಧ್ಯಾ ಪವಾರ, ಜ್ಯೋತಿ ಮರಗೋಳ, ಹನುಮಂತ್ರಾವ ದೊಡ್ಮನಿ, ಪ್ರಕಾಶ ಜಮಾದಾರ, ಸಿದ್ದು ದಿಕ್ಸಂಗಿ, ಗೌತಮ ಸಕ್ಕರಗಿ, ಚಂದು ದೇಸಾಯಿ, ಶರಣು ಕುಂಬಾರ, ಶಿವಾನಂದ ಗಾಡಿ, ರಮೇಶ ಪೂಜಾರಿ ಸೇರಿದಂತೆ ಅನೇಕರು ಇದ್ದರು.
” ಕಲಬುರಗಿ ಮತದಾರರು ಅಭಿವೃದ್ದಿ ಪರವಾದ ವ್ಯಕ್ತಿಗೆ ಮತ ನೀಡಿ ಗೆಲ್ಲಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗಕ್ಕೆ ಮಾಡಿದ ಉಪಕಾರವನ್ನು ಮತದಾರರು ತಮ್ಮ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡುವ ಮೂಲಕ ಉಪಕಾರ ತೀರಿಸಿದ್ದಾರೆ. ಈ ಲೋಕಸಭೆಯಲ್ಲಿ ಕೆಲವು ಲೋಪದೋಷಗಳಿಂದಾಗಿ ನಿಚ್ಚಳವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ತಪ್ಪಿದಂತಾಗಿದೆ. ಆದರೂ ಈ ಬಾರಿಯ ಕೇಂದ್ರ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಆರು ತಿಂಗಳಲ್ಲಿ ಸರ್ಕಾರ ಪತನವಾಗಲಿದ್ದು ಇಂಡಿಯಾ ಮೈತ್ರಿಕೂಟದ ಸರ್ಕಾರ ರಚನೆ ಆಗಲಿದೆ.”
– ಸಿದ್ದರಾಮ ಮೇತ್ರಿ
ಮಾಜಿ ಗೃಹ ಸಚಿವರು, ಮಹಾರಾಷ್ಟ್ರ
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಾನು ಮತ್ತು ಎಂ.ವೈ ಪಾಟೀಲ್ ಅವರು ಸಾಕಷ್ಟು ಶ್ರಮ ವಹಿಸಿ ಮತದಾರರಿಗೆ ತಲುಪಿದ್ದೇವೆ. ನಮ್ಮ ಚುನಾವಣೆಗಿಂತಲೂ ಹೆಚ್ಚು ಶ್ರಮ ಹಾಕಿದ್ದೇವೆ. ಆದರೂ ನಮ್ಮ ನಿರೀಕ್ಷೆಗೆ ತಕ್ಕ ಮತಗಳು ಬರಲಿಲ್ಲ. ಸಂಸದರು ಅಭಿನಂದನೆ ಸಲ್ಲಿಸಲು ಬಂದಿದ್ದಾರೆ. ಆದರೆ ನಮ್ಮಿಬ್ಬರಿಗೆ ಇದು ಬಹಳ ನೋವು ತಂದಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಸೇವೆ ಗುರುತಿಸಿಯಾದರೂ ಜನ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕಾಗಿತ್ತು. ಎಂದ ಅವರು ರಾಜ್ಯದಲ್ಲಿ ಇನ್ನೂ ಸಾಕಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬೇಕಾಗಿತ್ತು. ಆದರೆ ಸಚಿವರಿಗೆ ಕೊಟ್ಟ ಟಾಸ್ಕ್ನಲ್ಲಿ ಸಚಿವರು ವಿಫಲವಾಗಿದ್ದಾರೆ. ಅಂತಹ ಸಚಿವರನ್ನು ಸಂಪುಟದಿಂದ ಕೈಬಿಡಬೇಕು. ಮತ್ತು ಕೊನೆಯ ಚುನಾವಣಾ ರಾಜಕೀಯ ಮಾಡುತ್ತಿರುವ ಶಾಸಕ ಎಂ.ವೈ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಿ ಗೌರವಿಸುವ ಕೆಲಸ ಸರ್ಕಾರ ಮಾಡಬೇಕು.”
– ಮಾಲೀಕಯ್ಯ ಗುತ್ತೇದಾರ
ಮಾಜಿ ಸಚಿವರು

