ಸಿಂದಗಿಯಲ್ಲಿ ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿಷಾದ
ಸಿಂದಗಿ: ೨ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜ ನಡೆಸಿರುವ ಹೋರಾಟಕ್ಕೆ ದೀರ್ಘ ಇತಿಹಾಸವಿದೆ. ಇಷ್ಟೊಂದು ಸುಧೀರ್ಘ ಹೋರಾಟದ ನಂತರವೂ ನ್ಯಾಯ ದೊರಕದೆ ಇದ್ದದ್ದು ವಿಪರ್ಯಾಸ ಎಂದು ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಶಾಸಕ ಅಶೋಕ ಮನಗೂಳಿ ಅವರ ಮನೆಗೆ ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಸಮಾಜ ಬಂಧುಗಳು ತೆರಳಿ ಮುಂಗಾರು ಅಧಿವೇಶನದಲ್ಲಿ ೨ಎ ಮೀಸಲಾತಿಗಾಗಿ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕೆಂದು ಆಗ್ರಹ ಪತ್ರವನ್ನು ಸಲ್ಲಿಸಿ ಮಾತನಾಡಿದ ಅವರು, ಕಳೆದ ಬಾರಿಯ ಆಡಳಿತಾರೂಢ ಬಿಜೆಪಿ ಸರಕಾರದ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ. ಪ್ರಸ್ತುತ ಸರ್ಕಾರವೂ ನಿರ್ಲಕ್ಷ ಧೋರಣೆ ತಾಳುತ್ತಿದೆ. ಪಂಚಮಸಾಲಿಗಳ ಹೋರಾಟಕ್ಕೆ ಯಶಸ್ಸು ಸಿಗದೇ ಇರಲು ಕಾಣದ ಕೈಗಳು ಕೆಲಸ ಮಾಡುತ್ತಿವೆ. ಇದ್ಯಾವುದಕ್ಕೂ ಜಗ್ಗದೆ, ಎದೆಗುಂದದೆ ಯಾರೇ ಮುಖ್ಯಮಂತ್ರಿಯಾಗಿರಲಿ ಯಾವುದೇ ಸರ್ಕಾರ ಬರಲಿ ಜಯ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಸಮಾಜದ ಕೃಪಾಕಟಾಕ್ಷದಿಂದ ಚುನಾಯಿತ ಶಾಸಕರಲ್ಲಿ ಬೆರಳೆಣಿಕೆಯಷ್ಟು ಶಾಸಕರಿಂದ ಮಾತ್ರ ಸಹಕಾರ ದೊರೆತಿದೆ. ಅವರುಗಳಲ್ಲಿ ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಕೂಡ ಒಬ್ಬರು. ಮೀಸಲಾತಿ ಹೋರಾಟದ ಪ್ರಥಮ ಸಭೆ ಸಿಂದಗಿಯಲ್ಲಿ ನಡೆದಾಗ ಮಾಜಿ ಸಚಿವ ದಿ.ಎಂ.ಸಿ ಮನಗೂಳಿ ಅವರು ಸಹಕಾರ ನೀಡಿ ಹೋರಾಟಕ್ಕೆ ಬಲ ತುಂಬಿದ್ದರು. ಅವರ ಸುಪುತ್ರ ಶಾಸಕ ಅಶೋಕ ಮನಗೂಳಿ ಅವರು ಪಕ್ಷಾತೀತವಾಗಿ ಗಟ್ಟಿತನದಿಂದ ಸದನದಲ್ಲಿ ೨ಎ ಮೀಸಲಾತಿಯ ಹಕ್ಕು ಪ್ರತಿಪಾದಿಸಬೇಕು. ನಮ್ಮ ಸಮಾಜದಲ್ಲಿ ನಾನೊಬ್ಬನೇ ಬದುಕಬೇಕೆನ್ನುವ ಶಾಸಕರು ಯಾರು ಇಲ್ಲ. ಕೃಷಿ ಕ್ಷೇತ್ರ ಸೊರಗಿರುವ ಕಾರಣ ಶಿಕ್ಷಣದಿಂದಾದರೂ ನಮ್ಮ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬರಲಿ ಎನ್ನುವ ಸದುದ್ದೇಶ ಒಂದೇ ಈ ಹೋರಾಟಕ್ಕೆ ಮೂಲ ಕಾರಣವಾಗಿದೆ. ಲಿಂಗಾಯತ ಸಮಾಜದ ಇತರೆ ಪಂಗಡದ ನಾಯಕರು ತಮ್ಮ ತಮ್ಮ ಪಂಗಡಗಳಿಗೆ ಮೀಸಲಾತಿ ದೊರಕಿಸಿಕೊಟ್ಟು ಸಮಾಜದ ಋಣ ತೀರಿಸುವಲ್ಲಿ ಯಶಸ್ವಿಯಾದರೂ ಸಮಗ್ರ ಲಿಂಗಾಯತರಿಗೆ ಮೀಸಲಾತಿ ಅನ್ವಯವಾಗದೆ ಮೋಸವಾಗಿದೆ. ಅನ್ನ ನೀಡುವ ಸಮಾಜಕ್ಕೆ ಮೀಸಲಾತಿ ಸಿಗದೇ ಕುಳಿತು ತಿನ್ನುವ ಸಮಾಜಗಳಿಗೆ ಮೀಸಲಾತಿ ಸಿಕ್ಕಂತಾಗಿದೆ. ಕಾರಣ ಸಮಾಜದ ಋಣ ತೀರಿಸಲು ಎಲ್ಲ ಲಿಂಗಾಯತ ಒಳ ಪಂಗಡಗಳ ಮೀಸಲಾತಿಗಾಗಿ ಹಾಗೂ ಕ್ಷೇತ್ರದ ವಂಚಿತ ಸಮುದಾಯಗಳ ಪರವಾಗಿ ಶಾಸಕರು ತಮ್ಮ ಹಕ್ಕನ್ನು ಪ್ರತಿಪಾದಿಸಬೇಕೆಂದು ಆಗ್ರಹಿಸಿದರು.
ಒಂದು ವೇಳೆ ನಿಮ್ಮೆಲ್ಲರ ಒತ್ತಡಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಸಮಾಜದ ಹೋರಾಟಕ್ಕೆ ಶ್ರೀಗಳೊಂದಿಗೆ ನಿರಂತರ ಹೋರಾಟಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಆಗ್ರಹ ಪತ್ರ ಸ್ವೀಕರಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ನಾನು ಸಿಂದಗಿ ಕ್ಷೇತ್ರದ ಜನಪ್ರತಿನಿಧಿಯಾಗುವಲ್ಲಿ ಪಂಚಮಸಾಲಿ ಸಮುದಾಯದ ಪಾತ್ರ ಬಹುದೊಡ್ಡದು. ಅದಕ್ಕಾಗಿ ಮುಂಬರುವ ಅಧಿವೇಶನದಲ್ಲಿ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಗಟ್ಟಿಯಾಗಿ ಧ್ವನಿ ಎತ್ತುತ್ತೇನೆ. ಹಗಲಿರುಳೆನ್ನದೆ ರಾಜ್ಯಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪಂಚಮಸಾಲಿಗಳ ಏಳಿಗೆಗೆ ಶ್ರಮಿಸುತ್ತಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಭಾಜಪ ಮುಖಂಡ ಅಶೋಕ ಅಲ್ಲಾಪುರ, ನೌಕರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ, ಮಾತನಾಡಿದರು.
ಕಾರ್ಯದರ್ಶಿ ಆನಂದ ಶಾಬಾದಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಮುಖಂಡರಾದ ಶಿವಪ್ಪಗೌಡ ಬಿರಾದಾರ, ಸೋಮನಗೌಡ ಬಿರಾದರ, ಡಾ.ಅರವಿಂದ ಮನಗೂಳಿ, ರಮೇಶ ದೇಸಾಯಿ, ಡಾ.ಚನ್ನವೀರ(ಮುತ್ತು) ಮನಗೂಳಿ, ಚಂದ್ರಶೇಖರ ನಾಗರಬೆಟ್ಟ, ಶರಣಬಸವ ಕಲಶೆಟ್ಟಿ, ಶ್ರೀಶೈಲ ಬುಕ್ಕಾಣಿ, ವಕೀಲರಾದ ಎಸ್.ಬಿ.ಪಾಟೀಲ, ಶ್ರೀಶೈಲ ಮಳಜಿ, ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಗುರಣ್ಣಗೌಡ ಹುಮ್ನಾಬಾದ್, ರವಿ ದೇಸಾಯಿ ಸಂಗನಗೌಡ ಪಾಟೀಲ, ಶ್ರೀಶೈಲ ಯಳಮೇಲಿ, ಶಿವರಾಜ್ ಪಾಟೀಲ, ಗುರು ಆಕಳವಾಡಿ, ಪ್ರತಿಭಾ ಚಳ್ಳಗಿ, ಶಂಕರ ಬೋರಗಿ, ಬಸವರಾಜ ಗುಗ್ಗರಿ ಸೇರಿದಂತೆ ಸಮಾಜದ ಗುರು ಹಿರಿಯರು, ಮುಖಂಡರು ಉಪಸ್ಥಿತರಿದ್ದರು.

