ಮುದ್ದೇಬಿಹಾಳ ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಭರವಸೆ
ಮುದ್ದೇಬಿಹಾಳ: ಎಲ್ಲ ಸಾಹಿತಿಗಳ ಸಲಹೆ ಸೂಚನೆಗಳನ್ನು ತೆಗೆದುಕೊಂಡು ನಾನು ಮುಂದೆ ಸಾಗುವೆ. ನಿಮ್ಮೆಲ್ಲರ ಒಪ್ಪಿಗೆ ಇದ್ದರೆ ಡಿಶಂಬರ್ ಒಳಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡೋಣ ಎಂದು ಕಸಾಪ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಹಿತಿಗಳ ಸಲಹಾ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲರ ಸಲಹೆಗಳನ್ನು ತಲೆಬಾಗಿ ಸ್ವೀಕರಿಸುತ್ತೇನೆ. ತಮ್ಮೆಲ್ಲರನ್ನು ಕರೆದುಕೊಂಡೇ ಕನ್ನಡದ ತೇರನ್ನು ಎಳೆಯುತ್ತೇನೆ. ನನಗೆ ಜಾತಿ ಬೇಧ ಮಾಡೋದು ಗೊತ್ತಿಲ್ಲ. ನೇರವಾಗಿ ಮಾತನಾಡುವ ಸ್ವಭಾವ ನನ್ನದು. ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ ಸಿಗದವರಿಗೆ ಅವಕಾಶ ಕೊಡಿಸಲೆಂದು ನಾನು ಸಾಹಿತ್ಯ ಕ್ಷೇತ್ರಕ್ಕೆ ಬಂದವನು. ಸಧ್ಯ ತಾಲೂಕಿನ ಕನ್ನಡದ ತೇರನ್ನು ಎಳೆಯುವ ಅವಕಾಶ ಸಿಕ್ಕಿರೋದು ನನ್ನ ಪುಣ್ಯ. ನನಗೆ ಅವಕಾಶ ಇದೆ ಅಂತಾ ನಿಮ್ಮೆಲ್ಲರ ಅಪ್ಪಣೆ ಇಲ್ಲದೆ ನಾನು ಮುಂದೆ ಸಾಗೊಲ್ಲ. ನಿಮ್ಮ ಏನೇ ಸಲಹೆಗಳಿದ್ದರೂ ನನ್ನ ಜೊತೆ ಮುಕ್ತವಾಗಿ ಹಂಚಿಕೊಳ್ಳಿ ಎಂದರು.
ಹಿರಿಯ ಸಾಹಿತಿಗಳ ಮಾರ್ಗದರ್ಶನ ನನಗೆ ಅತ್ಯವಶ್ಯ. ಇಲ್ಲಿಯವರೆಗೆ ತೆರೆ ಮರೆಯಲ್ಲಿರುವ ಸಾಹಿತಿಗಳನ್ನು ಬೆಳಕಿಗೆ ತರೋದು ನನ್ನ ಕರ್ತವ್ಯ. ನಿಂತ ದತ್ತಿಗಳನ್ನು ವಾರಕ್ಕೆರಡರಂತೆ, ಉಳಿದ ತಾಲೂಕು ಸಮ್ಮೇಳನಗಳನ್ನ ಬಸರಕೋಡ, ತಂಗಡಗಿ ಭಾಗದಲ್ಲಿ ನಡೆಸಿಕೊಂಡು ಹೋಗೋಣ ಎಂದರು.
ಈ ವೇಳೆ ಹಿರಿಯ ಸಾಹಿತಿಗಳಾದ ಅಶೋಕ ಮಣಿ, ಪ್ರೊ.ಎಸ್.ಎಸ್.ಹೂಗಾರ, ಶಿವಪುತ್ರ ಅಜಮನಿ, ಐ.ಬಿ.ಹಿರೇಮಠ, ರುದ್ರೇಶ ಕಿತ್ತೂರ, ಎನ್.ಆರ್.ಮೊಕಾಶಿ ವಕೀಲರು, ಎಂ.ಎಂ.ಬೆಳಗಲ್ಲ, ಶಿಕ್ಷಕ ಎಚ್.ಆರ್.ಬಾಗವಾನ ಸಾಹಿತಿಗಳಾದ ಸಿದ್ದನಗೌಡ ಬಿಜ್ಜೂರ, ಪ್ರಭು ರಾರೆಡ್ಡಿ, ಪರಶುರಾಮ ಚೌಡಕೇರ, ಬಸವರಾಜ ನಾಗೂರ, ಸಿದ್ದಣ್ಣ ಹಡಲಗೇರಿ, ಮಕ್ತುಮಸಾಬ ಹಾಲ್ಯಾಳ, ಪತ್ರಕರ್ತ ಪರಶುರಾಮ ಕೊಣ್ಣೂರ ಮತ್ತೀತರರು ಮಾತನಾಡಿ ನಮ್ಮ ತಾಲೂಕಿನ ಕನ್ನಡದ ರಥವನ್ನು ಎಳೆಯುವ ಅದೃಷ್ಟ ಕ್ರಿಯಾಶೀಲ ವ್ಯಕ್ತಿಗೆ ಲಭಿಸಿರೋದು ಸಂತಸ ತಂದಿದೆ. ನಮ್ಮೂರು ಪ್ರತೀ ಕ್ಷೇತ್ರದಲ್ಲೂ ಏನೇ ಮಾಡಿದರೂ ಒಂದು ವಿಶಿಷ್ಟತೆಯನ್ನು ನಾಡಿಗೆ ಕೊಡುತ್ತೆ. ಇದು ಸಾಕಷ್ಟು ಬಾರಿ ಸಾಬೀತಾಗಿದೆ. ಎಲ್ಲ ಸಾಹಿತಿಗಳ, ಸಾಹಿತ್ಯಾಸಕ್ತರ, ಕನ್ನಡಾಭಿಮಾನಿಗಳ ಅನುಭವಗಳನ್ನು ಪಡೆದು ಕನ್ನಡದ ತೇರನ್ನು ಎಳೆಯಲು ಮುಂದಾಗಿರುವ ಅಧ್ಯಕ್ಷರು ಖಂಡಿತವಾಗಲೂ ಯಶಸ್ವಿಯಾಗುತ್ತಾರೆ ಎಂದರು.
ಈ ವೇಳೆ ಪ್ರಶಾಂತ ಕಾಳೆ, ಬಸಲಿಂಗಪ್ಪಣ್ಣ ರಕ್ಕಸಗಿ, ಎ.ಆರ್.ಮುಲ್ಲಾ, ಎಸ್.ಎಸ್.ಹುನಗುಂದ, ಬಿ.ವಿ.ಕೋರಿ, ಸದಾಶಿವ ಮಠ, ರಂಜಾನ ನದಾಫ್, ವಾಯ್.ಎಚ್.ವಿಜಯಕರ ಸೇರಿದಂತೆ ಮತ್ತೀತರರು ಇದ್ದರು.
” ಕಳೆದ ಎರಡು ಚುನಾವಣೆಗಳಲ್ಲಿ ಸಮಾನ ಮನಸ್ಕ ಸಾಹಿತಿಗಳು ಗುಂಪು ಕಟ್ಟಿ ಹೋರಾಡಿದ್ದೆವು. ಸಧ್ಯ ನಮ್ಮ ಗುಂಪಿನ ಸದಸ್ಯರೊಬ್ಬರು ತಾಲೂಕಿನ ಚುಕ್ಕಾಣಿ ಹಿಡಿದಿದ್ದು ಸಂತಸ ತಂದಿದೆ. ಅಧ್ಯಕ್ಷರು ನೀಡಿದ ಕೆಲಸಗಳನ್ನು ನಾವು ತನು, ಮನ, ಧನದಿಂದ ಮಾಡಲು ಸಿದ್ಧರಿದ್ದೇವೆ.”
– ಅಶೋಕ ಮಣಿ, ಹಿರಿಯ ಸಾಹಿತಿ
” ನಿರ್ಲಕ್ಷಕ್ಕೊಳಗಾದ ಸಾಹಿತಿಗಳನ್ನು ಹೊರತರಬೇಕು ಎಂದು ಹೋರಾಟ ಮಾಡಿದವರೇ ಇಂದು ಪರಿಷತ್ತಿನ ಚುಕ್ಕಾಣಿ ಹಿಡಿದಿರೋದು ನಿರ್ಲಕ್ಷಕ್ಕೊಳಗಾದ ಸಾಹಿತಿಗಳಿಗೆ ರೆಕ್ಕೆ ಪುಕ್ಕಗಳು ಬಂದಂತಾಗಿದೆ.”
– ಪ್ರೊ.ಐ.ಬಿ.ಹಿರೇಮಠ, ಹಿರಿಯ ಸಾಹಿತಿ

