ಹೊಂಡ ಬಿದ್ದು ಕಂಟಕವಾಗಿ ಕಾಡುತ್ತಿದೆ ದೇವಣಗಾಂವ-ಸೊನ್ನ ಸೇತುವೆ | ಮಣೂರ ಭುಂಯಾರ ಸೇತುವೆಗೆ ತಡೆಗೋಡೆ ಇಲ್ಲದ್ದಕ್ಕೆ ಆತಂಕ
– ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ಸುಗಮವಾದ ರಸ್ತೆ ಸಂಪರ್ಕವಿರಬೇಕು ಅದೇ ರೀತಿಯಲ್ಲಿ ಒಂದು ಹಳ್ಳ, ಹೊಳೆ, ನದಿಗಳನ್ನು ದಾಟಿ ಇನ್ನೊಂದು ಊರಿಗೆ ಹೋಗಲು ಸೇತುವೆಗಳು ಬೇಕಾಗುತ್ತದೆ. ಆದರೆ ಮೂರು ತಾಲೂಕುಗಳಿಗೆ ಸಂಬಂಧ ಪಟ್ಟ ಎರಡು ಸೇತುವೆಗಳು ಸಮಸ್ಯೆಯಾಗಿ ಕಾಡುತ್ತಿದ್ದು ತ್ರಿವಳಿ ಶಾಸಕರು ಸೇತುವೆಗಳ ಸಮಸ್ಯೆಗಳನ್ನು ಸರಿಪಡಿಸುವರೇ ಎನ್ನುವುದು ವಾಹನ ಸವಾರರು, ಸಾರ್ವಜನಿಕರ ಪ್ರಶ್ನೆಯಾಗಿದೆ.
ಹೊಂಡ ಬಿದ್ದು ಕಂಟಕವಾಗಿ ಕಾಡುತ್ತಿದೆ ದೇವಣಗಾಂವ ಸೊನ್ನ ಸೇತುವೆ: ಅಫಜಲಪುರ ತಾಲೂಕಿನ ಸೊನ್ನ ಹಾಗೂ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮಗಳ ಮಧ್ಯ ಭೀಮಾ ನದಿಗೆ ಅಡ್ಡಲಾಗಿ ದೊಡ್ಡ ಪ್ರಮಾಣದ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆ ಮೇಲಿನ ರಸ್ತೆ ಹದಗೆಟ್ಟಿದ್ದು ಎಲ್ಲೆಂದರಲ್ಲಿ ದೊಡ್ಡ ಹೊಂಡಗಳು ಬಿದ್ದಿವೆ. ಈ ಹೊಂಡ ಬಿದ್ದ ರಸ್ತೆಯಲ್ಲಿ ಸಂಚರಿಸುವುದು ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ಅಲ್ಲದೆ ಯಾವ ಸಂದರ್ಭದಲ್ಲಿ ಏನು ಅವಗಢ ಸಂಭವಿಸಲಿದೆಯೋ ತಿಳಿಯದಂತಾಗಿದೆ. ಸಿಂದಗಿ ತಾಲೂಕಿನ ವ್ಯಾಪ್ತಿಗೆ ಬರುವ ದೇವಣಗಾಂವ, ಅಫಜಲಪುರ ತಾಲೂಕಿನ ವ್ಯಾಪ್ತಿಗೆ ಬರುವ ಸೊನ್ನ ಮಧ್ಯ ಇರುವ ಈ ಸೇತುವೆ ಎರಡು ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿಯೂ ನಿಂತುಕೊಂಡಿದೆ. ಇದನ್ನು ಕೂಡಲೇ ರಿಪೇರಿ ಮಾಡಿಸದಿದ್ದರೆ ಸಾಕಷ್ಟು ಸಮಸ್ಯೆಗಳಾಗುವುದಂತು ಪಕ್ಕಾ.
ಮಣೂರ ಭೂಂಯಾರ ಸೇತುವೆಗೆ ತಡೆಗೋಡೆ ಇಲ್ಲದ್ದಕ್ಕೆ ಆತಂಕ: ಇನ್ನೂ ಪಕ್ಕದ ಇಂಡಿ ತಾಲೂಕಿನ ಭೂಂಯಾರ ದಿಂದ ಅಫಜಲಪುರ ತಾಲೂಕಿನ ಮಣೂರ ಗ್ರಾಮದ ಮಧ್ಯ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆ ನಿರ್ಮಿಸಿ ಅನೇಕ ವರ್ಷಗಳು ಕಳೆದರೂ ಇದುವರೆಗೂ ಸೇತುವೆಗೆ ತಡೆಗೋಡೆ ನಿರ್ಮಿಸಿಲ್ಲ. ಇದರಿಂದಾಗಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಮಳೆ ಹೆಚ್ಚಾಗಿ ನದಿಯಲ್ಲಿ ಪ್ರವಾಹ ಬಂದಾಗಲಂತೂ ಈ ಸೇತುವೆ ಭಯಂಕರವಾಗಿ ಕಾಣುತ್ತದೆ. ವಾಹನ ಸವಾರರು ಸ್ವಲ್ಪ ಮೈ ಮರೆತರೂ ಜೀವ ಹೋಗುವುದು ಪಕ್ಕಾ ಎನ್ನುವಂತಾಗಿದೆ.
ಒಟ್ಟಿನಲ್ಲಿ ಈ ಎರಡು ಸೇತುವೆಗಳು ಈಗ ರಿಪೇರಿ ಹಂತಕ್ಕೆ ಬಂದಿದ್ದು ಕೂಡಲೇ ಇಂಡಿ, ಸಿಂದಗಿ ಹಾಗೂ ಅಫಜಲಪುರ ಶಾಸಕರು ಮುತುವರ್ಜಿ ವಹಿಸಿ ಸೇತುವೆಗಳನ್ನು ಸರಿಪಡಿಸುವ ಕೆಲಸ ಮಾಡಬೇಕೆನ್ನುವುದು ವಾಹನ ಸವಾರರು, ಸಾರ್ವಜನಿಕರ ಒತ್ತಾಸೆಯಾಗಿದೆ.

” ಸೇತುವೆ ಮೇಲಿನ ರಸ್ತೆ ಹದಗೆಟ್ಟ ಕುರಿತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.”
– ಅಶೋಕ ಮನಗೂಳಿ
ಸಿಂದಗಿ ಶಾಸಕರು

” ಭೂಂಯಾರ, ಮಣೂರ ಮಧ್ಯದ ಸೇತುವೆ ತಡೆಗೋಡೆ ಇಲ್ಲದ್ದಕ್ಕೆ ಸ್ವಲ್ಪ ಮಟ್ಟಿನ ಸಮಸ್ಯೆ ಆಗುತ್ತಿದೆ. ಸೊನ್ನ ಬ್ಯಾರೇಜ್ ಎತ್ತರ ಹೆಚ್ಚಿಸಿದ್ದರಿಂದ ಭೂಂಯಾರ್ ಸೇತುವೆ ಮುಳುಗಡೆ ಲೆಕ್ಕದಲ್ಲಿ ಬರುತ್ತದೆ ಹೀಗಾಗಿ ಅದಕ್ಕೆ ತಡೆಗೋಡೆ ಕಟ್ಟಿಸಲಾಗುತ್ತಿಲ್ಲ. ಆದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಏನಾದರೂ ವ್ಯವಸ್ಥೆ ಮಾಡಿಸಲಾಗುತ್ತದೆ.”
– ಯಶವಂತ್ರಾಯಗೌಡ ಪಾಟೀಲ್
ಇಂಡಿ ಶಾಸಕರು

” ಸೊನ್ನ, ದೇವಣಗಾಂವ, ಭೂಂಯಾರ, ಮಣೂರ ಗ್ರಾಮಗಳ ನಡುವೆ ಇರುವ ಎರಡು ಸೇತುವೆಗಳ ರಿಪೇರಿ ಕುರಿತು ಇಂಡಿ, ಸಿಂದಗಿ ಶಾಸಕರೊಂದಿಗೆ ಚರ್ಚಿಸಿ, ಅಧಿಕಾರಿಗಳ ಜೊತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.”
– ಎಂ.ವೈ ಪಾಟೀಲ್
ಅಫಜಲಪುರ ಶಾಸಕರು

